ಕನ್ನಡಪ್ರಭ ವಾರ್ತೆ ಮಡಿಕೇರಿ
ಕರ್ನಾಟಕ ಸರ್ಕಾರದ ಪ್ರಸ್ತುತ ಸಾಲಿನ ಮುಂಗಡ ಪತ್ರದಲ್ಲಿ ತಮ್ಮ ದಶಕಗಳ ಬೇಡಿಕೆ ಕೊಡವ ಅಭಿವೃದ್ಧಿ ನಿಗಮ ಘೋಷಣೆಯಾದ ಹಿನ್ನೆಲೆಯಲ್ಲಿ ಯುಕೊ ಸಂಘಟನೆಯು ಶುಕ್ರವಾರ ತಡ ರಾತ್ರಿಯಲ್ಲಿ ಗೋಣಿಕೊಪ್ಪದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿತು. ಈ ಸಂದರ್ಭ ಬಜೆಟ್ ಅಧಿವೇಶನ ಮುಗಿಸಿ ಗೋಣಿಕೊಪ್ಪಕಾಗಮಿಸಿದ ಶಾಸಕ ಹಾಗು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟೀರ ಪೊನ್ನಣ್ಣ ಹಾಗು ಕಾಂಚನ್ ಪೊನ್ನಣ್ಣ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಮೊದಲಿಗೆ, ಬೆಂಗಳೂರಿನಿಂದ ನೇರವಾಗಿ ಬಂದಿಳಿದ ಪೊನ್ನಣ್ಣನವರನ್ನು ಒಡ್ಡೋಲಗದೊಂದಿಗೆ ಉುಮಾಮಹೇಶ್ವರಿ ಪೆಟ್ರೋಲ್ ಬಂಕಿನಲ್ಲಿ ಸಿದ್ದಪಡಿಸಿದ್ದ ವೇದಿಕೆಗೆ ಕರೆತರಲಾಯಿತು. ಅನಂತರ ಶಾಸಕ ಪೊನ್ನಣ್ಣ ಹಾಗು ಯುಕೊ ಸಂಚಾಲಕ ಕೊಕ್ಕಲೆ ಮಾಡ ಮಂಜು ಚಿಣ್ಣಪ್ಪರನ್ನು ಹೂವಿನ ಹಾರ ಹಾಕಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಸಭೆಯಲ್ಲಿ ಮಾತನಾಡಿದ ಮಂಜು ಚಿಣ್ಣಪ್ಪ, ಶಾಸಕ ಎ. ಎಸ್. ಪೊನ್ನಣ್ಣನವರ ಇಚ್ಛಾ ಶಕ್ತಿ ಹಾಗು ಕಾಳಜಿಯಿಂದಾಗಿ, ಪ್ರಸಕ್ತ 2026-27ನೇ ಸಾಲಿನ ಮುಂಗಡ ಪತ್ರದಲ್ಲಿ ‘ಕೊಡವ ಅಭಿವೃದ್ಧಿ ನಿಗಮ’ ಘೋಷಣೆಯಾಗುವುದರೊಂದಿಗೆ ಯುನೈಟೆಡ್ ಕೊಡವ ಆರ್ಗನೈಸೇಷನ್ ಸಂಘಟನೆಯ ದಶಕಗಳ ಹೋರಾಟಕ್ಕೆ ಯಶಸ್ಸು ಲಭಿಸಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗು ಶಾಸಕ ಪೊನ್ನಣ್ಣನವರನ್ನು ಅಭಿನಂದಿಸುವುದಾಗಿ ಹೇಳಿದರು.ಕೊಡವರ ಸಮಗ್ರ ಶ್ರೇಯೋಭಿವೃದ್ಧಿಗೆ ನಿಗಮ ಬಳಸಿಕೊಳ್ಳಬೇಕು: ಪ್ರಸ್ತುತ ಕೊಡವ ಸಮುದಾಯದಂತಹ ಅಲ್ಪ ಸಂಖ್ಯಾತ ಜನಾಂಗವು ಒಂದು ಬೇಡಿಕೆಯನ್ನು ಸರ್ಕಾರದಿಂದ ಪಡೆದುಕೊಳ್ಳುವುದು ಸುಲಭದ ಮಾತಲ್ಲ. ಸರ್ಕಾರದಲ್ಲಿ ಪೊನ್ನಣ್ಣನವರ ವೈಯಕ್ತಿಕ ವರ್ಚಸ್ಸು, ಹಾಗು ಕ್ಷೇತ್ರದ ಎಲ್ಲಾ ಸಮುದಾಯಗಳ ಅಭಿವೃದ್ಧಿಯ ಬಗ್ಗೆ ಅವರಿಗಿರುವ ಕಾಳಜಿಯಿಂದಾಗಿ ಮುಖ್ಯಮಂತ್ರಿಯನ್ನು ಮನವೊಲಿಸಿ ನಿಗಮ ಘೋಷಣೆ ಮಾಡಿಸಿಕೊಳ್ಳಲು ಸಾಧ್ಯವಾಯಿತು . ಅಭಿವೃದ್ಧಿ ನಿಗಮವು ಕೊಡಗು ಕರ್ನಾಟಕದೊಂದಿಗೆ ವಿಲೀನದ ನಂತರದಲ್ಲಿ ಕರ್ನಾಟಕ ಸರ್ಕಾರದಿಂದ ಕೊಡವರಿಗೆ ದೊರೆತ ಬಹು ದೊಡ್ಡ ಕೊಡುಗೆಯಾಗಿದೆ. ಆದ್ದರಿಂದ ಕೊಡವರ ಸಮಗ್ರ ಶ್ರೇಯೋಭಿವೃದ್ದಿಗೆ ನಿಗಮವನ್ನು ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕೊಡವರು ಇದನ್ನು ಮನೆ ಮನೆಗಳಲ್ಲಿ ಸಂಭ್ರಮಿಸಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಹಿಂದಿನ ಸರ್ಕಾರವಿದ್ದಾಗ, 2021ರಲ್ಲಿ, ಯುಕೊ ನಿಯೋಗವು ಅಂದಿನ ಶಾಸಕರಾದ ಕೆ. ಜಿ ಬೋಪಯ್ಯ, ರಂಜನ್ ಅಪ್ಪಚ್ಚು ಹಾಗು ವೀಣಾ ಅಚ್ಚಯ್ಯನವರ ಮುಂದಾಳತ್ವದಲ್ಲಿ ಮುಖ್ಯ ಮಂತ್ರಿ ಬೊಮ್ಮಾಯಿಯವರನ್ನು ಭೇಟಿಯಾಗಿ ಕೊಡವ ಅಭಿವೃದ್ಧಿ ನಿಗಮಕ್ಕೆ ಬೇಡಿಕೆ ಸಲ್ಲಿಸಿತ್ತು. ಮುಖ್ಯ ಮಂತ್ರಿಗಳು ಮುಂದಿನ ಬಜೆಟಿನಲ್ಲಿ ನಿಗಮ ಘೋಷಿಸುವ ಭರವಸೆಯನ್ನು ನೀಡಿದ್ದರಾದರೂ, ಕೊನೆಗೆ ಬಜೆಟಿನಲ್ಲಿ ಕೊಡವ ಜನಾಂಗದ ಅಭಿವೃದ್ಧಿಗಾಗಿ 10 ಕೋಟಿಯನ್ನು ಘೋಷಿಸಿ, ನಿರಾಸೆ ಮೂಡಿಸಿದ್ದರು. ಆದರೂ ಯುಕೊ ಸಂಘಟನೆ ಪಟ್ಟು ಬಿಡದೆ ಪ್ರಯತ್ನಿಸುವುದರ ಮೂಲಕ ನಂತರ 2023 ರ ಏಪ್ರಿಲ್ ನಲ್ಲಿ ಚುನಾವಣೆಯ ಹೊಸ್ತಿಲಲ್ಲಿ ಕೊಡವ ಅಭಿವೃದ್ಧಿ ನಿಗಮವನ್ನು ಘೋಷಿಸಿ, ಯಾವುದೇ ಅನುದಾನವಿಲ್ಲದೆ, ಒಂದು ಸರ್ಕಾರಿ ಆದೇಶವನ್ನು ಹೊರಡಿಸಲಾಯಿತು. ಆದರೆ ಸರ್ಕಾರದ ಅವಧಿ ಮುಗಿದಿದ್ದರಿಂದ ಮುಂದಿನ ಪ್ರಕ್ರಿಯೆ ಯಾವುದೂ ನಡೆಯದೆ ಕೊಡವ ಅಭಿವೃದ್ಧಿ ನಿಗಮವು ನೆನೆದುದಿಗೆ ಬಿದ್ದಿತ್ತು.ಆದರೆ ಇಂದಿನ ಶಾಸಕರಾದ ಪೊನ್ನಣ್ಣನವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ತಾನು ಗೆದ್ದರೆ ಅಭಿವೃದ್ಧಿ ನಿಗಮ ಘೋಸಿಸುವುದಾಗಿ ಭರವಸೆ ನೀಡಿದ್ದ ಹಾಗೆ ಇಂದು ತಮ್ಮ ಭರವಸೆ ಈಡೇರಿಸಿದ್ದಾರೆ. ಈ ನಿಟ್ಟಿನಲ್ಲಿ ಯುಕೊ ಸಂಘಟನೆಯು ಶಾಸಕ ಪೊನ್ನಣ್ಣನವರನ್ನು ಹಲವು ಬಾರಿ ಭೇಟಿ ಮಾಡಿ ಚರ್ಚಿಸಿತ್ತು ಎಂದು ಅವರು ಹೇಳಿದರು.
ಕೊಡವ ಅಭಿವೃದ್ಧಿ ನಿಗಮದ ಅರಿವಾಯಿತು: ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಪೊನ್ನಣ್ಣ, ಯುಕೊ ಸಂಘಟನೆಯ ಮೂಲಕ ಮೊದಲಿಗೆ ಕೊಡವ ಅಭಿವೃದ್ಧಿ ನಿಗಮದ ಅರಿವಾಯಿತು. ಆ ನಂತರ ನನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಲಾಗಿತ್ತು, ಅದರಂತೆ ಇದೀಗ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸುವ ಕುರಿತ ನನ್ನ ಭರವಸೆಯನ್ನು ಈಡೇರಿಸಿದ್ದೇನೆ ಎಂದು ಹೇಳಿದರು. ಮುಖ್ಯಮಂತ್ರಿಗಳು ನನ್ನ ಮೇಲೆ ವಿಶ್ವಾಸವಿಟ್ಟು ಕೊಡವ ಅಭಿವೃದ್ದಿ ನಿಗಮ ಸ್ಥಾಪಿಸಲು ಒಪ್ಪಿಗೆ ನೀಡಿದರು. ಇದೀಗ ಕೊಡವ ಅಭಿವೃದ್ಧಿ ನಿಗಮವು ಕಂಪೆನಿ ಕಾಯ್ದೆಯನುಸಾರ ನೋಂದಣಿಯಾಗಿದ್ದು, ಶೀಘ್ರದಲ್ಲೇ ಸೂಕ್ತ ಅನುದಾನ ಮೀಸಲಿಟ್ಟು ಆಡಳಿತ ಮಂಡಳಿ ರಚನಾ ಪ್ರಕ್ರಿಯೆಯೂ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. ವೇದಿಕೆಯಲ್ಲಿ, ಮೂರ್ನಾಡ್ ಕೊಡವ ಸಮಾಜದ ಅಧ್ಯಕ್ಷರಾದ ತೇಲಪಂಡ ಸುಬ್ಬಯ್ಯ, ಕೊಲ್ಲೀರ ಉಮೇಶ್ ಉಪಸ್ಥಿತರಿದ್ದರು. ಕಳ್ಳಿಚಂಡ ರಾಬಿನ್ ಸುಬ್ಬಯ್ಯ ಸ್ವಾಗತಿಸಿ ಚೆಪ್ಪುಡಿರ ಸುಜು ಕರುಂಬಯ್ಯ ವಂದಿಸಿದರು.ಕಾರ್ಯಕ್ರಮದಲ್ಲಿ, ಕರ್ನಾಟಕ ಕೊಡವ ಸಾಹಿತ್ಯ ಅಖಾಡೆಮಿ ಸದಸ್ಯ ಚೊಟ್ಟೆಯಂಡ ಸಂಜು ಕಾವೇರಪ್ಪ, ಅಪ್ಪಾರಂಡ ವೇಣು ಪೊನ್ನಪ್ಪ, ಕಳ್ಳಿಚಂಡ ರತನ್, ಅಳಮೇಂಗಡ ಮೋಟಯ್ಯ, ಪಳಂಗಿಯಂಡ ದರ್ಶನ್, ಚಂಗುಲಂಡ ಅಯ್ಯಪ್ಪ, ಜಮ್ಮಡ ಗಣೇಶ್, ತೀತಿರ ಕುಟ್ಟಪ್ಪ, ಮುಂಡಂಡ ಅರುಣ್, ಮುಕ್ತಾಟಿರ ರಾಬಿನ್, ಚಂಗಂಡ ಸೂರಜ್, ನೆರ್ಪಂಡ ಪ್ರತೀಕ್ ಪೊನ್ನಣ್ಣ, ನೂರೆರ ಜೀವನ್, ಕೊಲ್ಲೀರ ಗಯಾ, ಕಾವಡಿಚಂಡ ದೀಪಕ್, ಕಾಟಿಮಾಡ ಗಿರಿ, ನೆಲ್ಲಮಕ್ಕಡ ಮಾದಯ್ಯ, ಮಚ್ಚಾಮಾಡ ರಮೇಶ್, ಅರುಣ್, ಬಾದುಮಂಡ ವಿಷ್ಣು, ಕಡೇಮಾಡ ತಿಮ್ಮಯ್ಯ, ಕೊಪ್ಪೀರ ದಿವಿನ್, ಕಾಯಪಂಡ ಬೋಪಣ್ಣ, ಮಾಣಿಪಂಡ ಅಯ್ಯಪ್ಪ, ಚೆಪ್ಪುಡಿರ ಪ್ರತಿಮ, ಕಳ್ಳಿಚಂಡ ದೀನ, ಬಳ್ಳಚೆಟ್ಟಿರ ಮೈನ, ಕುಂಜಿಲಂಡ ಗ್ರೇಸಿ, ಪಾಂಡಂಡ ಸ್ವಾತಿ, ಕಾವಡಿಚಂಡ ಪವಿತ್ರ ಹಾಗು ಇತರರು ಉಪಸ್ಥಿತರಿದ್ದರು.
