ಕನ್ನಡ ಭಾಷೆ ಅರಿವಿಗೆ ಶಾಸನಗಳ ಅಧ್ಯಯನ ಅಗತ್ಯ: ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ

| Published : Feb 19 2024, 01:30 AM IST

ಕನ್ನಡ ಭಾಷೆ ಅರಿವಿಗೆ ಶಾಸನಗಳ ಅಧ್ಯಯನ ಅಗತ್ಯ: ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಅರಸೀಕೆರೆ ಕಲಾಭವನದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಅರಸೀಕೆರೆ ತಾಲೂಕಿನ ಎಂಟನೇ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಹಾರನಹಳ್ಳಿ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿ ಕನ್ನಡ ಭಾಷೆಯ ಮಹತ್ವ ಬಗ್ಗೆ ಮಾತನಾಡಿದರು.

ಎಂಟನೇ ಸಾಹಿತ್ಯ ಸಮ್ಮೇಳನದ ಸಮಾರೋಪ । ನಾಡು, ನುಡಿ ರಕ್ಷಣೆಗೆ ಮುಂದಾಗಿ

ಕನ್ನಡಪ್ರಭ ವಾರ್ತೆ ಅರಸೀಕೆರೆ

ಕನ್ನಡ ಭಾಷೆಯ ಅಭ್ಯುದಯ ಕುರಿತು ಶಾಸನಗಳ ಅಧ್ಯಯನದಿಂದ ಬೆಳಕು ಚೆಲ್ಲುವ ಕೆಲಸವನ್ನು ಸಮ್ಮೇಳನಾಧ್ಯಕ್ಷ ಎಸ್. ಪರಶಿವಮುರ್ತಿ ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬಂದಿದ್ದಾರೆ, ಇವರ ನಂತರ ಯಾರು ಇಂತಹ ಕಾರ್ಯದಲ್ಲಿ ತೊಡಗುತ್ತಾರೆ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ ಎಂದು ಹಾರನಹಳ್ಳಿ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.

ಕಲಾಭವನದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಅರಸೀಕೆರೆ ತಾಲೂಕಿನ ಎಂಟನೇ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಾನಿಧ್ಯವಹಿಸಿ ಮಾತನಾಡಿದರು.

ಕನ್ನಡ ಭಾಷೆಗೆ ಸಹಸ್ರಾರು ಶತಮಾನಗಳ ಹಿನ್ನೆಲೆಯಿದೆ ಎಂಬುದನ್ನು ಮರೆಯಬಾರದು. ಹಾಸನ, ಚಿತ್ರದುರ್ಗ ಜಿಲ್ಲೆ ಒಳಗೊಂಡಂತೆ ರಾಜ್ಯದ ಹಲವೆಡೆ ದೊರೆತಿರುವ ಶಾಸನಗಳ ಅಧ್ಯಯನದಲ್ಲಿ ಎಸ್. ಪರಶಿವಮುರ್ತಿ ಮುಂಚೂಣಿಯಲ್ಲಿದ್ದರು ಎನ್ನುವುದೇ ಹೆಮ್ಮೆಯ ಸಂಗತಿಯಾಗಿದೆ. ಇಂತಹ ಸಮ್ಮೇಳನದಲ್ಲಿ ಕನ್ನಡ ಭಾಷೆ, ಬರಹ ಬಲ್ಲ ಸಾಹಿತ್ಯಪ್ರೇಮಿ ಹಾಗೂ ಧೀಮಂತ ವ್ಯಕ್ತಿಯನ್ನು ಆಯ್ಕೆ ಮಾಡಿರುವುದು ಅರ್ಥಪೂರ್ಣವಾಗಿದೆ. ನಾಡು, ನುಡಿ, ನೆಲ, ಜಲದ ರಕ್ಷಣೆಗೆ ಎಲ್ಲರೂ ಕಂಕಣಬದ್ಧರಾಗಬೇಕು. ಮುಂಬರುವ ದಿನಗಳಲ್ಲಿ ಸಾಹಿತ್ಯ ಪರಿಷತ್ತಿನ ವತಿಯಿಂದ ಮತ್ತಷ್ಟು ಕನ್ನಡಪರ ಕಾರ್ಯಕ್ರಮಗಳನ್ನು ಆಯೋಜಿಸಿ ಶಾಸನಗಳ ಅಧ್ಯಯನಕ್ಕೂ ಮಹತ್ವ ನೀಡಬೇಕು ಎಂದು ಹೇಳಿದರು.

ಸಾಹಿತಿ ಚಟ್ನಳ್ಳಿ ಮಹೇಶ್, ಜನಪದ ಮತ್ತು ಜನಪದರ ಬದುಕು, ಭಾವನೆಗಳ ಕುರಿತು ಅರಿವಿರಬೇಕು. ಕನ್ನಡ ಭಾಷೆಯನ್ನು ಉಳಿಸುವುದಕ್ಕೆ ಹೋರಾಟ ಮಾಡುವುದಕ್ಕಿಂತ ಕನ್ನಡ ಬಳಸುವ ಸಂಕಲ್ಪ ಮಾಡಿದರೆ ಸಾಕು ಕನ್ನಡ ಭಾಷೆ ತನ್ನಷ್ಟಕ್ಕೆ ತಾನೆ ಅಜರಾಮರವಾಗಿ ಬೆಳೆಯುತ್ತದೆ ಎಂದು ಹೇಳಿದರು.

ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋಬಾಬು ಮಾತನಾಡಿ, ನಾಡು, ನುಡಿ ಉಳಿಸುವ ಕಾರ್ಯ ಕನ್ನಡಿಗರಿಂದಲೇ ನಡೆಯಬೇಕಿದೆ. ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ನಾಲ್ಕು ಗೋಡೆಯ ನಡುವೆ ಆಯೋಜಿಸುತ್ತಿರುವುದು ಬೇಸರ ತಂದಿದೆ ಎಂದರು

ಕಸಾಪ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶಗೌಡ, ತಾಲೂಕು ಅಧ್ಯಕ್ಷ ಚಂದ್ರಶೇಖರ್, ಸಾಹಿತಿ ಡಿ.ಎಸ್. ರಾಮಸ್ವಾಮಿ ಮಾತನಾಡಿದರು.

ಸಮ್ಮೇಳನಾಧ್ಯಕ್ಷ ಎಸ್. ಪರಶಿವಮುರ್ತಿ, ಕಸಾಪ ರಾಜ್ಯ ಮಾರ್ಗದರ್ಶಿ ಸದಸ್ಯ ಕೆ.ವಿ.ಶಿವಮೂರ್ತಿ, ನಿಕಟಪೂರ್ವ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಎಚ್.ಆರ್. ಸ್ವಾಮಿ, ಜಿಲ್ಲಾ ವಕ್ಫ್‌ ಬೋರ್ಡ್ ಅಧ್ಯಕ್ಷ ಸಯ್ಯದ್ ಸಿಕಂದರ್, ಜಿಲ್ಲಾ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಬಿ.ಆರ್. ಬೊಮ್ಮೇಗೌಡ, ಜಾವಗಲ್ ಪ್ರಸನ್ನ, ತಾಲೂಕು ಗೌರವ ಕಾರ್ಯದರ್ಶಿ ಬಂಡೀಹಳ್ಳಿ ಗಂಗಾಧರ್, ಸ್ವಭಾವ ಕೋಳಗುಂದ, ಕೋಶಾಧ್ಯಕ್ಷ ಶೇಖರ್ ಸಂಕೋಡನಹಳ್ಳಿ, ಕೆ.ಜಿ. ಗಣೇಶ್ ಮೂರ್ತಿ, ಮಾಜಿ ಅಧ್ಯಕ್ಷ ಬಿ. ಪರಮೇಶ್, ರಾಮಸ್ವಾಮಿ, ಪ್ರಶಾಂತ್, ರುದ್ರೇಶ್ ಬಾಬು, ದಿವಾಕರ್, ಬಸವರಾಜು ಹಾಜರಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರಮುಖರನ್ನು ಸನ್ಮಾನಿಸಲಾಯಿತು. ಪ್ರಸನ್ನಕುಮಾರ್ ಸುರೆ ರಚಿತ ಮಂದಸ್ಮಿತ ಕೃತಿಯನ್ನು ಸಮ್ಮೇಳನದಲ್ಲಿ ಗಣ್ಯರು ಬಿಡುಗಡೆ ಮಾಡಿದರು. ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆ ನಡೆಸಿಕೊಟ್ಟರೆ, ನಮ್ಮೂರ ಗಾಯಕರ ತಂಡ ಸಂಗೀತ ಕಾರ್ಯಕ್ರಮ ಎಲ್ಲರ ಮೆಚ್ಚುಗೆ ಗಳಿಸಿತು.

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ಕುಡವಕ್ಕಲಗಿ ಸ್ಪರ್ಧಾತ್ಮಕ ಯುಗದಲ್ಲಿ ಕನ್ನಡ ಭಾಷೆಯ ಬೆಳವಣಿಗೆ ಕುರಿತು ವಿಚಾರಗೋಷ್ಠಿಯಲ್ಲಿ ವಿಷಯ ಮಂಡಿಸಿದರು. ನಿವೃತ್ತ ಉಪನ್ಯಾಸಕ ರಾಮಸ್ವಾಮಿ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಬಿ. ಪರಮೇಶ್, ಕೆ.ಪಿ.ಮಹದೇವಿ, ಉಪನ್ಯಾಸಕ ಹರಶಿವಮೂರ್ತಿ, ನಿವೃತ್ತ ಪ್ರಾಂಶುಪಾಲ ಪ್ರೊ.ಸಿ.ಎಂ. ಕಪನೇಗೌಡ ಇದ್ದರು. ಕವಿಗೋಷ್ಠಿಯಲ್ಲಿ ಹದಿನೈದಕ್ಕೂ ಹೆಚ್ಚಿನ ಯುವ ಕವಿಗಳು ಕವಿತೆ ವಾಚನ ಮಾಡಿದರು. ಅರಸೀಕೆರೆಯ ಎಂಟನೇ ತಾಲೂಕು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರನ್ನು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗೌರವಿಸಲಾಯಿತು