ಕಡರನಾಯ್ಕನಹಳ್ಳಿ - ಕೊಕ್ಕನೂರು ರಸ್ತೆ ಕಾಮಗಾರಿ 2002ರಲ್ಲಿ ಪ್ರಾರಂಭಗೊಂಡಿದ್ದು, ಟೆಂಡರ್ ಪಡೆದ ಗುತ್ತಿಗೆದಾರ ಕಾಮಗಾರಿ ಪೂರ್ಣಗೊಳಿಸದೆ ನಾಪತ್ತೆಯಾಗಿದ್ದಾನೆ. ಅಪೂರ್ಣಗೊಳಿಸಿದ ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮಜರುಗಿಸಬೇಕು. ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಶಾಸಕರು, ಉಸ್ತುವಾರಿ ಸಚಿವರು, ಇಲಾಖಾ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಗ್ರಾಮಸ್ಥರು, ರೈತರು ಆಗ್ರಹಿಸಿದರು.
ಕನ್ನಡ ಪ್ರಭ ವಾರ್ತೆ ಮಲೇಬೆನ್ನೂರು
ಕಡರನಾಯ್ಕನಹಳ್ಳಿ - ಕೊಕ್ಕನೂರು ರಸ್ತೆ ಕಾಮಗಾರಿ 2002ರಲ್ಲಿ ಪ್ರಾರಂಭಗೊಂಡಿದ್ದು, ಟೆಂಡರ್ ಪಡೆದ ಗುತ್ತಿಗೆದಾರ ಕಾಮಗಾರಿ ಪೂರ್ಣಗೊಳಿಸದೆ ನಾಪತ್ತೆಯಾಗಿದ್ದಾನೆ. ಅಪೂರ್ಣಗೊಳಿಸಿದ ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮಜರುಗಿಸಬೇಕು. ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಶಾಸಕರು, ಉಸ್ತುವಾರಿ ಸಚಿವರು, ಇಲಾಖಾ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಗ್ರಾಮಸ್ಥರು, ರೈತರು ಆಗ್ರಹಿಸಿದರು.ಕೊಕ್ಕನೂರು ಸಮೀಪದಲ್ಲಿ ರಸ್ತೆಯಲ್ಲಿ ಹಳ್ಳಕ್ಕೆ ಸೇತುವೆ ನಿರ್ಮಾಣ ಆಗಬೇಕಿದ್ದು, ಇಲ್ಲಿ 40 ಮೀ. ಒಳಗಡೆ ಎರಡು ಕಡೆ ಪಿಕಪ್ ಬರುತ್ತವೆ. ಒಂದು ಕಡೆ ಗುತ್ತಿಗೆದಾರ ಸೇತುವೆ ನಿರ್ಮಾಣ ಮಾಡಿದ್ದು, ಅದೂ ಎತ್ತರದಲ್ಲಿ ಇದೆ. ಇನ್ನೂಂದೆಡೆ ಸೇತುವೆ ಪೂರ್ಣಗೊಳಿಸಿಲ್ಲ. ಜತೆಗೆ ಇಲ್ಲಿ ತಗ್ಗಿನಿಂದ ಕೂಡಿರುವುದರಿಂದ ಮಳೆಗಾಲ, ಬೇಸಿಗೆ ಕಾಲ ಎನ್ನದೆ ವರ್ಷಪೂರ್ತಿ ನೀರು ನಿಲ್ಲುತ್ತದೆ. ಪ್ರತಿನಿತ್ಯ ನೂರಾರು ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ. ಇನ್ನು ರಸ್ತೆ ಉಬ್ಬು,ತಗ್ಗು ಗುಂಡಿಗಳಿಂದ ಕೂಡಿದೆ ಪ್ರಯಾಣವೂ ಪ್ರಯಾಸವಾಗಿದೆ. ನಾವೇ ಸೇತುವೆ ನಿರ್ಮಾಣ ಮಾಡಲ ಮುಂದಾಗಿದ್ದೇವೆ. ರಸ್ತೆಯುದ್ದಕ್ಕೂ ಇರುವ ಗುಂಡಿಗಳನ್ನು ಮುಚ್ಚಲು ನಿರ್ಧರಿಸಿದ್ದೇನೆ ಎಂದು ಕೊಕ್ಕನೂರು ಗ್ರಾಮದ ಯುವ ಮುಖಂಡ ಅಭಿನಂದನ್ ಪಾಟೀಲ್ ಪತ್ರಿಕೆಗೆ ತಿಳಿಸಿದರು.ಸೇತುವೆ ನಿರ್ಮಾಣಕ್ಕೆ 5 ಲಕ್ಷ ರು. ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ. 2002ರಿಂದ ಇಲ್ಲಿಯವರೆಗೆ ಜಿಲ್ಲಾಡಳಿತ, ತಾಲೂಕು ಆಡಳಿತ ತೋರಿದ ನಿರ್ಲಕ್ಷ್ಬೇ ಬೇಸರ ತಂದಿದೆ. ರೈತರ ಹಿತ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ. ಭದ್ರಾ ಜಲಾಶಯದಲ್ಲಿ 178 ಅಡಿ ನೀರಿದ್ದರೂ ಬೆಳೆಗಳಿಗೆ ನೀರು ಬಿಡದೆ ರೈತರನ್ನು ಆರ್ಥಿಕವಾಗಿ ಸಂಕಷ್ಟಕ್ಕೆತಳ್ಳಲಾಗಿದೆ ಎಂದು ವ್ಯಂಗ್ಯವಾಡಿದರು.ಬೆಳೆಗಳಿಗೆ ನೀರಿಲ್ಲದೆ ಬಿತ್ತನೆ, ಭತ್ತದ ನಾಟಿ ಮಾಡಿಲ್ಲ. ಆದರೆ ಬರಪೀಡಿತ ಪಟ್ಟಿಯಲ್ಲಿ ಹರಿಹರ ತಾಲೂಕು ಸೇರಿಲ್ಲ. ಶಾಸಕರು, ಉಸ್ತುವಾರಿ ಸಚಿವರು, ಲೋಕಸಭಾ ಸಂಸದರಿಗೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದಿರುವುದು ವಿಪರ್ಯಾಸ. ರೈತಪರ ಕಾಳಜಿ ತೋರಿಸದಿದ್ದರೆ ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸಲಾಗುವುದು ಎಂದು ವಕೀಲ ಕೆಎಚ್ ನಾಗನಗೌಡ, ರೈತರಾದ ಟಿಎನ್ ಹನುಮಗೌಡ, ಗಡಗಿ ರುದ್ರಪ್ಪ, ಎಚ್ ಬಸವರಾಜು, ಗಂಟೇರ ವಿಜಯಕುಮಾರ, ವೆಂಕಟೇಶ್, ಹನುಮಗೌಡ, ಎಚ್ ಹನುಮಂತಪ್ಪ, ಹೊಸೂರಪ್ಪ ದೊಂಬೇರ, ರಾಕೇಶ್ ಒಪಿ, ಡಿಎಲ್ ನಾಗರಾಜ್, ಎಚ್ ಗೋವಿಂದಪ್ಪ ಮತ್ತು ಸುತ್ತಮುತ್ತಲಿನ ಗ್ರಾಮಗಳ ರೈತರು ಆಕ್ರೋಶ ವ್ಯಕ್ತಪಡಿಸಿದರು.ರಸ್ತೆ ಕಾಮಗಾರಿಗೆ ನಾವೂ ಕೂಡ ಸಹಕರಿಸಲು ಸಿದ್ಧರಿದ್ದೇವೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಹೇಳಿದ್ದಾರೆ ಎಂದು ಕಂಬತ್ತನಹಳ್ಳಿ ಕುಬೇರ ಗೌಡ ತಿಳಿಸಿದರು. ಲೋಕೋಪಯೋಗಿ ಇಂಜಿನಿಯರ್ ನಾಗರಾಜ್ ಕಂದಗಲ್ ಭೇಟಿ ನೀಡಿ ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.ಪಿಕಪ್ನಲ್ಲಿ ಚಿಕ್ಕದಾಗಿರುವ ಪೈಪ್ಗಳನ್ನು ತೆರುವುಗೊಳಿಸಿ ಕಾಮಗಾರಿ ಪ್ರಾರಂಭಿಸಿದ್ದೇವೆ. ಜೇಸಿಬಿ ಬಾಡಿಗೆ ತಂದಿದ್ದೇವೆ. ಎಷ್ಟೇ ಖರ್ಚು ಬಂದರೂ ಭರಿಸಲು ಸಿದ್ದರಿದ್ದೇವೆ. ಸ್ವ-ಇಚ್ಚೆಯಿಂದ ಯಾರಾದಾರೂ ಸಹಕಾರ ನೀಡಬಹುದು. ಈ ರಸ್ತೆಯಲ್ಲಿ ಪ್ರಸಿದ್ಧ ಶ್ರೀ ಆಂಜನೇಯ ಸ್ವಾಮಿ ದರ್ಶನಕ್ಕೆ ರಾಜ್ಯದ ವಿವಿಧೆಡೆಗಳಿಂದ ಭಕ್ತರು ಆಗಮಿಸುವಾಗ ದುಸ್ಥಿತಿ ಬಗ್ಗೆ ಶಪಿಸುತ್ತಲೇ ಇರುವಂತಾಗಿದೆ. ಶೀಘ್ರವೇ ತಾಲೂಕು ಆಡಳಿತ, ಜಿಲ್ಲಾಡಳಿತ, ಅಧಿಕಾರಿಗಳು ಗಮನಹರಿಸಿ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಬೇಕು ಎಂದು ಅಭಿನಂದನ್ ಹೇಳಿದರು.