ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಕೊಡಗು ಜಿಲ್ಲಾ 17 ನೇ ಕನ್ನಡ ಸಾಹಿತ್ಯ ಸಮ್ಮೇಳನ 29 ಮತ್ತು 30 ರಂದು ಸುಂಟಿಕೊಪ್ಪದ ಕವಿಶಿಷ್ಯ ಪಂಜೆ ಮಂಗೇಶರಾಯರ ವೇದಿಕೆ ಎಸ್.ಎಸ್.ಇಂಟರ್ನ್ಯಾಷನಲ್ ಸಭಾಂಗಣದಲ್ಲಿ ನಡೆಯಲಿದೆ. 29ರಂದು ಬೆಳಗ್ಗೆ 8 ಗಂಟೆಗೆ ಸುಂಟಿಕೊಪ್ಪ ಗದ್ದೆಹಳ್ಳ ಗುಂಡುಗುಟ್ಟಿ ಮಂಜನಾಥಯ್ಯ ಸಭಾಮಂಟಪದ ಮುಂಭಾಗದ ಸಭಾಂಗಣದಲ್ಲಿ ರಾಷ್ಟ್ರ ಧ್ವಜಾರೋಹಣ ನಡೆಯಲಿದೆ. ಬಳಿಕ ಬೆಳಗ್ಗೆ 8.30ಕ್ಕೆ ನೆನಪಿನ ಪ್ರವೇಶ ದ್ವಾರಗಳ ಉದ್ಘಾಟನೆ, ನಂತರ ಬೆಳಗ್ಗೆ 9 ಗಂಟೆಗೆ ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಮುಖ್ಯ ರಸ್ತೆಗಾಗಿ ಶ್ರೀ ಅಯ್ಯಪ್ಪ ದೇವಸ್ಥಾನದ ಬಳಿಯಿಂದ ಗುಂಡುಗುಟ್ಟಿ ಮಂಜನಾಥಯ್ಯ ಸಭಾಂಗಣದವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಸಮ್ಮೇಳನಾಧ್ಯಕ್ಷ ಸಾಹಿತಿ ಅಬ್ದುಲ್ ರಶೀದ್, ಸುಂಟಿಕೊಪ್ಪ ವಿಜಯ ಪ್ಲಾಂಟೇಶನ್ನ ಎಸ್.ಜೆ.ಶ್ರೀನಿವಾಸ್, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಆನಂದ ಕರಂದ್ಲಾಜೆ, ಸುಂಟಿಕೊಪ್ಪ ಸ್ಯಾಂಡಲ್ ವುಡ್ ಕಾಫಿತೋಟದ ಮಾಲೀಕರಾದ ಎಸ್.ಎಂ.ನಾಸಿರ್ ಇತರರು ಪಾಲ್ಗೊಳ್ಳಲಿದ್ದಾರೆ.ನಂತರ ಬೆಳಗ್ಗೆ 10 ಗಂಟೆಗೆ ಮಹಾದ್ವಾರ, ಪುಸ್ತಕ ಮಳಿಗೆ,ಸ್ತ್ರೀಶಕ್ತಿ ಮಳಿಗೆ, ಚಿತ್ರಕಲಾ ಪ್ರದರ್ಶನ ಮಳಿಗೆ, ಸಭಾಂಗಣ ಮತ್ತು ವೇದಿಕೆ, ಸಾಹಿತಿ ದಿ.ಡಿ.ಎನ್.ಕೃಷ್ಣಯ್ಯ ಮಹಾದ್ವಾರ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. 17ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಅಬ್ದುಲ್ ರಶೀದ್, ಕೊಡಗು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರು ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನ ಪರಿಷತ್ತು ಸದಸ್ಯರಾದ ಮಂಡೇಪಂಡ ಸುಜಾ ಕುಶಾಲಪ್ಪ ಸೇರಿದಂತೆ ಹಲವು ಭಾಗವಹಿಸಲಿದ್ದಾರೆ.