ಕೊಡಗು ವಿದ್ಯಾಲಯ: ದೈಹಿಕ ಶಿಕ್ಷಣ ಶಿಕ್ಷಕ ದಿನೇಶ್‌ಗೆ ಸನ್ಮಾನ

| Published : Aug 10 2024, 01:37 AM IST

ಸಾರಾಂಶ

ದಿನೇಶ್, ಈ ವರ್ಷವೂ ಶಾಲೆಯ ಹಾಕಿ ತಂಡವು ದಕ್ಷಿಣ ವಲಯದಲ್ಲಿ ಜಯಗಳಿಸುವ ಮೂಲಕ ರಾಷ್ಟ್ರೀಯ ಮಟ್ಟದ ವಿಜೇತರಾಗಿ ಐತಿಹಾಸಿಕ ಸಾಧನೆ ಮಾಡಲು ಕಾರಣರಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಬಾಲಕರು ಮತ್ತು ಬಾಲಕಿಯರು ದ್ವಿತೀಯ ಸ್ಥಾನ ಪಡೆದು ಭೋಪಾಲದಲ್ಲಿ ನಡೆಯುವ ರಾಷ್ಟ್ರೀಯ ಹಾಕಿ ಟೂರ್ನಿಗೆ ಆಯ್ಕೆಯಾಗಿದ್ದಾರೆ.

ಮಡಿಕೇರಿ: ನಗರದ ಕೊಡಗು ವಿದ್ಯಾಲಯದ ದೈಹಿಕ ಶಿಕ್ಷಣ ಶಿಕ್ಷಕರಾದ ದಿನೇಶ್ ಮತ್ತು ಪಾರ್ವತಿ ಅವರನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.2012ರಿಂದ ಶಾಲೆಯ ವಿದ್ಯಾರ್ಥಿಗಳಿಗೆ ಹಾಕಿ ಕ್ರೀಡೆಯಲ್ಲಿ ಗೆಲುವಿನ ಹಾದಿಗೆ ಸೂಕ್ತ ಮಾರ್ಗರ್ದಶನ ಮಾಡುತ್ತಾ ಬಂದಿರುವ ದಿನೇಶ್, ಈ ವರ್ಷವೂ ಶಾಲೆಯ ಹಾಕಿ ತಂಡವು ದಕ್ಷಿಣ ವಲಯದಲ್ಲಿ ಜಯಗಳಿಸುವ ಮೂಲಕ ರಾಷ್ಟ್ರೀಯ ಮಟ್ಟದ ವಿಜೇತರಾಗಿ ಐತಿಹಾಸಿಕ ಸಾಧನೆ ಮಾಡಲು ಕಾರಣರಾಗಿದ್ದಾರೆ.

ಈ ವರ್ಷ ದಿನೇಶ್ ಅವರ ಮಾರ್ಗದರ್ಶನದಲ್ಲಿ ಬಾಲಕರು ಮತ್ತು ಬಾಲಕಿಯರು ದ್ವಿತೀಯ ಸ್ಥಾನ ಪಡೆದು ಭೋಪಾಲದಲ್ಲಿ ನಡೆಯುವ ರಾಷ್ಟ್ರೀಯ ಹಾಕಿ ಟೂರ್ನಿಗೆ ಆಯ್ಕೆಯಾಗಿದ್ದಾರೆ.ಹಾಕಿ ಇಂಡಿಯಾ ಸೆಮಿನಾರ್‌ನಲ್ಲಿ ಲೆವೆಲ್ ಒನ್ ತರಬೇತುದಾರರಾಗಿ ಗುರುತಿಸಿಕೊಂಡಿರುವ ದಿನೇಶ್, ರಾಜ್ಯಮಟ್ಟದ ಪಂದ್ಯಗಳಲ್ಲಿ ಅಂಪೈರ್ ಆಗಿ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲೆಯ ರಿಂಕ್ ಹಾಕಿ ವಿಜೇತ ತಂಡದ ಆಟಗಾರರನ್ನೂ ಈ ಸಂದರ್ಭ ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಸುಮಿತ್ರಾ ಸನ್ಮಾನಿಸಿದರು. ಅಂತೆಯೇ ಕ್ರೀಡಾ ತರಬೇತುಗಾರರಾದ ಪಾರ್ವತಿ ಅವರಿಗೂ ಪ್ರಶಂಸನಾ ಪತ್ರ ನೀಡಲಾಯಿತು.