ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಬರಹಗಾರ ಫ್ಲೊಯ್ಡ್ ಕಿರಣ್ ಮೊರಾಸ್ ಅವರಿಗೆ ಲಿಯೊ ರೊಡ್ರಿಗಸ್ ದತ್ತಿ ಕಿಟಾಳ್ ಯುವ ಪುರಸ್ಕಾರ ಪ್ರದಾನ ಕಾರ್ಯಕ್ರಮ ನಗರದ ಎಂ.ಸಿ.ಸಿ. ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ನಡೆಯಿತು.ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಸಾಹಿತಿಗಳನ್ನು ಸಮಾಜ ಸುಧಾರಣೆಯ ಸೂತ್ರದಾರರು ಎನ್ನಬಹುದು. ಸಾಹಿತ್ಯ ಮತ್ತು ಸಮಾಜ ಬೆಳೆಯಲು ವಿಮರ್ಶೆ ಬಹಳ ಮುಖ್ಯ. ನಾವೆಲ್ಲರೂ ವಿಮರ್ಶೆಯನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು ಎಂದು ಅಭಿಪ್ರಾಯಪಟ್ಟರು.
ಪ್ರಶಸ್ತಿ ಪೋಷಕರಾದ ಲಿಯೊ ರೊಡ್ರಿಗಸ್ ಅವರು ಅಬುದಾಭಿಯಿಂದ ವಿಡಿಯೊ ಸಂದೇಶದ ಮೂಲಕ ಪ್ರಶಸ್ತಿ ವಿಜೇತರಿಗೆ ಶುಭ ಹಾರೈಸಿದರು.ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಮಾತನಾಡಿ, ಲಿಯೊ ರೊಡ್ರಿಗಸ್ ಅವರು 10 ವರ್ಷಗಳಿಂದ ಯುವ ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನೀಡುತ್ತಿರುವ ಕಿಟಾಳ್ ಯುವ ಪುರಸ್ಕಾರವು ಕೊಂಕಣಿ ಸಾಹಿತ್ಯ ಮತ್ತು ಭಾಷೆಯನ್ನು ಬೆಳೆಸಿದೆ. ಈ ಹಿಂದೆ ಯುವ ಪುರಸ್ಕಾರ ಪಡೆದವರು ಇಂದು ಅಗ್ರ ಶ್ರೇಣಿಯ ಸಾಹಿತಿಗಳಾಗಿ ಮಿಂಚುತ್ತಿದ್ದಾರೆ ಎಂದರು.
ವಿಶನ್ ಕೊಂಕಣಿ ಪುಸ್ತಕ ಪ್ರಾಧಿಕಾರದ ಪ್ರವರ್ತಕ ಮೈಕಲ್ ಡಿಸೋಜ, ಯುವ ಉದ್ಯಮಿ ರೋಹನ್ ಮೊಂತೆರೊ, ಉದ್ಯಮಿ ರಮೇಶ್ ನಾಯ್ಕ್, ಮುಖಂಡರಾದ ಪೀಯೂಸ್ ಎಲ್. ರೊಡ್ರಿಗಸ್, ನವೀನ್ ಆರ್. ಡಿಸೋಜ, ಮಾರ್ಸೆಲ್ ಮೊಂತೇರೊ ಮತ್ತಿತರರು ಇದ್ದರು.ಕಿಟಾಳ್ ಅಂತರ್ಜಾಲ ಸಾಹಿತ್ಯ ಪತ್ರಿಕೆ ಸಂಪಾದಕ ಎಚ್.ಎಂ. ಪೆರ್ನಾಲ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸಹಾಯಕ ಸಂಪಾದಕ ಕವಿ ವಿಲ್ಸನ್ ಕಟೀಲ್ ಪ್ರಶಸ್ತಿ ವಿಜೇತರ ಪರಿಚಯ ಮಾಡಿದರು. ಆಯ್ಕೆ ಸಮಿತಿ ಅಧ್ಯಕ್ಷ ಕವಿ ಟೈಟಸ್ ನೊರೊನ್ಹಾ ವಂದಿಸಿದರು. ಯುವಕವಿ ವಿಲ್ಸನ್ ಕಿನ್ನಿಗೋಳಿ ನಿರೂಪಿಸಿದರು.