ಕೋಟ: ಆಸಾಡಿ ಒಡ್ರ್ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

| Published : Jul 14 2024, 01:35 AM IST

ಸಾರಾಂಶ

ಬ್ರಹ್ಮಬೈದರ್ಕಳ ಬಿಲ್ಲವ ಸೇವಾ ಸಂಘ ಸಾಸ್ತಾನ ಇದರ ಅಧ್ಯಕ್ಷ ಎಂ.ಸಿ ಚಂದ್ರಶೇಖರ್ ‘ಆಸಾಡಿ ಒಡ್ರ್’ ಪೋಸ್ಟರ್ ಬಿಡುಗಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಕೋಟ

ಗ್ರಾಮೀಣ ಭಾಷೆ ಬದುಕಿನ ವಿಚಾರಧಾರೆ ಉಳಿಸುವುದರ ಜತೆಗೆ ಪರಿಸರ ಕಾಳಜಿ ಸಾಮಾಜಿಕ ಬದ್ಧತೆ ಪಂಚವರ್ಣದ ಕೊಡುಗೆಯಾಗಿದೆ ಎಂದು ಸಮಾಜಸೇವಕ ಪರಿಸರಪ್ರೇಮಿ ವಿನಯಚಂದ್ರ ಸಾಸ್ತಾನ ಹೇಳಿದರು.

ಅವರು ಅ.೧೧ರಂದು ಕೋಟದ ಹಂದಟ್ಟು ಪರಿಸರದಲ್ಲಿ ಕೋಟ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಮಾತೃ ಸಂಸ್ಥೆ ಪಂಚವರ್ಣ ಯುವಕ ಮಂಡಲದ ಮಾರ್ಗದರ್ಶನದಲ್ಲಿ ಕಸಾಪ ಬ್ರಹ್ಮಾವರ ತಾಲೂಕು ಘಟಕದ ಸಹಕಾರದೊಂದಿಗೆ ನಡೆಯುವ ‘ಆಸಾಡಿ ಒಡ್ರ್ ಊರ್ ಕೇರಿ ಬದ್ಕಿನ್ ಹಬ್ಬು’ ಎಂಬ ಶೀರ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದೇ ವೇಳೆ ಬ್ರಹ್ಮಬೈದರ್ಕಳ ಬಿಲ್ಲವ ಸೇವಾ ಸಂಘ ಸಾಸ್ತಾನ ಇದರ ಅಧ್ಯಕ್ಷ ಎಂ.ಸಿ ಚಂದ್ರಶೇಖರ್ ‘ಆಸಾಡಿ ಒಡ್ರ್’ ಪೋಸ್ಟರ್ ಬಿಡುಗಡೆಗೊಳಿಸಿ ಶುಭಹಾರೈಸಿದರು.

ಸಾಹಿತಿ ನರೇಂದ್ರ ಕುಮಾರ್ ಕೋಟ, ಕುಂದಾಪ್ರ ಭಾಷೆ ಅದರ ಬದ್ಕಿನ ಜೀವನ ಶೈಲಿ ವಿಚಾರಗಳ ಬಗ್ಗೆ ಅಧ್ಯಯನ ಅಗತ್ಯವಾಗಿದೆ. ಈ ಬಗ್ಗೆ ಈಗಾಗಲೇ ಸರ್ಕಾರದ ಮುಂದೆ ಎಲ್ಲ ರೀತಿಯ ಒತ್ತಡಗಳು ಎಲ್ಲಾ ಭಾಗದಿಂದಲೂ ನಡೆಯುತ್ತಿದೆ ನಮ್ಮ ವಿಚಾರಧಾರೆಗಳು ಮುಂದಿನ ಪೀಳಿಗೆಯ ದೃಷ್ಠಿಯಿಂದ ಉಳಿಸಿ ಬೆಳಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ವಹಿಸಿದ್ದರು. ಅಭ್ಯಾಗತರಾಗಿ ಸಮಾಜಸೇವಕಿ ಡಾ.ವಾಣಿಶ್ರೀ ಐತಾಳ್, ಕಸಾಪ ಬ್ರಹ್ಮಾವರ ತಾಲೂಕು ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ್, ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಉಪಸ್ಥಿತರಿದ್ದರು.

ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿದರೆ, ಸಂಚಾಲಕಿ ಸುಜಾತ ಎಂ ಬಾಯರಿ ನಿರೂಪಿಸಿದರು. ಪ್ರ. ಕಾರ್ಯದರ್ಶಿ ವಸಂತಿ ಹಂದಟ್ಟು ವಂದಿಸಿದರು. ಕಾರ್ಯಕ್ರಮವನ್ನು ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.