ಸಾರಾಂಶ
ನಾಡಪ್ರಭು ಕೆಂಪೇಗೌಡರು ಒಂದು ಸಮುದಾಯಕ್ಕೆ, ಜಾತಿಗೆ ಸೀಮಿತವಾಗದೆ, ಇಡೀ ಸಮಾಜದ ಸರ್ವೊತೋಮುಖ ಅಭಿವೃದ್ಧಿಗೆ ಶ್ರಮಿಸಿದ ದೂರದೃಷ್ಟಿಯ ಮಹಾನ್ ನಾಯಕ
ಚಿಕ್ಕಬಳ್ಳಾಪುರ : ನಾಡಪ್ರಭು ಕೆಂಪೇಗೌಡರು ಒಂದು ಸಮುದಾಯಕ್ಕೆ, ಜಾತಿಗೆ ಸೀಮಿತವಾಗದೆ, ಇಡೀ ಸಮಾಜದ ಸರ್ವೊತೋಮುಖ ಅಭಿವೃದ್ಧಿಗೆ ಶ್ರಮಿಸಿದ ದೂರದೃಷ್ಟಿಯ ಮಹಾನ್ ನಾಯಕ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಒಕ್ಕಲಿಗರ ಸಂಘದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿ ಉದ್ಘಾಟಿಸಿ ಮಾತನಾಡಿ, ಬೆಂಗಳೂರು ನಗರ ಭವಿಷ್ಯತ್ತಿನಲ್ಲಿ ಯಾವ ರೀತಿ ಇರಬೇಕು ಎಂದು 16ನೇ ಶತಮಾನದಲ್ಲೇ ರೂಪುರೇಷೆ ತಯಾರಿಸಿ ಭದ್ರ ಬೂನಾದಿ ಹಾಕಿದ ದೊರೆ ಎಂದರು.
ವಿಶ್ವಸಂಸ್ಥೆ ಶ್ಲಾಘನೆ:
ಚಿಕ್ಕಬಳ್ಳಾಪುರ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಅಂತರ್ಜಲ ವೃದ್ಧಿಗೆ ಎಚ್.ಎನ್. ವ್ಯಾಲಿ, ಕೆ.ಸಿ ವ್ಯಾಲಿ ನೀರು ಪೂರೈಸುತ್ತಿರುವ ಬಗ್ಗೆ ವಿಶ್ವಸಂಸ್ಥೆಯ ತಂಡ ಇಲ್ಲಿಗೆ ಬಂದು ಅಧ್ಯಯನ ಮಾಡಿ ಇದೊಂದು ಚಮತ್ಕಾರ ಎಂದು ಶ್ಲಾಘಿಸಿದೆ. ಜೊತೆಗೆ ಬೇರೆ ನಗರಗಳಲ್ಲಿ ಈ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸಲಹೆ ನೀಡುವುದಾಗಿ ತಿಳಿಸಿದೆ ಎಂದರು.
ನಂದಿಬೆಟ್ಟ ರಸ್ತೆ ಅಭಿವೃದ್ಧಿ
ಜುಲೈ 2 ರಂದು ನಂದಿ ಗಿರಿಧಾಮದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡು ಈ ಭಾಗದ ಜಿಲ್ಲೆಗಳಿಗೆ ಹಲವು ಯೋಜನೆಗಳನ್ನು ಮುಖ್ಯಮಂತ್ರಿಗಳು ಘೋಷಿಸಲಿದ್ದಾರೆ. ನಂದಿ ಗಿರಿಧಾಮದ ರಸ್ತೆಯನ್ನು 9 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಚಿಂತನೆ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಪ್ರದೀಪ ಈಶ್ವರ ಅವರು ಮಾತನಾಡಿ, ಜಿಲ್ಲಾಡಳಿತ ಭವನದ ಆವರಣದಲ್ಲಿ ನಾಡ ಪ್ರಭು ಕೆಂಪೇಗೌಡರು, ಮಹಾತ್ಮ ಗಾಂಧೀಜಿ, ಡಾ. ಬಿ ಆರ್ ಅಂಬೇಡ್ಕರ್ ಹಾಗೂ ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ನಿರ್ಮಿಸಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ರಿಂಗ್ ರಸ್ತೆ ನಿರ್ಮಿಸಲು ಮನವಿ
ಮಾಜಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ಮಾತನಾಡಿ, ಚಿಕ್ಕಬಳ್ಳಾಪುರ ನಗರವನ್ನು ಸಹ ಯೋಜಿತವಾಗಿ ನಿರ್ಮಿಸಲು ನಗರದ ಸುತ್ತ ರಿಂಗ್ ರೋಡ್ ನಿರ್ಮಿಸಬೇಕು. ರಿಂಗ್ ರಸ್ತೆ ಸಂಪರ್ಕಕ್ಕೆ ಮುದ್ದೇನಹಳ್ಳಿ ಕೂಡ ಬರುವಂತಿರಬೇಕು ಎಂದರು.
ಹೂ ಮಾರುಕಟ್ಟೆಗೆ ಸೌಲಭ್ಯ
ಅದಿಚುಂನಗಿರಿ ಶಾಖಾ ಮಠದ ಕಾರ್ಯದರ್ಶಿ ಮಂಗಳನಾಥಸ್ವಾಮೀಜಿ ಉಪನ್ಯಾಸ ನೀಡಿ, ಕೆ ವಿ ಕ್ಯಾಂಪಸ್ ಬಳಿ ಇರುವ ತಾತ್ಕಾಲಿಕ ಹೂವಿನ ಮಾರುಕಟ್ಟೆಗೆ ಶೆಡ್ ಮತ್ತು ಶೌಚಾಲಯ ನಿರ್ಮಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದರು.
ಕೆಂಪೇಗೌಡರ ಪಲ್ಲಕ್ಕಿ ಮೆರವಣಿಗೆ
ಕಾರ್ಯಕ್ರಮಕ್ಕೂ ಮುನ್ನ ಸಚಿವರು ನಗರದ ಎಂ.ಜಿ ರಸ್ತೆಯಲ್ಲಿರುವ ಶ್ರೀ ಮರಳು ಸಿದ್ದೇಶ್ವರ ದೇವಸ್ಥಾನದ ಮುಂಭಾಗದಿಂದ ಶ್ರೀ ಕೆಂಪೇಗೌಡರ ಪಲ್ಲಕ್ಕಿ ಮತ್ತು ಜಾನಪದ ಕಲಾತಂಡದ ಮೆರವಣಿಗೆಗೆ ಚಾಲನೆ ನೀಡಿದರು. ಡೊಳ್ಳು ಕುಣಿತ, ಸೋಮನ ಕುಣಿತ, ವೀರಗಾಸೆ, ಮಹಿಳಾ ಮಣಿಗಳ ಪೂರ್ಣಕುಂಭ, ಆರತಿ ಹಾಗೂ ಪ್ರದರ್ಶನಗಳು ಜನರ ಮೆಚ್ಚುಗೆಗೆ ಪಾತ್ರವಾದವು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಪಂ ಸಿಇಒ ಡಾ.ವೈ.ನವೀನ್ ಭಟ್, ಎಸಿ ಡಿ.ಹೆಚ್. ಅಶ್ವಿನ್, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನಗಳ ಪ್ರಾಧಿಕಾರದ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್ ಕೇಶವರೆಡ್ಡಿ, ತಹಸೀಲ್ದಾರ್ ಅನಿಲ್, ಸಮುದಾಯದ ಮುಖಂಡರು ಇದ್ದರು.