ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ರಾಷ್ಟ್ರೀಯ ಮಧುಮೇಹ ವೈದ್ಯಕೀಯ ಸಮ್ಮೇಳನದಲ್ಲಿ ಹಲವಾರು ವಿಷಯಗಳ ಕುರಿತು ಚರ್ಚೆಯಾಗಿದ್ದು, ಜ್ಞಾನ ವೃದ್ದಿಯಾಗಿದೆ. ಇದರಿಂದಾಗಿ ನಮ್ಮ ಭಾಗದ ವೈದ್ಯರು ಜನರಿಗೆ ಇನ್ನೂ ಉತ್ತಮ ಚಿಕಿತ್ಸೆ ಕೊಡಬಹುದಾಗಿದೆ ಎಂದು ಸಮ್ಮೇಳನದ ಸಂಘಟನಾ ಅಧ್ಯಕ್ಷ ಡಾ.ಬಾಬುರಾಜೇಂದ್ರ ನಾಯಿಕ ಹೇಳಿದರು.ನಗರದ ಬಿಎಲ್ಡಿಇ ಸಂಸ್ಥೆಯ ಎಂಜನಿಯರಿಂಗ್ ಮಹಾವಿದ್ಯಾಲಯದಲ್ಲಿ ಶ್ರೀ ತುಳಸಿಗಿರೀಶ ಮಧುಮೇಹ ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ನೇತೃತ್ವದಲ್ಲಿ, ಶ್ರೀ ತುಳಸಿಗಿರೀಶ ಫೌಂಡೇಶನ್, ಎಸಿಪಿ ಇಂಡಿಯಾ ಚಾಪ್ಟರ್, ಐಎಸಿಸಿ ಮತ್ತು ಭಾರತೀಯ ವೈದ್ಯಕೀಯ ಸಂಘ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮಧುಮೇಹ ವೈದ್ಯಕೀಯ ಸಮ್ಮೇಳನದ ಸಮಾರೋಪದಲ್ಲಿ ಅವರು ಮಾತನಾಡಿದರು. ಎರಡು ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ಭಾರತದ ವಿವಿಧ ಕಡೆಯಿಂದ ಆಗಮಿಸಿದ್ದ ಖ್ಯಾತ ವೈದ್ಯರು ತಮ್ಮ ವಿಷಯಗಳನ್ನು ಮಂಡಿಸಿ ವಿಚಾರ ವಿನಿಮಯ ಮಾಡಿಕೊಂಡಿದ್ದು ಎಲ್ಲರಿಗೂ ಅನುಕೂಲವಾಗಿದೆ ಎಂದರು.
ರಾಷ್ಟ್ರೀಯ ಮಧುಮೇಹ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಡಾ.ಅನುಜ್ ಮಹೇಶ್ವರಿ ಮಾತನಾಡಿ, ಮಧುಮೇಹ ಮತ್ತು ಆಹಾರ ಪದ್ಧತಿ ಹೇಗಿರಬೇಕು ಎಂಬುದರ ಕುರಿತು ತಿಳಿಸಿದರು. ಸಮ್ಮೇಳನದಲ್ಲಿ ಡಾ.ಅನುಜ್ ಮಹೇಶ್ವರಿ ಅವರನ್ನು ಸತ್ಕರಿಸಿ ಗೌರವಿಸಲಾಯಿತು.ಅಲ್ಲದೆ 30 ಕ್ಕಿಂತ ಹೆಚ್ಚಿನ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ಮಧುಮೇಹದ ಕುರಿತ ವಿಷಯಗಳನ್ನು ಮಂಡಿಸಿದರು. ಉತ್ತಮ ವಿಷಯ ಮಂಡನೆಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ದಯಾನಂದ ಬಿರಾದಾರ, ಸಮ್ಮೇಳನದ ಕಾರ್ಯದರ್ಶಿ ಡಾ.ನಿತಿನ್ ಅಗರವಾಲ, ಡಾ.ಸಂದೀಪ ಪಾಟೀಲ, ಡಾ.ಶಂಕರಗೌಡ ಪಾಟೀಲ, ಡಾ.ರವಿಕುಮಾರ ಚೌಧರಿ, ಡಾ.ಎಲ್.ಎಸ್.ಲಕ್ಕನ್ನವರ, ಡಾ.ಮಾಧವ ಪ್ರಭು, ಡಾ.ಗಿರೀಶ ಕುಲ್ಲೊಳ್ಳಿ, ಡಾ.ಮುದಾಸ್ಸರ್ ಇಂಡಿಕರ, ಡಾ.ಅಕ್ಕಿ, ಡಾ.ಸುನೀಲ ಕರಿ, ಡಾ.ಬಸವರಾಜ ಸಜ್ಜನ, ಡಾ.ರಾಘವೇಂದ್ರ ವಣಕಿ, ಡಾ.ಭಾಸ್ಕರ ಪಾಟೀಲ, ಡಾ.ಶೀತಲ್ ನಾಯಿಕ, ಡಾ.ಕುಮಾರ ಅಂಗಡಿ, ಡಾ.ರಮೇಶ ಪೋಳ ಸೇರಿದಂತೆ ನೂರಾರು ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.