ಸಾರಾಂಶ
ಕೊಡವ ಮುಸ್ಲಿಂ ಕೌಟುಂಬಿಕ ವಾಲಿಬಾಲ್ ಪಂದ್ಯಾವಳಿ
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆವಿರಾಜಪೇಟೆ ಸಮೀಪದ ಬೇಟೋಳಿ ಗ್ರಾಮದ ಚಿಟ್ಟಡೆಯ ಕೂವಲೆರ ಕುಟುಂಬಸ್ಥರ ಆತಿಥ್ಯದಲ್ಲಿ ಜುಮಾ ಮಸೀದಿ ಮೈದಾನದಲ್ಲಿ ನಡೆಯುತ್ತಿರುವ ಕೊಡವ ಮುಸ್ಲಿಂ ಮನೆತನಗಳ ನಡುವಿನ ಪ್ರಥಮ ವರ್ಷದ ಹೊನಲು ಬೆಳಕಿನ ಕೌಟುಂಬಿಕ ವಾಲಿಬಾಲ್ ಪಂದ್ಯಾವಳಿ ‘ಕೂವಲೆರ ಚಿಟ್ಟಡೆ ಕಪ್ -2025’ರ ಮೊದಲ ದಿನದ ಪಂದ್ಯದಲ್ಲಿ ಒಟ್ಟು 6 ತಂಡಗಳು ಮೂರನೇ ಸುತ್ತಿಗೆ ಲಗ್ಗೆ ಇಟ್ಟಿತು.
ಆರಂಭಿಕ ದಿನದ ಮೊದಲ ಸುತ್ತಿನ ಪಂದ್ಯಾವಳಿಯಲ್ಲಿ ಪೊಟ್ಟಂಡ, ಮೀತಲತಂಡ (ಎ), ಆಲೀರ (ಎ), ಚಿಟ್ಟಡೆ ಕೂವಲೆರ (ಬಿ), ಚಿಮ್ಮಿಚಿರ (ಎ), ಚೆಂಬಾರಂಡ, ಕತ್ತಣಿರ ಮತ್ತು ಬಲ್ಯತ್ ಕಾರಂಡ ತಂಡಗಳು ಮುಂದಿನ ಸುತ್ತು ಪ್ರವೇಶಿಸಿತು. ಆರಂಭಿಕ ದಿನದಂದೇ ನಡೆದ 2ನೇ ಸುತ್ತಿನ ಪಂದ್ಯಾವಳಿಯಲ್ಲಿ ಪೊಟ್ಟಂಡ, ಮೀತಲತಂಡ (ಎ), ಆಲೀರ (ಎ), ಹರಿಶ್ಚಂದ್ರ, ಚೆಂಬಾರಂಡ ಮತ್ತು ಚಿಟ್ಟಡೆ ಕೂವಲೆರ (ಬಿ) ತಂಡಗಳು 3ನೇ ಹಂತಕ್ಕೆ ಪ್ರವೇಶಿಸಿತು.ಮೊದಲ ಸುತ್ತಿನ ಮೊದಲ ಪಂದ್ಯದಲ್ಲಿ ಪೊಟ್ಟಂಡ ತಂಡವು ಕನ್ನಡಿಯಂಡ (ಬಿ) ತಂಡವನ್ನು 2-1 ಸೆಟ್ಗಳಿಂದ ಸೋಲಿಸಿದರೆ, 2ನೇ ಪಂದ್ಯದಲ್ಲಿ ಮೀತಲತಂಡ (ಎ) ತಂಡವು ಕರತೊರೆರ ತಂಡವನ್ನು ನೇರ ಸೆಟ್ಗಳಿಂದ ಮಣಿಸಿತು. 3ನೇ ಪಂದ್ಯದಲ್ಲಿ ಆಲೀರ (ಎ) ತಂಡವು ಮೀತಲತಂಡ (ಬಿ) ತಂಡವನ್ನು 2-1 ಸೆಟ್ಗಳಿಂದ ಪರಾಭವಗೊಳಿಸಿದರೆ, 4ನೇ ಪಂದ್ಯದಲ್ಲಿ ಚಿಟ್ಟಡೆ ಕೂವಲೆರ (ಬಿ) ತಂಡವು ನೇರೂಟ್ ಕಾರಂಡ ತಂಡವನ್ನು 2-1 ಸೆಟ್ಗಳಿಂದ ಸೋಲಿಸಿತು.5ನೇ ಪಂದ್ಯದಲ್ಲಿ ಚಿಮ್ಮಿಚಿರ (ಎ) ತಂಡವು ಮೀನಕ್ಕೆರ ತಂಡವನ್ನು 2-0 ನೇರ ಸೆಟ್ಗಳಿಂದ ಮಣಿಸಿದರೆ, 6ನೇ ಪಂದ್ಯದಲ್ಲಿ ಚೆಂಬಾರಂಡ ತಂಡವು ಚೇನೋತಂಡ ತಂಡವನ್ನು ನೇರ ಸೆಟ್ಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು. 7ನೇ ಪಂದ್ಯದಲ್ಲಿ ಕತ್ತಣಿರ ತಂಡವು ಆಲೀರ (ಬಿ) ತಂಡವನ್ನು 2-0 ನೇರ ಸೆಟ್ಗಳಿಂದ ಪರಾಭವಗೊಳಿಸಿದರೆ, ಮೊದಲ ಸುತ್ತಿನ ಕೊನೆಯ ಪಂದ್ಯದಲ್ಲಿ ಬಲ್ಯತ್ ಕಾರಂಡ ತಂಡ ಮಂಡಿಯಂಡ ತಂಡವನ್ನು 2-0 ನೇರ ಸೆಟ್ಗಳಿಂದ ಸೋಲಿಸಿ 2ನೇ ಹಂತಕ್ಕೆ ಅರ್ಹತೆ ಪಡೆದುಕೊಂಡಿತು.
2ನೇ ಸುತ್ತಿನ ಮೊದಲ ಪಂದ್ಯದಲ್ಲಿ ಪೊಟ್ಟಂಡ ತಂಡವು ಕಾಟ್ರಕೊಲ್ಲಿ ಆಲೀರ ತಂಡವನ್ನು 2-1 ಸೆಟ್ಗಳಿಂದ ಪರಾಭವಗೊಳಿಸಿದರೆ, 2ನೇ ಪಂದ್ಯದಲ್ಲಿ ಮೀತಲತಂಡ (ಎ) ತಂಡವು ಅಂಬಟ್ಟಿ ಕಿಕ್ಕರೆ ತಂಡವನ್ನು ನೇರ ಸೆಟ್ಗಳಿಂದ ಮಣಿಸಿತು. 3ನೇ ಪಂದ್ಯದಲ್ಲಿ ಆಲೀರ (ಎ) ತಂಡವು ಕೂರುಳಿಕಾರಂಡ ತಂಡವನ್ನು 2-1 ಸೆಟ್ಗಳಿಂದ ಪರಾಭವಗೊಳಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿತು.4ನೇ ಪಂದ್ಯದಲ್ಲಿ ಹರಿಶ್ಚಂದ್ರ ತಂಡವು ಚಿಮ್ಮಿಚ್ಚಿರ (ಎ) ತಂಡವನ್ನು 2-0 ನೇರ ಸೆಟ್ನಲ್ಲಿ ಸೋಲಿಸಿದರೆ, 5ನೇ ಪಂದ್ಯದಲ್ಲಿ ಚೆಂಬಾರಂಡ ತಂಡವು ಪೇರಿಯಂಡ ತಂಡವನ್ನು 2-0 ನೇರ ಸೆಟ್ನಲ್ಲಿ ಮಣಿಸಿತು. 2ನೇ ಸುತ್ತಿನ ಕೊನೆಯ ಪಂದ್ಯದಲ್ಲಿ ಚಿಟ್ಟಡೆ ಕೂವಲೆರ (ಬಿ) ತಂಡವು ಚಾಮಿಯಾಲ ಕೂವಲೆರ (ಎ) ತಂಡವನ್ನು 2-1 ಸೆಟ್ಟುಗಳಿಂದ ಪರಾಭವಗೊಳಿಸಿ ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಂಡಿತು.ತಡರಾತ್ರಿವರೆಗೂ ನಡೆದ ಈ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಜನತೆ ಚಳಿಯನ್ನೂ ಲೆಕ್ಕಿಸದೆ ವೀಕ್ಷಿಸಿದರು. ಚಿಟ್ಟಡೆ ಕೂವಲೆರ ಕುಟುಂಬದ ಅಧ್ಯಕ್ಷ ಉಮ್ಮರ್, ಕಾರ್ಯದರ್ಶಿ ಕೂವಲೆರ ಫಕ್ರುದ್ದೀನ್, ತಾಂತ್ರಿಕ ಸಮಿತಿ ಮುಖ್ಯಸ್ಥರಾದ ಕೂವಲೆರ ಪೈಜ್ಹು ಸಜೀರ್, ಕೂವಲೆರ ಅಬ್ದುಲ್ ಘನಿ ಮೊದಲಾದವರು ಪಂದ್ಯಾವಳಿಯ ಮೇಲುಸ್ತುವಾರಿ ವಹಿಸಿಕೊಂಡಿದ್ದರು. ಎಡಪಾಲದ ಎರಟೇಂಡ ಜಂಶೀರ್ ವೀಕ್ಷಕ ವಿವರಣೆ ನೀಡಿದರು. ಪಂದ್ಯಾವಳಿಯನ್ನು ‘ಸಕ್ಸಸ್ ಸ್ಪೋರ್ಟ್ಸ್’ ಯುಟ್ಯೂಬ್ ಚಾನೆಲ್ ಮೂಲಕ ನೇರ ಪ್ರಸಾರಗೊಳಿಸಲಾಗುತ್ತಿದೆ.