ಕನ್ನಡಪ್ರಭ ವಾರ್ತೆ ಶಿವಮೊಗ್ಗ ಈಶ್ವರಪ್ಪ ಅವರಿಗೆ ಪ್ರಜಾಪ್ರಭುತ್ವ ಗೊತ್ತಿಲ್ಲ. ಅವರು ಸಂವಿಧಾನ ಓದಿಲ್ಲ. ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದಾಗ ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ ದೂರು ಕೊಟ್ಟಿದ್ದರು. ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ತರಲು ಈಶ್ವರಪ್ಪ ಕೊಡುಗೆಯೇನು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಪ್ರಶ್ನಿಸಿದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪ ಅವರನ್ನು ನಂಬಿ ಒಬ್ಬನಾದರೂ ಶಾಸಕ ಬಿಜೆಪಿಗೆ ಬಂದಿದ್ದಾನಾ? ಬಿಜೆಪಿಯನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರುವ ಶಕ್ತಿ ಈಶ್ವರಪ್ಪ ಅವರಿಗಿಲ್ಲ. ಅವರ ನೇತೃತ್ವದಲ್ಲಿ ಪುರಸಭೆಯಲ್ಲೂ ಪಕ್ಷ ಗೆಲ್ಲಲ್ಲ. ಇಂತಹ ವ್ಯಕ್ತಿ ಡಿ.ಕೆ.ಶಿವಕುಮಾರ್ ರನ್ನು ಏಕವಚನದಲ್ಲಿ ಸಂಬೋಧಿಸುತ್ತಾರೆ ಎಂದು ಕಿಡಿಕಾರಿದರು. ಈಶ್ವರಪ್ಪ ಅವರ ಅರ್ಹತೆ, ಭ್ರಷ್ಟಾಚಾರ ನೋಡಿ ಅವರಿಗಿದ್ದ ಎಲ್ಲ ಅವಕಾಶವನ್ನು ಕಿತ್ತುಕೊಂಡಿದ್ದಾರೆ. ಯಡಿಯೂರಪ್ಪ ಅವರು ಜೈಲಿಗೆ ಹೋದಾಗ ನನ್ನಂಥವನು ಆಗಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದೆ ಅಂದಿದ್ದರು. ಯಡಿಯೂರಪ್ಪ ಜೈಲಿಗೆ ಹೋದಾಗ ಖುಷಿಪಟ್ಟ ನಿಮಗೆ ಕನಿಷ್ಠ ಕೃತಜ್ಞತೆ ಇಲ್ಲ. ಸೌಜನ್ಯಕ್ಕೂ ಜೈಲಿಗೆ ಭೇಟಿ ಸಾಂತ್ವನ ಹೇಳಲಿಲ್ಲ. ಯಡಿಯೂರಪ್ಪ ವಿರುದ್ಧ ಸಂಚು ಮಾಡಿದ ರಾಜಕಾರಣಿ ಈಶ್ವರಪ್ಪ ಎಂದು ಹರಿಹಾಯ್ದರು. ಈಶ್ವರಪ್ಪ ನೀರಾವರಿ ಸಚಿವರಾಗಿದ್ದಾಗ ಗುತ್ತಿಗೆದಾರನ ವಿರುದ್ಧ ನಿಮ್ಮ ಮಗ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಆದರೆ, ಗುತ್ತಿಗೆದಾರ ನಿಮ್ಮನ್ನು ಬಂದು ಭೇಟಿ ಮಾಡಿದಾಗ ಸುಮ್ಮನಾಗಿದ್ದು ಏಕೆ? ನೀವು ನಿರ್ವಹಿಸಿದ ಖಾತೆಗಳಲ್ಲಿ ಲೂಟಿ ಮಾಡಿದ್ದು ಬಿಟ್ಟರೆ ಬೇರೇನು ಮಾಡಲಿಲ್ಲ. ಯಡಿಯೂರಪ್ಪ ವಿರುದ್ದ ದ್ರೋಹದ ರಾಜಕಾರಣ ನಾನು ಮಾಡಿಲ್ಲ. ನಿಮ್ಮಂತೆ ನಾನು ಪಕ್ಷದ ನಾಯಕರ ವಿರುದ್ಧವೇ ಕತ್ತಿ ಮಸೆಯಲಿಲ್ಲ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಲಿಲ್ಲ. ಬದಲಿಗೆ ಮನಸ್ಸಿಗೆ ಸರಿ ಬರಲಿಲ್ಲ ಎಂದಾಗ ಪಕ್ಷ ಬಿಟ್ಟು ಹೊರಬಂದಿದ್ದೇನೆ ಎಂದ ಅವರು, ಇದೇ ರೀತಿ ನಾಲಿಗೆ ಹರಿಬಿಟ್ಟರೆ ನಿಮ್ಮ ಭ್ರಷ್ಟಾಚಾರವನ್ನು ದಾಖಲೆ ಸಮೇತ ಬಿಚ್ಚಿಡ ಬಲ್ಲೆ ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಪ್ರಮುಖರಾದ ಎಸ್.ಕೆ. ಮರಿಯಪ್ಪ, ಧೀರರಾಜ್ ಹೊನ್ನವಿಲೆ ಮತ್ತಿತರರು ಇದ್ದರು. - - - ಟಾಪ್ ಕೋಟ್ ಸ್ಮಾರ್ಟ್ ಸಿಟಿ ಯೋಜನೆಯಡಿ ನೀವು ಎಷ್ಟು ಲೂಟಿ ಹೊಡೆದಿದ್ದೀರಾ, ನಿಮ್ಮ ಕುಟುಂಬದವರ ಪಾತ್ರವೇನು ಎಂಬುದು ಜನತೆಗೆ ಗೊತ್ತಿದೆ. ಹೆರಿಗೆ ಬೇರೆಯವರದ್ದಾದರೆ, ತೊಟ್ಟಿಲು ಕಟ್ಟುವವರು ಈಶ್ವರಪ್ಪ. ಜೈಲಿಗೆ ಹೋಗಿ ಬಂದ ಯಡಿಯೂರಪ್ಪರನ್ನು ಬಿಜೆಪಿಗರು ಒಪ್ಪಿಕೊಳ್ಳುವುದಾರೆ ಡಿ.ಕೆ.ಶಿವಕುಮಾರರನ್ನು ಕಾಂಗ್ರೆಸ್ಸಿಗರು ಒಪ್ಪಿಕೊಳ್ಳಬಾರದೆ? - ಆಯನೂರು ಮಂಜುನಾಥ, ಕಾಂಗ್ರೆಸ್ ಮುಖಂಡ - - - -20ಎಸ್ಎಂಜಿಕೆಪಿ02: ಆಯನೂರು ಮಂಜುನಾಥ್
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.