ಮಂಗಳೂರು: ವೈದ್ಯರ ದಿನಾಚರಣೆ ಪ್ರಯುಕ್ತ ಗ್ರಾಮೀಣ ಮತ್ತು ನಗರದ ಹೊರವಲಯದ ಪ್ರದೇಶಗಳಲ್ಲಿ ಸಮಾಜದ ಆರೋಗ್ಯ ರಕ್ಷಣೆಗೆ ಶ್ರಮಿಸುತ್ತಿರುವ ವೈದ್ಯರ ಸನ್ಮಾನ ಕಾರ್ಯಕ್ರಮ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ಕೆಎಂಸಿ ಆಸ್ಪತ್ರೆಯಲ್ಲಿ ನಡೆಯಿತು.
ಮಂಗಳೂರು ಕೆಎಂಸಿ ಆಸ್ಪತ್ರೆ, ಫ್ಯಾಮಿಲಿ ಡಾಕ್ಟರ್ಸ್ ಅಸೋಸಿಯೇಷನ್ (ದಕ್ಷಿಣ ಕನ್ನಡ ಶಾಖೆ) ಮತ್ತು ಆಯುಷ್ ಫೆಡರೇಶನ್ ಆಫ್ ಇಂಡಿಯಾ (ದಕ್ಷಿಣ ಕನ್ನಡ ಶಾಖೆ) ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಎಂಎಎಚ್ಇ) ಮಂಗಳೂರು ಕ್ಯಾಂಪಸ್ನ ಪ್ರೊ.ವೈಸ್ ಚಾನ್ಸಲರ್ ಡಾ.ದಿಲೀಪ್ ಜಿ.ನಾಯಕ್ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಕೇಕ್ ಕತ್ತರಿಸಿ, ವಿಶೇಷ ಸೇವೆ ಸಲ್ಲಿಸಿರುವ ವೈದ್ಯರನ್ನು ಸನ್ಮಾನಿಸಲಾಯಿತು.ಅಶೋಕನಗರದ ಡಾ.ಎಸ್.ಶ್ರೀಕಾಂತ್ ಶೆಣೈ, ಶಿರ್ತಾಡಿಯ ಡಾ.ಕೆ.ಕೃಷ್ಣರಾಜ್ ಭಟ್, ಶಕ್ತಿನಗರದ ಡಾ.ಕೃಷ್ಣ ಎಂ. ಗೋಖಲೆ, ಬೆಳ್ತಂಗಡಿಯ ಡಾ.ಡೆಂಜಿಲ್ ಜಾನ್ ನೊರೊನ್ಹಾ, ಸುಳ್ಯದ ಡಾ.ವೆಂಕಟಕೃಷ್ಣ ಭಟ್ ಎಸ್., ಕಾಸರಗೋಡಿನ ಡಾ. ಕೃಷ್ಣ ಭಟ್ ಸಿ., ಕಾಸರಗೋಡಿನ ಡಾ.ಹರಿಕಿರಣ್ ಟಿ.ಬಂಗೇರ, ತಳಿಪರಂಬದ ಡಾ.ಚಾರ್ಲ್ಸ್ ಎಸ್.ಮಾನಿಯನ್, ನ್ಯೂ ಮಂಗಳೂರು ಪೋರ್ಟ್ ಅಥಾರಿಟಿಯ ಮುಖ್ಯ ವೈದ್ಯಾಧಿಕಾರಿ ಡಾ.ಸುರೇಖಾ ಎನ್.ಹೊಸ್ಕೇರಿ ಅವರನ್ನು ಅತ್ಯುತ್ತಮ ವೈದ್ಯಕೀಯ ಸೇವೆಗಾಗಿ ಸನ್ಮಾನಿಸಲಾಯಿತು.ಮಂಗಳೂರು ಕೆಎಂಸಿ ಆಸ್ಪತ್ರೆಯ ಕ್ಲಸ್ಟರ್ ನಿರ್ದೇಶಕ ಪ್ರಮೋದ್ ಕುಂದರ್ ಮಾತನಾಡಿ, ವೈದ್ಯರು ಗುಣಮಟ್ಟದ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿದ್ದಾರೆ. ಅವರ ಸೇವೆಯನ್ನು ಗೌರವಿಸುವುದು ಹಾಗೂ ಅವರೊಂದಿಗೆ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವುದು ನಮ್ಮ ಹೆಮ್ಮೆ ಎಂದರು.ಫ್ಯಾಮಿಲಿ ಡಾಕ್ಟರ್ಸ್ ಅಸೋಸಿಯೇಷನ್ ಮಂಗಳೂರು ಅಧ್ಯಕ್ಷ ಡಾ.ಸದಾಶಿವ ಪೋಲನಾಯ, ಕಾರ್ಯದರ್ಶಿ ಡಾ.ಜಿ.ಕೆ. ಭಟ್ ಸಂಕಬಿತ್ಲು, ಆಯುಷ್ ಫೆಡರೇಷನ್ ಆಫ್ ಇಂಡಿಯಾ (ದಕ್ಷಿಣ ಕನ್ನಡ ಶಾಖೆ) ಅಧ್ಯಕ್ಷ ಡಾ.ಕೃಷ್ಣ ಗೋಖಲೆ, ಡಾ. ಸುರೇಶ್ ನೆಗಳಗುಳಿ ಉಪಸ್ಥಿತರಿದ್ದರು.
ಆಯುಷ್ ಫೆಡರೇಷನ್ ಆಫ್ ಇಂಡಿಯಾ (ದಕ್ಷಿಣ ಕನ್ನಡ ಶಾಖೆ), ಫ್ಯಾಮಿಲಿ ಡಾಕ್ಟರ್ಸ್ ಅಸೋಸಿಯೇಷನ್ (ದಕ್ಷಿಣ ಕನ್ನಡ ಶಾಖೆ), ವಿವಿಧ ವಿಭಾಗಗಳ ಮುಖ್ಯಸ್ಥರು (ಎಚ್ಒಡಿಗಳು) ಹಾಗೂ ಇತರ ವೈದ್ಯಕೀಯ ವೃತ್ತಿಪರರು ಸೇರಿದಂತೆ 150ಕ್ಕೂ ಹೆಚ್ಚು ವೈದ್ಯರು ಭಾಗವಹಿಸಿದ್ದರು.