ಸಾರಾಂಶ
ಕನ್ನಡಪ್ರ ವಾರ್ತೆ ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ ಕಿರುಷಷ್ಠಿ ಸಾಂಸ್ಕೃತಿಕ ವೈಭವದ ಎರಡನೇ ದಿನದಂದು ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಅವರಿಂದ ಸಂಗೀತ ಸಂಜೆ ನೆರವೇರಿತು. ಮೂರು ಗಂಟೆಗಳ ಕಾಲ ನಡೆದ ಕಾರ್ಯಕ್ರಮವು ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರನ್ನು ರಂಜಿಸಿತು. ಶುಕ್ರವಾರ ನಡೆದ ಕಾರ್ಯಕ್ರಮದ ಆರಂಭದಲ್ಲಿ ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಇವರಿಂದ ನೃತ್ಯ ಸಂಭ್ರಮ ನೆರವೇರಿತು. ಬಳಿಕ ಮೂಡುಬಿದಿರೆಯ ಶ್ರೀ ಆರಾಧನಾ ನೃತ್ಯ ಕೇಂದ್ರದ ಗುರು ವಿದುಷಿ ಸುಖದಾ ಬರ್ವೆ ಇವರ ಶಿಷ್ಯರಿಂದ ನೃತ್ಯ ಸಿಂಚನ ಪ್ರದರ್ಶನಗೊಂಡಿತು. ನಂತರ ನಡೆದ ಸಂಗೀತ ಸಂಜೆಯಲ್ಲಿ ರಾಜೇಶ್ ಕೃಷ್ಣನ್ ಸೇರಿದಂತೆ ಇತರ ಗಾಯಕರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಇವರಿಗೆ ಸುಮಾರು ೨೦ಕ್ಕೂ ಅಧಿಕ ಖ್ಯಾತ ಹಿಮ್ಮೇಳ ವಾದಕರು ಸಹಕಾರ ನೀಡಿದರು. ನಟರಾಜ್ ಶೆಟ್ಟಿಹಳ್ಳಿ ಕಾರ್ಯಕ್ರಮವನ್ನು ನಿರ್ವಹಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಕಲಾವಿದರಿಗೆ ಶಾಲು ಹೊದಿಸಿ ಶ್ರೀ ದೇವರ ಪ್ರಸಾದ ನೀಡಿ ಗೌರವಿಸಿದರು. ಸಹಕಲಾವಿದರಿಗೆ ಶ್ರೀ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಯೇಸುರಾಜ್ ಪ್ರಸಾದ ನೀಡಿ ಗೌರವಿಸಿದರು.ಈ ಸಂದರ್ಭ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಮಾಸ್ಟರ್ ಪ್ಲಾನ್ ಸಮಿತಿಯ ಸ್ಥಳೀಯ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಪವನ್ ಎಂ.ಡಿ, ಅಚ್ಚುತ್ತ ಗೌಡ ಬಳ್ಪ, ಎಸ್ಎಸ್ಪಿಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ಸೇರಿದಂತೆ ದೇವಳದ ಸಿಬ್ಬಂದಿ, ಸಹಸ್ರಾರು ಭಕ್ತರು ಉಪಸ್ಥಿತರಿದ್ದರು. ಹಿರಿಯ ಉಪನ್ಯಾಸಕಿ ರೇಖಾರಾಣಿ, ಸೋಮಶೇಖರ್ ಮತ್ತತು ಉಪನ್ಯಾಸಕಿ ಶ್ರುತಿ ನಿರೂಪಿಸಿದರು.
ಇಂದು ಕಿರುಷಷ್ಠಿ ರಥೋತ್ಸವಚಂಪಾಷಷ್ಠಿ ಜಾತ್ರಾ ಸಮಯದಲ್ಲಿ ಶ್ರೀ ದೇವರಿಗೆ ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಉತ್ಸವಗಳು ನೆರವೇರುತ್ತದೆ. ಆದರೆ ಕಿರುಷಷ್ಠಿ ಮಹೋತ್ಸವದಲ್ಲಿ ಸಂಗೀತ ಮತ್ತು ಕಲಾಪ್ರಿಯನಾದ ಕುಕ್ಕೆ ಸುಬ್ರಹ್ಮಣ್ಯನಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸೇವೆ ಸಲ್ಲಿಸುವುದು ಕ್ಷೇತ್ರದ ವೈಶಿಷ್ಟ್ಯ. ಜ.5ರಂದು ಭಾನುವಾರ ಸಂಜೆ ೬.೩೦ಕ್ಕೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಕಿರುಷಷ್ಠಿ ರಥೋತ್ಸವ ಮತ್ತು ಕುಕ್ಕೆ ಬೆಡಿ ನೆರವೇರಲಿದೆ. ರಥೋತ್ಸವದ ಬಳಿಕ ಶ್ರೀ ದೇವರಿಗೆ ವಿವಿಧ ಮಹಾನ್ ಕಲಾವಿದರಿಂದ ಸಂಗೀತ ಮತ್ತು ನಾಗಸ್ವರ ಮೊದಲಾದ ಸುತ್ತುಗಳ ಉತ್ಸವ ರಾತ್ರಿ ೧೨ ಗಂಟೆ ತನಕ ನಡೆಯಲಿದೆ. ಬಳಿಕ ಮಹಾಪೂಜೆ ನಡೆದು, ನಿತ್ಯೋತ್ಸವ, ಬಂಡಿ ರಥೋತ್ಸವ ಮತ್ತು ಪಾಲಕಿ ಉತ್ಸವ ನೆರವೇರಲಿದೆ.