ಕೆಎಸ್‌ಆರ್‌ಟಿಸಿ ನಗರ ಸಾರಿಗೆ ಸಂಚಾರಕ್ಕೆ ಚಾಲನೆ

| Published : Oct 03 2023, 06:00 PM IST

ಕೆಎಸ್‌ಆರ್‌ಟಿಸಿ ನಗರ ಸಾರಿಗೆ ಸಂಚಾರಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆಎಸ್‌ಆರ್‌ಟಿಸಿ ನಗರ ಸಾರಿಗೆ ಸಂಚಾರಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರ ಬಹಳ ವರ್ಷಗಳ ಬೇಡಿಕೆಯಂತೆ ಕೆಎಸ್‌ಆರ್‌ಟಿಸಿ ನಗರ ಸಾರಿಗೆ ಸಂಚಾರವನ್ನು ಇಂದಿನಿಂದ ಆರಂಭಿಸಲಾಗಿದೆ ಎಂದು ಶಾಸಕ ಎಚ್‌.ಡಿ. ತಮ್ಮಯ್ಯ ಹೇಳಿದರು. ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಎದುರು ಸೋಮವಾರ ನಗರ ಸಾರಿಗೆ ಬಸ್‌ ಸಂಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಚುನಾವಣೆ ಪೂರ್ವದಲ್ಲಿ ಜನರಿಗೆ ಕೊಟ್ಟ ಭರವಸೆಯಂತೆ ಹಾಗೂ ನಗರದಲ್ಲಿ ಪ್ರವಾಸ ಕೈಗೊಂಡಾಗ ಸಾರ್ವಜನಿಕರು ನಗರ ವ್ಯಾಪ್ತಿಯಲ್ಲಿ ಸಾರಿಗೆ ಬಸ್ ಸಂಚಾರ ಆರಂಭಿಸುವಂತೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಇಂದು 4 ಸಾರಿಗೆ ಬಸ್ ಸಂಚಾರವನ್ನು ಆರಂಭಿಸಲಾಗಿದೆ ಎಂದರು. ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಶಕ್ತಿ ಯೋಜನೆಯ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿದ್ದರಿಂದ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು, ಅಂಗವಿಕಲರಿಗೆ ಅನುಕೂಲವಾಗಿದ್ದು, ಈಗ ಸಾರಿಗೆ ಸಂಚಾರ ಆರಂಭಿಸಿರುವುದರಿಂದ ಎಲ್ಲಾ ಪ್ರಯಾಣಿಕರಿಗೂ ಅನುಕೂಲವಾಗಲಿದೆ ಎಂದರು. ನಗರದ ಸಾರ್ವಜನಿಕರ ಅನುಕೂಲಕ್ಕಾಗಿ ಬಸ್ ನಿಲ್ದಾಣದಿಂದ ಹಿರೇಮಗಳೂರು, ಕಲ್ಯಾಣ ನಗರ, ಎಐಟಿ, ಪವಿತ್ರವನ ಮಾರ್ಗವಾಗಿ ಬಸ್ ಸಂಚರಿಸಲಿದೆ. ಇನ್ನೊಂದು ಸಾರಿಗೆ ಮೂಗ್ತಿಹಳ್ಳಿ ಮಾರ್ಗವಾಗಿ ಸಂಚರಿಸಲು ಪ್ರತಿ ದಿನ 40 ನಿಮಿಷಕ್ಕೊಂದು ಸುತ್ತುವಳಿ ಸಾರಿಗೆ ಸಂಚಾರ ನಡೆಯಲಿದೆ ಎಂದರು. ಪವಿತ್ರವನ, ಎಐಟಿ, ಎಪಿಎಂಸಿ. ದಂಟಮಕ್ಕಿ, ಕತ್ರಿಮಾರಮ್ಮ ದೇವಸ್ಥಾನ, ಬಸ್ ನಿಲ್ದಾಣ ತಲುಪಲಿದೆ. ಇದೇ ಬಸ್ಸು ನಂತರ ತೇಗೂರು ಗೇಟ್, ರಾಂಪುರ, ಮೂಗ್ತಿಹಳ್ಳಿ ಮಾರ್ಗವಾಗಿ ಶಿರಗುಂದದವರೆಗೆ 3 ಬಸ್ಸುಗಳು ಪ್ರತಿ 30 ನಿಮಿಷಕ್ಕೊಂದರಂತೆ ಸಂಚರಿಸಲಿವೆ. ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳುವಂತೆ ಮನವಿ ಮಾಡಿದರು. ಬಸ್ ಸಂಚಾರ ಕುರಿತು ಸಮಗ್ರ ಮಾಹಿತಿ ಇರುವ ನಾಮ ಫಲಕಗಳನ್ನು ಅಲ್ಲಲ್ಲಿ ಹಾಕುವ ಮೂಲಕ ವೇಳಾ ಪಟ್ಟಿಯನ್ನು ನಿಗಧಿಪಡಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿ ನೆರವಾಗಬೇಕೆಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೆಎಸ್‌ಆರ್‌ಟಿಸಿ ಚಿಕ್ಕಮಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಆರ್ ಬಸವರಾಜ್ ಮಾತನಾಡಿ, ನಗರ ಹಾಗೂ ಕಸಬಾ ಹೋಬಳಿಯ ನಾಗರಿಕರ ಒತ್ತಾಯದ ಮೇರೆಗೆ ಇಂದು ಎರಡು ರೂಟ್‌ಗಳಿಗೆ ನಗರ ಸಾರಿಗೆ ಬಸ್ ಸಂಚಾರ ಆರಂಭವಾಗಿದ್ದು, ಈ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿಸಿದರು. 2 ಕೆಸಿಕೆಎಂ 3 ಚಿಕ್ಕಮಗಳೂರಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಎದುರು ಸೋಮವಾರ ನಗರ ಸಾರಿಗೆ ಬಸ್‌ ಸಂಚಾರಕ್ಕೆ ಶಾಸಕ ಎಚ್‌.ಡಿ. ತಮ್ಮಯ್ಯ ಅವರು ಚಾಲನೆ ನೀಡಿದರು. ಕೆಎಸ್‌ಆರ್‌ಟಿಸಿ ಡಿಸಿ ಬಸವರಾಜ್‌ ಇದ್ದರು.