ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶುವೈದ್ಯರ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀದರ್‌ ಜಿಲ್ಲಾ ಪೊಲೀಸರು ಹಾಗೂ ಸಿಐಡಿ ಅಧಿಕಾರಿಗಳ ಜಂಟಿ ಪಡೆ ಭಾಲ್ಕಿ ಪಟ್ಟಣದ ಲೆಕ್ಚರರ್‌ ಕಾಲೋನಿ ನಿವಾಸ ಹಾಗೂ ಡೋಣಗಾಪುರ ಗ್ರಾಮದಲ್ಲಿರುವ ಬಸವರಾಜ್‌ ಕನ್ನಾಳೆ ಅವರ ಮನೆಗಳ ಮೇಲೆ ದಿಢೀರ್‌ ದಾಳಿ ನಡೆಸಿ ದಾಖಲೆಗಳಿಗಾಗಿ ತೀವ್ರ ಶೋಧ ನಡೆಸಿದೆ.

ಕನ್ನಡಪ್ರಭ ವಾರ್ತೆ ಬೀದರ್‌:

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶುವೈದ್ಯರ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀದರ್‌ ಜಿಲ್ಲಾ ಪೊಲೀಸರು ಹಾಗೂ ಸಿಐಡಿ ಅಧಿಕಾರಿಗಳ ಜಂಟಿ ಪಡೆ ಭಾಲ್ಕಿ ಪಟ್ಟಣದ ಲೆಕ್ಚರರ್‌ ಕಾಲೋನಿ ನಿವಾಸ ಹಾಗೂ ಡೋಣಗಾಪುರ ಗ್ರಾಮದಲ್ಲಿರುವ ಬಸವರಾಜ್‌ ಕನ್ನಾಳೆ ಅವರ ಮನೆಗಳ ಮೇಲೆ ದಿಢೀರ್‌ ದಾಳಿ ನಡೆಸಿ ದಾಖಲೆಗಳಿಗಾಗಿ ತೀವ್ರ ಶೋಧ ನಡೆಸಿದೆ.

ಐಎಎಸ್‌ ಜತೆ ಶಾಮೀಲು:

ಆರೋಪಿ ಬಸವರಾಜ್ ಕನ್ನಾಳೆ, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ ಗಂಗವಾರ್‌ ಅವರೊಂದಿಗೆ ಕೈಜೋಡಿಸಿ ಸುಮಾರು 15 ರಿಂದ 20 ಅಭ್ಯರ್ಥಿಗಳಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ಮಧ್ಯವರ್ತಿಯಾಗಿ ಕೆಲಸ ಮಾಡಿರುವ ಗಂಭೀರ ಆರೋಪ ಎದುರಿಸುತ್ತಿದ್ದಾರೆ.ಅಶ್ವತ್ಥನಾರಾಯಣ ಹೆಸರಲ್ಲೇ ಬಸ್‌ ಸೇವೆ:

ಭಾಲ್ಕಿ, ಬೀದರ್‌ ಸೇರಿದಂತೆ ವಿವಿಧೆಡೆ ಅಪಾರ ಪ್ರಮಾಣದ ಸ್ಥಿರಾಸ್ತಿ ಹೊಂದಿ, ತುಮಕೂರು ವಿವಿಯ ಸಿಂಡಿಕೇಟ್‌ ಸದಸ್ಯನಾಗಿ ಮಾಜಿ ಡಿಸಿಎಂ ಪರಮಾತ್ಮನಾಗಿದ್ದ ಬಸವರಾಜ ಕನ್ನಾಳೆ, ಅಶ್ವತ್ಥನಾರಾಯಣ ಹೆಸರಲ್ಲೇ ಬಸ್‌ ಸೇವೆ ಆರಂಭಿಸಿದ್ದ. ‘ಅಶ್ವಥ ನಾರಾಯಣ ಕನ್ನಾಳೆ ಟ್ರಾವೆಲ್ಸ್‌’ ಹೆಸರಿನಲ್ಲಿ ಬೆಂಗಳೂರು - ಬೀದರ್‌ ಹಾಗೂ ಮುಂಬೈ, ಪುಣೆ ಮಾರ್ಗಗಳಲ್ಲಿ ಖಾಸಗಿ ಬಸ್‌ಗಳನ್ನು ನಡೆಸುತ್ತಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಜಿಪಂ ಸಿಇಒ ಒಡನಾಟದಿಂದ ಅಕ್ರಮ:

2019ರಲ್ಲಿ ಜ್ಞಾನೇಂದ್ರ ಕುಮಾರ್‌ ಗಂಗವಾರ್‌ ಅವರು ಬೀದರ್‌ ಜಿಲ್ಲಾ ಪಂಚಾಯತ್‌ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಬಸವರಾಜ್‌ ಕನ್ನಾಳೆ ಅವರ ಪರಿಚಯವಾಗಿತ್ತು. ಇದೇ ಒಡನಾಟವನ್ನು ಬಂಡವಾಳ ಮಾಡಿಕೊಂಡ ಕನ್ನಾಳೆ, ಮುಂದೆ ಕೆಪಿಎಸ್‌ಸಿ ಪರೀಕ್ಷಾ ನೇಮಕಾತಿಯಲ್ಲಿ ಅಕ್ರಮ ಎಸಗಲು ದಾರಿ ಮಾಡಿಕೊಂಡಿದ್ದ ಎನ್ನಲಾಗಿದೆ.

ರಾಜಧಾನಿ ಬೆಂಗಳೂರು ಹಾಗೂ ದೆಹಲಿಯಲ್ಲಿ ಕ್ಯಾಂಪ್‌ ಹೂಡುತ್ತಿದ್ದ ಈತ, ಪ್ರಭಾವಿ ರಾಜಕೀಯ ನಾಯಕರ ಹೆಸರು ಬಳಸಿಕೊಂಡು ಹತ್ತಾರು ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗ ಕೊಡಿಸುವ ಆಮಿಷ ಒಡ್ಡುತ್ತಿದ್ದ ಆರೋಪಗಳು ಇದ್ದು ತನಿಖೆಯ ನಂತರ ಎಲ್ಲವೂ ಸ್ಪಷ್ಟವಾಗಲಿದೆ.ಕಜಕ್‌ಸ್ತಾನಕ್ಕೆ ಪರಾರಿ ವೇಳೆ ಸಿಐಡಿ ಬಲೆಗೆ ಬಿದ್ದ ಕನ್ನಾಳೆ:

ಕೆಪಿಎಸ್‌ಸಿ ನೇಮಕಾತಿ ಹಗರಣ ಸಂಬಂಧ ಬಂಧನ ಭೀತಿಯಿಂದ ವಿದೇಶದಲ್ಲಿ ತಲೆಮರೆಸಿಕೊಳ್ಳಲು ಯತ್ನಿಸಿದ್ದಾಗ ಬಿಜೆಪಿ ಮುಖಂಡ ಬಸವರಾಜ ಕನ್ನಾಳೆಯನ್ನು ಸಿಐಡಿ ಸೆರೆ ಹಿಡಿದಿದೆ ಎಂದು ತಿಳಿದು ಬಂದಿದೆ. ಈ ಹಗರಣದಲ್ಲಿ ಸಿಐಡಿ ರಾಡಾರ್‌ಗೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಗಂಗ್ವಾರ್ ಸಿಕ್ಕ ಬಳಿಕ ಮತ್ತಷ್ಟು ಆತಂಕಗೊಂಡ ಬಸವರಾಜ, ದೆಹಲಿಯಿಂದ ಕಜಕ್‌ಸ್ತಾನಕ್ಕೆ ಪರಾರಿಯಾಗಲು ಯತ್ನಿಸಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಆತನನ್ನು ಕಸ್ಟಮ್ಸ್ ನೆರವಿನಿಂದ ಆತನನ್ನು ಸಿಐಡಿ ಬಂಧಿಸಿ ಕರೆತಂದಿದೆ ಎಂದು ಮೂಲಗಳು ಹೇಳಿವೆ. ಕೆಪಿಎಸ್‌ಸಿ ನೇಮಕಾತಿ ಅಕ್ರಮ ಬೆಳಕಿಗೆ ಬಂದ ನಂತರ ನಾಪತ್ತೆಯಾಗಿದ್ದ ಬಸವರಾಜನ ಪತ್ತೆಗೆ ಸಿಐಡಿ ರಹಸ್ಯ ಕಾರ್ಯಾಚರಣೆ ನಡೆಸಿತ್ತು. ಆದರೆ ರಾಜ್ಯ ತೊರೆದು ಹೊರರಾಜ್ಯಗಳಲ್ಲಿ ಆತ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ಲುಕ್ ಔಟ್ ನೋಟಿಸ್ ಅನ್ನು ಸಿಐಡಿ ಜಾರಿಗೊಳಿಸಿತ್ತು. ಆದರೆ ಮೂರು ದಿನಗಳ ಹಿಂದೆ ಸಿಐಡಿ ವಿಚಾರಣೆಗೆ ಅಧಿಕಾರಿ ಜ್ಞಾನೇಂದ್ರ ಹಾಜರಾದ ವಿಚಾರ ತಿಳಿದ ಬಸವರಾಜನಿಗೆ ಮತ್ತಷ್ಟು ಆತಂಕ ಹೆಚ್ಚಾಯಿತು. ಈ ಭೀತಿ ಹಿನ್ನಲೆಯಲ್ಲಿ ದೆಹಲಿಯಿಂದ ಕಜಕ್‌ಸ್ತಾನಕ್ಕೆ ಪರಾರಿಯಾಗಲು ಬಸವರಾಜ ಯೋಜಿಸಿದ್ದ. ಆದರೆ ಆತನ ಯೋಜನೆ ತಿರುಗು ಮುರುಗಾಗಿ ಸಿಐಡಿ ಸೆರೆ ಹಿಡಿದಿದೆ ಎಂದು ಮೂಲಗಳು ತಿಳಿಸಿವೆ.