ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಕಾಯಕ ಕರ್ಮ ಯೋಗಿಗಳ ದುಡಿಮೆಯ ಅನುಭವಾಮೃತವೇ ವಚನ ಸಾಹಿತ್ಯ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ತಿಳಿಸಿದರು.ನಗರದ ಕೃಷ್ಣಮೂರ್ತಿಪುರಂನ ನಮನ ಕಲಾ ಮಂಟಪದಲ್ಲಿ ಮೈಸೂರು ಕನ್ನಡ ವೇದಿಕೆಯು ಮಂಗಳವಾರ ಆಯೋಜಿಸಿದ್ದ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ, ಕಾರ್ಮಿಕ ದಿನಾಚರಣೆ, ಅಸಂಘಟಿತ ಕಾರ್ಮಿಕರಿಗೆ ಕಾಯಕಯೋಗಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಕಾಯಕವೇ ಕೈಲಾಸ ಎಂದು ಜಗತ್ತಿಗೆ ಸಾರಿದ ಬಸವಣ್ಣನವರು 12ನೇ ಶತಮಾನದಲ್ಲಿಯೇ ಕಾಯಕ ವರ್ಗಕ್ಕೆ ಹೆಚ್ಚು ಮಹತ್ವ ನೀಡಿದ್ದರು. ಕಾಯಕ ಕರ್ಮ ಯೋಗಿಗಳು ಕಾಯಕ ಮಾಡುತ್ತಲೇ ತಮ್ಮ ಅನುಭವಗಳ ವಿನಿಮಯದ ಮೂಲಕವೇ ವಚನಗಳು ಸೃಷ್ಟಿಯಾದವು. ಅನುಭವ ಮಂಟಪದಲ್ಲಿದ್ದ ಕಾಯಕ ಕರ್ಮಯೋಗಿಗಳು ಕೇವಲ ಮಾತಿಗಷ್ಟೇ ಸೀಮಿತವಾಗದೇ ಪ್ರಯೋಗಿಗಳು ಆಗಿ ಮಾದರಿಯಾಗಿದ್ದರು ಎಂದು ಅವರು ಹೇಳಿದರು.ಬಸವಣ್ಣನವರ ಅನುಭವ ಮಂಟಪದಲ್ಲಿದ್ದ ಎಲ್ಲರು ಬೇರೆ ಬೇರೆ ಜಾತಿಯವರು. ಆದರೂ ಕಾಯಕಗಳು ವಿಭಿನ್ನವಾದರು, ಸಮಾನತೆ ಪ್ರಧಾನವಾಗಿತ್ತು. ಹೀಗಾಗಿ, ಕಾಯಕ ಕರ್ಮಯೋಗಿಗಳು ಎಲ್ಲಾ ಕಾಲಕ್ಕೂ ಸಲ್ಲುವ ವಚನಕಾರರಾಗಿ ಉಳಿದಿದ್ದಾರೆ. ಅವರ ಕಾಯಕ ನಿಷ್ಠೆ, ಆಚಾರ ವಿಚಾರ ಇವತ್ತಿಗೂ ಆದರ್ಶವಾಗಿ ಉಳಿದಿವೆ ಎಂದರು.
ಪ್ರಶಸ್ತಿ ಪ್ರದಾನಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರಾದ ಗುರುರಾಜ್ (ಪೌರಕಾರ್ಮಿಕ), ಚಂದ್ರೇಗೌಡ (ನಲ್ಲಿ ಕೆಲಸ) ರಾಮು (ಮೆಕಾನಿಕಲ್), ಎಂ. ಮಹೇಶ್ (ಔಷಧಿ ಪ್ರತಿನಿಧಿ), ಜಿ. ಅಯೂಬ್ ಅಹಮದ್ (ಶವ ಹುಳುವವರು), ಲಿಂಗರಾಜು (ಮರದ ಕೆಲಸ) ನಾಗತ್ನಾ (ಶೂಶ್ರೂಷಕಾಧಿಕಾರಿ), ಮಂಜುಳಾ (ಸೌಂದರ್ಯ ತಜ್ಞೆ), ನಗರ ಪಾಲಿಕೆ ನಿವೃತ್ತ ಅಧಿಕಾರಿ ಶಿವಸ್ವಾಮಿ ಮತ್ತು ಪತ್ರಕರ್ತ ಎಸ್. ಪ್ರಶಾಂತ್ ಅವರಿಗೆ ಕಾಯಕಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ, ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜೇಂದ್ರ ಸ್ವಾಮಿ, ಎಪಿಎನ್ ಪ್ರಾಪರ್ಟಿಸ್ ಮ್ಯಾನೇಜಿಂಗ್ ಪಾರ್ಟ್ನರ್ ಎ.ಪಿ. ನಾಗೇಶ್, ಮುಖಂಡರಾದ ನಾಲಾಬೀದಿ ರವಿ, ಮನೋಹರ್ ಮೊದಲಾದವರು ಇದ್ದರು.