ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ಸಂಯೋಜಿತ ಕುದುರೆಮುಖ ಮಜ್ದೂರ್ ಸಂಘ ವತಿಯಿಂದ ಕೆಐಒಸಿಎಲ್ ನೌಕರರ ವಿವಿಧ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶನಿವಾರ ತಣ್ಣೀರುಬಾವಿ ಕೆಐಒಸಿಎಲ್ ಮುಖ್ಯ ದ್ವಾರದ ಎದುರು ಶಾಂತಿಯುತ ಧರಣಿ ಸತ್ಯಾಗ್ರಹ ನಡೆಯಿತು.

ಮಂಗಳೂರು: ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ಸಂಯೋಜಿತ ಕುದುರೆಮುಖ ಮಜ್ದೂರ್ ಸಂಘ ವತಿಯಿಂದ ಕೆಐಒಸಿಎಲ್ ನೌಕರರ ವಿವಿಧ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶನಿವಾರ ತಣ್ಣೀರುಬಾವಿ ಕೆಐಒಸಿಎಲ್ ಮುಖ್ಯ ದ್ವಾರದ ಎದುರು ಶಾಂತಿಯುತ ಧರಣಿ ಸತ್ಯಾಗ್ರಹ ನಡೆಯಿತು. ನೂರಾರು ಕಾರ್ಮಿಕರು, ವರ್ಗಾವಣೆಗೊಂಡ ನೌಕರರ ಕುಟುಂಬ ಸದಸ್ಯರು ಹಾಗೂ ಬಿಎಂಎಸ್ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.

ಧರಣಿ ಉದ್ದೇಶಿಸಿ ಮಾತನಾಡಿದ ಭಾರತೀಯ ಮಜ್ದೂರ್ ಸಂಘದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್, ಕೆಐಒಸಿಎಲ್ ನ್ನು ಎನ್‌ಎಂಡಿಸಿ ಜೊತೆ ವಿಲೀನಗೊಳಿಸುವುದು, ದೇವದಾರಿ ಕ್ಯಾಪ್ಟಿವ್ ಗಣಿ ಯೋಜನೆಯನ್ನು ತಕ್ಷಣ ಆರಂಭಿಸುವುದು, ವೇತನ ಪರಿಷ್ಕರಣೆ ಜಾರಿಯಾಗುವವರೆಗೆ ಮಧ್ಯಂತರ ಪರಿಹಾರ ನೀಡುವುದು ಸೇರಿದಂತೆ ಸಂಘದ ಪ್ರಮುಖ ಬೇಡಿಕೆಗಳನ್ನು ವಿವರಿಸಿದರು.

ಬಿಎಂಎಸ್ ರಾಜ್ಯ ಉಪಾಧ್ಯಕ್ಷ ಸತೀಶ್ ಶೆಟ್ಟಿ, ಕುದುರೆಮುಖ ಮಜ್ದೂರ್ ಸಂಘದ ಅಧ್ಯಕ್ಷ ಸುರೇಶ್ ಕರ್ಕೇರ, ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್, ಬಿಎಂಎಸ್ ಹಿರಿಯ ಮುಖಂಡ ವಿಶ್ವನಾಥ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ರೋಹಿತಾಶ್ವ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲ ಕೃಷ್ಣ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ಮನಿಹಳ್ಳ,ಜಿಲ್ಲಾ ಪದಾಧಿಕಾರಿ ವಿ. ಸುಧೀಂದ್ರ,*ಕುದುರೆಮುಖ ಮಜ್ದೂರ್ ಸಂಘದ ಪದಾಧಿಕಾರಿಗಳು, ವರ್ಗಾವಣೆಗೊಂಡ ನೌಕರರ ಕುಟುಂಬ ಸದಸ್ಯರು ಹಾಗೂ ನೂರಾರು ಕಾರ್ಮಿಕರು ಇದ್ದರು. ಕುದುರೆಮುಖ ಮಜ್ದೂರ್ ಸಂಘದ ಕಾರ್ಯಾಧ್ಯಕ್ಷ ಭಗವಾನ್ ದಾಸ್ ನಿರೂಪಿಸಿದರು.