ಸಾರಾಂಶ
ಕಿನ್ನಿಗೋಳಿ ಸಮೀಪದ ಗುತ್ತಕಾಡು ಶಾಲಾ ಮೈದಾನದಲ್ಲಿ ಕಿನ್ನಿಗೋಳಿ ಅಟೋ ರಿಕ್ಷಾ ಮಾಲಕರ ಮತ್ತು ಚಾಲಕರ ಸಂಘದ 45ನೇ ವಾರ್ಷಿಕೋತ್ಸವ ಮತ್ತು ಸೇವಾ ಸಹಾಯರ್ಥವಾಗಿ ರಿಕ್ಷಾ ಮಾಲಕರು ಮತ್ತು ಚಾಲಕರಿಗಾಗಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಅಜಾದ್ ಆಟೋ ತಂಡ ಉಳ್ಳಾಲ ಪ್ರಥಮ, ಆಟೋ ಫ್ರೆಂಡ್ಸ್ ಉಳ್ಳಾಲ ದ್ವಿತೀಯ ಪ್ರಶಸ್ತಿ ಪಡೆದುಕೊಂಡವು.
ಕನ್ನಡಪ್ರಭ ವಾರ್ತೆ ಮೂಲ್ಕಿ
ರಸ್ತೆಯಲ್ಲಿ ಅಪಘಾತ ಸಂಭವಿಸಿದಾಗ ತುರ್ತಾಗಿ ಧಾವಿಸುವ ರಿಕ್ಷಾ ಚಾಲಕರ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ಉದ್ಯಮಿ ದಿವಾಕರ ಕರ್ಕೇರಾ ಹೇಳಿದ್ದಾರೆ.ಕಿನ್ನಿಗೋಳಿ ಸಮೀಪದ ಗುತ್ತಕಾಡು ಶಾಲಾ ಮೈದಾನದಲ್ಲಿ ಕಿನ್ನಿಗೋಳಿ ಅಟೋ ರಿಕ್ಷಾ ಮಾಲಕರ ಮತ್ತು ಚಾಲಕರ ಸಂಘದ 45ನೇ ವಾರ್ಷಿಕೋತ್ಸವ ಮತ್ತು ಸೇವಾ ಸಹಾಯರ್ಥವಾಗಿ ರಿಕ್ಷಾ ಮಾಲಕರು ಮತ್ತು ಚಾಲಕರಿಗಾಗಿ ನಡೆದ ಕ್ರಿಕೆಟ್ ಪಂದ್ಯಾಟ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಆಟೋ ಮಾಲಕ ಮತ್ತು ಚಾಲಕರಿಗೆ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಅಜಾದ್ ಆಟೋ ತಂಡ ಉಳ್ಳಾಲ ಪ್ರಥಮ, ಆಟೋ ಫ್ರೆಂಡ್ಸ್ ಉಳ್ಳಾಲ ದ್ವಿತೀಯ ಪ್ರಶಸ್ತಿ ಪಡೆದುಕೊಂಡವು. ಅಜಾದ್ ತಂಡದ ಮೈಪುಲ್ ತಂಡ ಶ್ರೇಷ್ಠ , ಉಳ್ಳಾಲ ತಂಡದ ವಿರಾಜ್ ಸರಣಿ ಶ್ರೇಷ್ಠ , ಅಫ್ಲ್ ಉತ್ತಮ ಎಸೆತಗಾರ , ಸಹೀರ್ ಉತ್ತಮ ದಾಂಡಿಗ ಪ್ರಶಸ್ತಿ ನಗದು ಪುರಸ್ಕಾರ ಪಡೆದುಕೊಂಡರು.ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಂಗಳೂರಿನ ನೇತ್ರಾವತಿ ಆಟೋ ಯೂನಿಯನ್ ವೆಂಕಟೇಶ ನಿರೊಳಿಕೆ, ಆಸರೆ ಗೆಳೆಯರ ಬಳಗದ ಹೇಮಂತ್ ಕುಮಾರ್, ಶ್ರೀ ವೈದ್ಯನಾಥ ಸೇವಾ ಬಳಗದ ಶಿವಪ್ರಸಾದ್ ಗುತ್ತ ಕಾಡು, ಸಮಾಜ ಸೇವಕ ಶಶಿಕಾಂತ್ ರಾವ್ ಏಳತ್ತೂರು ಅವರನ್ನು ಗೌರವಿಸಲಾಯಿತು.
ಸುಮಾರು 7 ಜನರಿಗೆ ಆರೋಗ್ಯ ಶಿಕ್ಷಣಕ್ಕೆ ನೆರವಿನ ಸಹಾಯ ಹಸ್ತ ನೀಡಲಾಯಿತು. ಸಂಸ್ಥೆಯ ಗೌರವಾಧ್ಯಕ್ಷ ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು. ಬರ್ಕೆಮನೆ ಶಿಮಂತೂರು ಜಗನ್ನಾಥ ಕರ್ಕೇರಾ, ಉದ್ಯಮಿ ಲೀಲಾಧರ ಬಂಗೇರ ಎಸ್. ಕೋಡಿ, ಗುತ್ತಿಗೆದಾರ ಟಿ. ಎ. ಹನೀಫ್, ಮೂಲ್ಕಿ ರಿಕ್ಷಾ ಯೂನಿಯನ್ ನ ಶರೀಫ್ ಕಿಲ್ಪಾಡಿ, ಕಿನ್ನಿಗೋಳಿ ಸಂಘದ ಅಧ್ಯಕ್ಷ ದಾವೂದ್ ಕಲ್ಕರೆ, ವೀಕ್ಷಕ ವಿವರಣೆಗಾರ ಶ್ರೀಶ ಸರಾಫ್ ಐಕಳ್ ಮತ್ತಿತತರು ಇದ್ದರು.ಕೋಶಾಧಿಕಾರಿ ಶಶಿಕಾಂತ್ ರಾವ್ ಎಳತ್ತೂರು ಸ್ವಾಗತಿಸಿದರು. ಶ್ರೀಶ ಸರಾಫ್ ಐಕಳ ಕಾರ್ಯಕ್ರಮ ನಿರೂಪಿಸಿದರು.