ಸಾರಾಂಶ
ಪುತ್ತೂರು ಆಸುಪಾಸಿನ ಸಾರ್ವಜನಿಕ ಶ್ರೀ ಗಣೇಶೋತ್ಸವಗಳಲ್ಲಿ ಕಿಲ್ಲೆ ಮೈದಾನದ ಚೌತಿಗೆ ವಿಶೇಷ ಮಹತ್ವವಿದೆ. ೭ ದಿನ ನಿರಂತರ ಅನ್ನಸಂತರ್ಪಣೆ ನಡೆಯುವ ಗಣೇಶೋತ್ಸವ ಇದಾಗಿದ್ದು, ಇಲ್ಲಿನ ಚೌತಿಯಲ್ಲಿ ದೇವರಿಗೆ ದರ್ಶನ ಬಲಿ, ಮಹಾಗಣಪತಿ ಹೋಮ, ತುಲಾಭಾರ ಸೇವೆ ನಡೆಯುತ್ತದೆ. ಶೋಭಾಯಾತ್ರೆ ಹೊರಡುವ ಮೊದಲು ದೈವಗಳ ನೇಮೋತ್ಸವವೂ ನಡೆಯುವ ಅಪೂರ್ವ ಗಣೇಶೋತ್ಸವ ಇದಾಗಿದೆ.
ಕನ್ನಡಪ್ರಭ ವಾರ್ತೆ ಪುತ್ತೂರು
ಅತಿ ಹಿರಿಯ ಗಣೇಶೋತ್ಸವ ಎಂಬ ಕೀರ್ತಿಗೆ ಪಾತ್ರವಾಗಿರುವ, ಅನ್ನದಾನದ ಗಣಪ ಎಂಬ ಹೆಗ್ಗಳಿಕೆಯ ಪುತ್ತೂರು ಕಿಲ್ಲೆ ಮೈದಾನದ ೬೮ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಈ ಬಾರಿ ಮತ್ತಷ್ಟು ಸ್ವರ್ಣಾಭರಣಗಳ ಸಮರ್ಪಣೆಯಾಗಲಿದ್ದು, ೭ ದಿನಗಳ ಕಾಲ ಕಿಲ್ಲೆ ಮೈದಾನದಲ್ಲಿ ಆರಾಧನೆಗೊಳ್ಳಲಿರುವ ಮಹಾಗಣಪತಿಗೆ ಈ ಬಾರಿ ಸ್ವರ್ಣಲೇಪಿತ ಸೊಂಡಿಲು ಮತ್ತು ಕರ್ಣದ್ವಯಗಳು ಸಮರ್ಪಣೆಯಾಗಲಿವೆ.ಪುತ್ತೂರು ಆಸುಪಾಸಿನ ಸಾರ್ವಜನಿಕ ಶ್ರೀ ಗಣೇಶೋತ್ಸವಗಳಲ್ಲಿ ಕಿಲ್ಲೆ ಮೈದಾನದ ಚೌತಿಗೆ ವಿಶೇಷ ಮಹತ್ವವಿದೆ. ೭ ದಿನ ನಿರಂತರ ಅನ್ನಸಂತರ್ಪಣೆ ನಡೆಯುವ ಗಣೇಶೋತ್ಸವ ಇದಾಗಿದ್ದು, ಇಲ್ಲಿನ ಚೌತಿಯಲ್ಲಿ ದೇವರಿಗೆ ದರ್ಶನ ಬಲಿ, ಮಹಾಗಣಪತಿ ಹೋಮ, ತುಲಾಭಾರ ಸೇವೆ ನಡೆಯುತ್ತದೆ. ಶೋಭಾಯಾತ್ರೆ ಹೊರಡುವ ಮೊದಲು ದೈವಗಳ ನೇಮೋತ್ಸವವೂ ನಡೆಯುವ ಅಪೂರ್ವ ಗಣೇಶೋತ್ಸವ ಇದಾಗಿದೆ.ಹರಕೆಯ ಚಿನ್ನ ಬಳಕೆ:ಗಣೇಶ ಮೂರ್ತಿಗೆ ಬೆಳ್ಳಿಯ ಸೊಂಡಿಲು, ಕಿರೀಟ, ಕಿವಿ ಆಭರಣಗಳನ್ನು ದಿ.ಸುಧಾಕರ ಶೆಟ್ಟಿ ಅಧ್ಯಕ್ಷತೆ ಅವಧಿಯಲ್ಲೇ ಮಾಡಿಸಲಾಗಿತ್ತು. ಪ್ರಸ್ತುತ ಅವರ ಪುತ್ರ ಅಭಿಜಿತ್ ಶೆಟ್ಟಿ ದೇವತಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹತ್ತಾರು ವರ್ಷಗಳಿಂದ ದೇವರಿಗೆ ಹರಕೆರೂಪದಲ್ಲಿ ಬಂದಿದ್ದ ಚಿನ್ನದ ಹೂ ಮತ್ತಿತರ ಸೊತ್ತುಗಳನ್ನು ಕರಗಿಸಿ ವಿವಿಧ ವಿನ್ಯಾಸಗಳ ಮರು ಸೃಷ್ಟಿ ಮಾಡಿ ಬೆಳ್ಳಿಯ ಕಿರೀಟ, ಸೊಂಡಿಲು ಮತ್ತು ಕಿವಿಗಳಿಗೆ ಜೋಡಿಸಲಾಗಿದೆ. ಹೀಗಾಗಿ ಈ ಆಭರಣ ಗಣಪನ ಮೆರುಗು ಇನ್ನಷ್ಟು ಹೆಚ್ಚಿದೆ.ದೇವರಿಗೆ ಅರ್ಪಣೆಯಾಗಿರುವ ಚಿನ್ನದ ಸರ ಮತ್ತಿತರ ದೊಡ್ಡ ಗಾತ್ರದ ಆಭರಣಗಳನ್ನು ಯಥಾಪ್ರಕಾರ ಉಳಿಸಿಕೊಳ್ಳಲಾಗಿದೆ. ಸಣ್ಣ ಪುಟ್ಟ ಸ್ವರ್ಣ ವಸ್ತುಗಳನ್ನಷ್ಟೇ ಬಳಸಿಕೊಂಡು ದೇವರ ಕಿರೀಟ, ಸೊಂಡಿಲ ಕವಚ, ಕಿವಿ ಕವಚಕ್ಕೆ ಸ್ವರ್ಣ ಲೇಪನ ಮಾಡಲಾಗಿದೆ ಎಂದು ದೇವತಾ ಸಮಿತಿ ಅಧ್ಯಕ್ಷ ಅಭಿಜಿತ್ ಶೆಟ್ಟಿ ತಿಳಿಸಿದ್ದಾರೆ.