ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ದೇಶದ ಚರಿತ್ರೆ ತಿಳಿಯುವ ಮೊದಲು ಸ್ಥಳೀಯ ಇತಿಹಾಸ, ಭೌಗೋಳಿಕ ಹಿನ್ನೆಲೆ, ಸಂಸ್ಕೃತಿ, ಪರಿಸರದ ಜತೆ ಮಣ್ಣಿನ ಸೊಗಡು ಮೊದಲು ಅರಿತುಕೊಳ್ಳುವ ಅವಶ್ಯಕತೆ ಇದೆ ಎಂದು ಸಾಮಾಜಿಕ ಚಿಂತಕ, ರಂಗ ಕಲಾವಿದ ದೇವೇಂದ್ರ ಬೆಳೆಯೂರು ಹೇಳಿದರು.ತಾಲೂಕಿನ ಹುಣವಳ್ಳಿ ಗ್ರಾಮದಲ್ಲಿ ಸರ್ವೋದಯ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ಹಮ್ಮಿಕೊಂಡಿದ್ದ ಕಲಾವಿದ ಪಿ.ಜಿ.ಮಹಾಬಲ ಗಿರಿಯಪ್ಪ ಹುಣವಳ್ಳಿ ಸ್ಮರಣಾರ್ಥ ಕೊಡಮಾಡುವ ಮಹಾಬಲ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ನಾಟಕ ಪ್ರದರ್ಶನದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಇಂದು ಅಂತರ್ಜಾಲದಲ್ಲಿ ಎಲ್ಲವೂ ಲಭ್ಯವಿರುವುದರಿಂದ ನಮ್ಮ ಪರಂಪರೆ, ಇತಿಹಾಸ, ಸಂಸ್ಕೃತಿ ಸ್ಥಳದಲ್ಲಿಯೇ ರಚನಾತ್ಮಕ ಜ್ಞಾನ ಅರಿಯಲು ಸಾಧ್ಯವಾಗುತ್ತಿಲ್ಲ. ಎಲ್ಲವೂ ಸಿದ್ಧ ವಸ್ತುಗಳಾಗಿವೆ ಎಂದ ಅವರು, ವಿಪರ್ಯಾಸವೆಂದರೆ ಇಂದು ಸ್ಥಳೀಯ ಪ್ರಾದೇಶಿಕ ಅನ್ವೇಷಕರು ವಿರಳವಾಗಿದ್ದಾರೆ. ಬಿಚ್ಚುಗತ್ತಿಯವರಂತ ಸಂಪನ್ಮೂಲ ವ್ಯಕ್ತಿಗಳು ಬೆರಳೆಣಿಕೆಯಲ್ಲಿದ್ದು ಅಂತವರ ಸ್ಥಳೀಯರೇ ಗುರುತಿಸಿ ಗೌರವಿಸುವುದು ಶ್ಲಾಘನೀಯ ಎಂದರು.
ಎರಡು ದಶಕಗಳಿಗಿಂತಲೂ ಹಿಂದೆ ಅಪಾರ ಜನಾಕರ್ಷಣೆ ಪಡೆದು ಸಾಗರ ಭಾರತಿ ಕಲಾವಿದರ ಮುನ್ನೆಲೆಗೆ ತಂದು ೧೫೦ಕ್ಕೂ ಹೆಚ್ಚು ಪ್ರದರ್ಶನ ನಡೆಸಿದ ಸಂಗ್ಯಾಬಾಳ್ಯ ಜಾನಪದ ನಾಟಕ ಮತ್ತೆ ಸೊರಬದ ಕಲಾವಿದ ಗೆಳೆಯರಿಂದ ಹುಣವಳ್ಳಿ ಗ್ರಾಮದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಪ್ರಶಂಸನೀಯ. ಬಯಲು ಸೀಮೆಯ ಕಥಾನಕ ಮಲೆನಾಡಿನ ಜನತೆಯ ಗಮನಸೆಳೆದಿದ್ದು ಸೊರಬದ ಕಲಾವಿದರು ಹಿನ್ನೆಲೆ ಗಾಯನಕ್ಕೆ ಅಭಿನಯಿಸಿದ ಪರಿ ಆಶಾದಾಯಕ. ಇನ್ನಷ್ಟು ಪ್ರದರ್ಶನದ ಮೂಲಕ ಪ್ರಹಸನ ಇನ್ನಷ್ಟು ಗಟ್ಟಿಗೊಳ್ಳಲಿ ಎಂದು ಆಶಿಸಿದರು.ಮಹಾಬಲ ಪ್ರಶಸ್ತಿ ಪ್ರದಾನ:ನಂತರ ಇತಿಹಾಸ ಸಂಶೋಧಕ, ಪರಿಸರ ಚಿಂತಕ ಶ್ರೀಪಾದ ಬಿಚ್ಚುಗತ್ತಿ ಅವರಿಗೆ ಮಹಾಬಲ ಪ್ರಶಸ್ತಿ ಪ್ರದಾನ ಮಾಡಲಾಯಿತು. ಟ್ರಸ್ಟಿನ ಪಿ.ಎನ್. ಶ್ರೀಧರರಾವ್ ಪಡವಗೋಡು ಅಧ್ಯಕ್ಷತೆ ವಹಿಸಿದ್ದರು. ನಂತರ ನಡೆದ ಸಂಗ್ಯಾಬಾಳ್ಯಾ ನಾಟಕದಲ್ಲಿ ಸಂಗ್ಯಾನ ಪಾತ್ರದಲ್ಲಿ ಸಾಹಿತಿ ಬಿದರಗೆರೆ ರೇವಣಪ್ಪ, ಬಾಳ್ಯನ ಪಾತ್ರದಲ್ಲಿ ಹರ್ಷ ಹೆಗಡೆ, ಈರ್ಯ ಮತ್ತು ಮಾರ್ವಾಡಿ ಪಾತ್ರದಲ್ಲಿ ಸುಬ್ರಹ್ಮಣ್ಯ ಗುಡಿಗಾರ್, ಇರುಪಾಕ್ಷಿಯಾಗಿ ವಿ.ಲಕ್ಷ್ಮಣ, ಬಸವಂತನಾಗಿ ವಕೀಲ ಡಾಕಪ್ಪ, ಸಂದೇಶ ಮಳಲಗದ್ದೆ, ಪೂಜಾರಿಯಾಗಿ ವಕೀಲ ಗೋಪಾಲ್, ಪಾರಮ್ಮಳಾಗಿ ಸುಶೀಲಮ್ಮ, ಗಂಗೆ ಪಾತ್ರದಲ್ಲಿ ಕಪ್ಪಗಳಲೆ ರೇಣುಕಮ್ಮ ಅಭಿನಯಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಶಾಂತ ಹುಣವಳ್ಳಿ, ಸಾವಿತ್ರಿ, ಕೃತ್ತಿಕಾ, ಶಶಿಕಲಾ, ಕೋಮಲ, ಕ್ಯಾಷಿಯೋ ವಾದಕರಾಗಿ ಶಿಕ್ಷಕ ಈರಪ್ಪ, ತಬಲಾ ವಾದಕರಾಗಿ ಷಣ್ಮುಖ ನಿರ್ವಹಿಸಿದರು.ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಬಿ.ಎನ್. ನಾಗರಾಜ್, ಎಚ್.ಎಂ.ಪ್ರಶಾಂತ್, ಶ್ರೀಕಾಂತ್, ಮಾಲಿನಿ, ಧನ್ವಿ, ಎಚ್.ಎಸ್. ಮಂಜಪ್ಪ, ಡಾ ಜ್ಞಾನೇಶ್, ಕಟ್ಟಿನಕೆರೆ ಸೀತಾರಾಮಯ್ಯ, ದಿವಾಕರ ಭಾವೆ, ಷಣ್ಮುಖಾಚಾರ್, ಮಲ್ಲಪ್ಪ ಅರಣ್ಯಾಧಿಕಾರಿ, ಪತ್ರಕರ್ತ ಬಿ.ಎನ್.ಸಿ ರಾವ್, ವೇಣುಗೋಪಾಲ್, ವಾಮನ ಭಟ್ ಭಾವೆ, ಭಾರ್ಗವ ಉಳವಿ, ಸಾಗರ ಭಾರತಿ ಕಲಾವಿದರು, ಗ್ರಾಮಸ್ಥರು, ರಂಗಕಲಾಸಕ್ತರು ಇದ್ದರು.