ಸಾರಾಂಶ
ಕೊರಗ ಸಮುದಾಯದ ಮಕ್ಕಳು ಈಗಾಗಲೇ ಇತರ ಅಂಗನವಾಡಿ ಕೇಂದ್ರಗಳಿಗೆ ತೆರಳುತ್ತಿದ್ದರೂ ಜಿಲ್ಲೆಯಲ್ಲಿ ಕನಿಷ್ಠ ಒಂದಾದರೂ ಅಂಗನವಾಡಿಯನ್ನು ನಿರ್ಮಿಸುವಂತೆ ಅವರು ತಿಳಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಪರಿಶಿಷ್ಟ ಪಂಗಡದ ಸಮುದಾಯಗಳ ಕಲ್ಯಾಣ ಸಮುದಾಯಗಳ ಮೆಗಾ ಇವೆಂಟ್ ಕಾರ್ಯಕ್ರಮವನ್ನು ಸೆಪ್ಟೆಂಬರ್ ಮೊದಲನೇ ವಾರದಲ್ಲಿ ಆಯೋಜಿಸಬೇಕು. ಮೆಗಾ ಇವೆಂಟ್ ಕಾರ್ಯಕ್ರಮದಲ್ಲಿ ಕೊರಗ ಸಮುದಾಯಕ್ಕೆ ಉಪಯೋಗವಾಗುವಂತೆ ಕಾರ್ಯಕ್ರಮವನ್ನು ಆಯೋಜಿಸುವಂತೆ ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಆನಂದ್ ಹೇಳಿದರುಅವರು ಶುಕ್ರವಾರ ಈ ಸಂಬಂಧ ಜಿಲ್ಲಾ ಮಟ್ಟದಲ್ಲಿ ಅಗತ್ಯ ಪೂರ್ವ ಸಿದ್ಧತೆ ಮತ್ತು ಐಇಸಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಬಗ್ಗೆ ಶುಕ್ರವಾರ ಜಿಲ್ಲಾ ಪಂಚಾಯತ್ನಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೊರಗ ಸಮುದಾಯದವರಿಗೆ ಪ್ರಧಾನಮಂತ್ರಿ ಜನ್ ಜಾತಿ ಆದಿವಾಸಿ ಮಹಾ ಅಭಿಯಾನ ಯೋಜನೆಯಡಿ ಕೇಂದ್ರ ಸರ್ಕಾರ 9 ಇಲಾಖೆಗಳ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಆಗಸ್ಟ್ 23 ರಿಂದ ಸೆಪ್ಟೆಂಬರ್ 10ವರೆಗೆ ಆಧಾರ್ ನೋಂದಾಣಿ, ಜನ್ ಧನ್ ಬ್ಯಾಂಕ್ ಖಾತೆ, ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್, ಜಾತಿ ಪ್ರಮಾಣ ಪತ್ರ, ಸಿಕಲ್ ಸೆಲ್ ಅನೇಮಿಯ, ಸ್ತ್ರೀನಿಂಗ್, ಪಡಿತರ ಚೀಟಿ, ಪ್ರಧಾನ ಮಂತ್ರಿ ಮಾತೃ ವಂದನಾ ಕಾರ್ಯಕ್ರಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಪ್ರಯೋಜನವನ್ನು ಜಿಲ್ಲೆಯ ಕೊರಗ ಸಮುದಾಯದವರು ಪಡೆದುಕೊಳ್ಳಬೇಕು ಎಂದರು. ಪ್ರಸ್ತುತ ಕೊರಗ ಸಮುದಾಯದವರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಅವರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸುತ್ತಿದ್ದು, ಪ್ರತಿಯೊಬ್ಬ ಅಧಿಕಾರಿಗಳು ನಿಷ್ಠೆಯಿಂದ ಕೆಲಸ ಮಾಡಬೇಕು. ಕೊರಗ ಸಮುದಾಯದ ಏಳಿಗೆಗಾಗಿ ಪ್ರತಿಯೊಬ್ಬ ಅಧಿಕಾರಿ ವರ್ಗದವರು ಶ್ರಮಿಸಬೇಕು ಎಂದರು.7 ದಿನದಲ್ಲಿ ಪಟ್ಟಿಗೆ ಸೂಚನೆ: ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ಮುಖ್ಯರಸ್ತೆಯಿಂದ 500 ಮೀಟರ್ ದೂರದಲ್ಲಿರುವ ಕೊರಗ ಸಮುದಾಯದವರ ಮನೆಗಳಿಗೆ ವ್ಯವಸ್ಥಿತ ರಸ್ತೆ ನಿರ್ಮಾಣದ ಬಗ್ಗೆ ಮಾಹಿತಿ ಪಡೆದ ಅವರು, ಪ್ರತೀ ತಾಲೂಕಿನಲ್ಲಿರುವ ಕೊರಗರ ಮನೆಗಳಿಗೆ ರಸ್ತೆ ವ್ಯವಸ್ಥೆ ಇದೆಯೇ ಎಂಬ ಬಗ್ಗೆ ಮತ್ತೊಮ್ಮೆ ಸರ್ವೆ ಕಾರ್ಯಗಳನ್ನು ಕೈಗೊಂಡು ಮುಂದಿನ 7 ದಿನಗಳಲ್ಲಿ ಪಟ್ಟಿ ಸಿದ್ದಪಡಿಸಿ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಸರ್ವೆ ಕಾರ್ಯಗಳನ್ನು ನಡೆಸಿದ ನಂತರವೂ ರಸ್ತೆ ಸಮಸ್ಯೆಗಳ ಬಗ್ಗೆ ದೂರು ಬಂದಲ್ಲಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಖಾಸಗಿ ರಸ್ತೆಯಲ್ಲಿ ಕೊರಗ ಸಮುದಾಯದವರು ಓಡಾಡುತ್ತಿರುವ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ ಪಂಚಾಯತ್ನ ಮುಖಾಂತರ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವಂತೆ ತಿಳಿಸಿದರು.
ಕೊರಗ ಸಮುದಾಯದವರಿಗಾಗಿ ಹಾಸ್ಟೆಲ್ ನಿರ್ಮಿಸಲು ಅನುದಾನವಿದ್ದು ಹಾಸ್ಟೆಲ್ ನಿರ್ಮಾಣಕ್ಕಾಗಿ ಸರಿಯಾದ ಸ್ಥಳಾವಕಾಶವನ್ನು ಗುರುತಿಸಿ ಕೊರಗ ಸಮುದಾಯದವರಿಗೆ ಹಾಗೂ ಇತರೆ ಸಮುದಾಯದವರಿಗೆ ಉಪಯೋಗವಾಗುವಂತೆ ಹಾಸ್ಟೆಲ್ ನಿರ್ಮಾಣ ಕಾರ್ಯವನ್ನು ಕೈಗೊಳ್ಳುವಂತೆ ತಿಳಿಸಿದರು. ಕೊರಗ ಸಮುದಾಯದ ಮಕ್ಕಳು ಈಗಾಗಲೇ ಇತರ ಅಂಗನವಾಡಿ ಕೇಂದ್ರಗಳಿಗೆ ತೆರಳುತ್ತಿದ್ದರೂ ಜಿಲ್ಲೆಯಲ್ಲಿ ಕನಿಷ್ಠ ಒಂದಾದರೂ ಅಂಗನವಾಡಿಯನ್ನು ನಿರ್ಮಿಸುವಂತೆ ಅವರು ತಿಳಿಸಿದರು.ಶೈಕ್ಷಣಿಕ ನೆರವು: ಕೊರಗ ಸಮುದಾಯದಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಒದಗಿಸುವ ಯೋಜನೆಯಿದ್ದು ಸ್ನಾತ್ತಕೋತ್ತರ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅಥವಾ ಪದವಿಯಲ್ಲಿ ಪ್ರಸ್ತುತ ವಿದ್ಯಾಭ್ಯಾಸ ಪಡೆಯುತ್ತಿರುವವರನ್ನು ಗುರುತಿಸಿ ಲ್ಯಾಪ್ಟಾಪ್ ಒದಗಿಸಲು ಕ್ರಮ ಕೈಗೊಳ್ಳುವಂತೆ ಅವರು ತಿಳಿಸಿದರು. ಸಭೆಯಲ್ಲಿ ಪ್ರೊಬೆಷನರಿ ಐಎಎಸ್ ಅಧಿಕಾರಿ ಪಿ. ಶ್ರವಣ್ ಕುಮಾರ್, ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ಬಸವರಾಜು ಮತ್ತಿತರರಿದ್ದರು.