ಕೋಟ: ಪಂಚವರ್ಣದ ಕಚೇರಿಯಲ್ಲಿ ಪರಿಸರಸ್ನೇಹಿ ಸೀಮಂತ

| Published : Jun 28 2025, 12:21 AM IST

ಸಾರಾಂಶ

ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲದ ಸದಸ್ಯೆ 8 ತಿಂಗಳ ತುಂಬು ಗರ್ಭಿಣಿ ಅಕ್ಷತಾ ಅವರಿಂದ 8 ವಿವಿಧ ತಳಿಗಳ ಗಿಡಗಳನ್ನು ನೆಡಿಸಿ, ನೀರೆರೆದು ವಿಶಿಷ್ಟವಾಗಿ ಪರಿಸರ ಸ್ನೇಹಿ ಸೀಮಂತ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಕುಂದಾಪುರಇಲ್ಲಿನ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲದ ಸದಸ್ಯರು ಇತ್ತೀಚೆಗೆ ಸೀಮಂತ ಕಾರ್ಯಕ್ರಮವನ್ನು ಪರಿಸರಸ್ನೇಹಿ ಕಾರ್ಯಕ್ರಮವನ್ನಾಗಿ ವಿಶಿಷ್ಟ ರೀತಿಯಲ್ಲಿ ನಡೆಸಿದರು. ಸಂಘದ ಸದಸ್ಯೆ 8 ತಿಂಗಳ ತುಂಬು ಗರ್ಭಿಣಿ ಅಕ್ಷತಾ ಅವರಿಂದ 8 ವಿವಿಧ ತಳಿಗಳ ಗಿಡಗಳನ್ನು ನೆಡಿಸಿ, ನೀರೆರೆದು ಸೀಮಂತ ಆಚರಿಸಲಾಯಿತು.

ಸಾಮಾನ್ಯವಾಗಿ ಸೀಮಂತ ಮನೆಯಲ್ಲಿ ಅಥವಾ ಸಭಾಂಗಣದಲ್ಲಿ ನಡೆಸುತ್ತಾರಾದರೂ, ಅಕ್ಷತಾ ಅವರ ಸೀಮಂತವನ್ನು ಪಂಚವರ್ಣದ ಕಚೇರಿಯಲ್ಲಿ ನಡೆಸಲಾಯಿತು. ಅಲ್ಲಿ ಸೀಮಂತದ ಎಲ್ಲಾ ಸಂಪ್ರದಾಯಗಳನ್ನು ನೆರವೇರಿಸಲಾಯಿತು. ನಂತರ ಅವರ ಕೈಯಿಂದಲೇ 8 ಗಿಡಳನ್ನು ನೆಡಿಸಲಾಯಿತು.

ಈ ಸಂದರ್ಭ ಅಕ್ಷತಾಳ ತಂದೆ ಪ್ರಭಾಕರ ಕಾಂಚನ್, ತಾಯಿ ಮೂಕಾಂಬಿಕಾ, ಯುವಕ ಮಂಡಲ ಅಧ್ಯಕ್ಷ ಕೆ.ಮನೋಹರ್ ಪೂಜಾರಿ, ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್, ಸಂಚಾಲಕಿ ಸುಜಾತ ಬಾಯರಿ, ಕಾರ್ಯದರ್ಶಿ ವಸಂತಿ ಹಂದಟ್ಟು, ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.

ನಮ್ಮ ಸಂಸ್ಥೆ ಸದಾ ಪರಿಸರ ರಕ್ಷಣೆ, ಸ್ವಚ್ಛತೆ, ಗಿಡ ನೆಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು, ನಾನು ಇದೀಗ ಗರ್ಭಿಣಿಯಾಗಿ ವಿಶ್ರಾಂತಿದಲ್ಲಿದ್ದುದರಿಂದ ಅವುಗಳಲ್ಲಿ ಭಾಗವಹಿಸಲಾಗಿರಲಿಲ್ಲ. ಆದರೆ ನನ್ನ ಸಂಸ್ಥೆ ಈ ರೀತಿಯ ಪರಿಸರಸ್ನೇಹಿ ಸೀಮಂತ ಆಯೋಜಿಸಿದ್ದು ತುಂಬಾ ಸಂತಸ ನೀಡಿದೆ, ಅಲ್ಲದೆ ಇತರರಿಗೆ ಮಾದರಿಯಾಗಿದೆ ಎಂದು ಅಕ್ಷತಾ ಸಂತಸ ವ್ಯಕ್ತಪಡಿಸಿದ್ದಾರೆ.