ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಕ್ಕಳು ಹೊಂದಾಣಿಕೆ ರಾಜಕಾರಣ ಮಾಡಿದ್ದರ ಪರಿಣಾಮ ಗೆಲುವು ಸಾಧಿಸಿದ್ದಾರೆ ಎಂದು ಬಾಲಿಷ ಹೇಳಿಕೆ ನೀಡುವ ಮೂಲಕ ತಾಲೂಕಿನ ಮಾಜಿ ಶಾಸಕ ಕುಮಾರ ಬಂಗಾರಪ್ಪ ಟೈಂ ಪಾಸ್ ರಾಜಕಾರಣಕ್ಕೆ ಇಳಿದಿದ್ದಾರೆ. ಹಾಗಾಗಿ ಪಕ್ಷದಲ್ಲಿ ತಮ್ಮ ಅಸ್ಥಿತ್ವವನ್ನು ಕಳೆದುಕೊಂಡು ವಿಚಲಿತರಾಗಿ ಮಾಡಿರುವ ಆರೋಪ ನಿರಾದಾರ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಡಾ. ಎಚ್.ಇ. ಜ್ಞಾನೇಶ್ ಸ್ಪಷ್ಟಪಡಿಸಿದರು.

ಕನ್ನಡಪ್ರಭ ವಾರ್ತೆ ಸೊರಬ

ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಕ್ಕಳು ಹೊಂದಾಣಿಕೆ ರಾಜಕಾರಣ ಮಾಡಿದ್ದರ ಪರಿಣಾಮ ಗೆಲುವು ಸಾಧಿಸಿದ್ದಾರೆ ಎಂದು ಬಾಲಿಷ ಹೇಳಿಕೆ ನೀಡುವ ಮೂಲಕ ತಾಲೂಕಿನ ಮಾಜಿ ಶಾಸಕ ಕುಮಾರ ಬಂಗಾರಪ್ಪ ಟೈಂ ಪಾಸ್ ರಾಜಕಾರಣಕ್ಕೆ ಇಳಿದಿದ್ದಾರೆ. ಹಾಗಾಗಿ ಪಕ್ಷದಲ್ಲಿ ತಮ್ಮ ಅಸ್ಥಿತ್ವವನ್ನು ಕಳೆದುಕೊಂಡು ವಿಚಲಿತರಾಗಿ ಮಾಡಿರುವ ಆರೋಪ ನಿರಾದಾರ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಡಾ. ಎಚ್.ಇ. ಜ್ಞಾನೇಶ್ ಸ್ಪಷ್ಟಪಡಿಸಿದರು.

ಪಟ್ಟಣದ ಹೊಸಪೇಟೆ ಬಡಾವಣೆಯ ಬಿಜೆಪಿ ಕಾರ್ಯಾಲಯದಲ್ಲಿ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕುಮಾರ್ ಬಂಗಾರಪ್ಪ ಹಲವು ಚುನಾವಣೆಗಳಲ್ಲಿ ಸೋತು ರಾಜಕೀಯ ಭವಿಷ್ಯ ತೆರೆಗೆ ಸರಿಯುತ್ತಿದ್ದ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ, ಅವರನ್ನು ಬಿಜೆಪಿಗೆ ಕರೆತಂದು ಸೊರಬ ಶಾಸಕರನ್ನಾಗಿ ಮಾಡಿದರು. ಅವರ ಆಶೀರ್ವಾದ, ಶ್ರೀರಕ್ಷೆ ಇಲ್ಲದಿದ್ದರೆ ಕುಮಾರ ಬಂಗಾರಪ್ಪ ಗೆಲುವು ಸಾಧಿಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ರಾಜಕೀಯವಾಗಿ ಮರುಜನ್ಮ ನೀಡಿದ ಯಡಿಯೂರಪ್ಪ ಕುಟುಂಬಕ್ಕೆ ಋಣಿಯಾಗಿರಬೇಕಿದ್ದ ಅವರು ಸಲ್ಲದ ಆರೋಪ ಮಾಡುತ್ತಿರುವುದು ಅವರ ವ್ಯಕ್ತಿತ್ವವನ್ನು ಪ್ರಚುರಪಡಿಸುತ್ತದೆ ಎಂದು ಹರಿಹಾಯ್ದರು.

ಬಿಜೆಪಿಯಿಂದ ಗೆದ್ದ ನಂತರ ಕಾರ್ಯಕರ್ತರನ್ನು ಮರೆತ ಅವರು ಹಾದಿಬೀದಿಯಲ್ಲಿನ ಸಾರ್ವಜನಿಕರಿಗೆ ತೊಂದರೆ ಕೊಟ್ಟು ದೌರ್ಜನ್ಯ ಮೆರೆದಿದ್ದಾರೆ. ಐದು ವರ್ಷಗಳ ಅವಧಿಯಲ್ಲಿ ಬೆರಳೆಣಿಕೆಯ ಹಿಂಬಾಲಕರನ್ನು ಮುಂದಿಟ್ಟುಕೊಂಡು ಹಿಟ್ಲರ್ ರಾಜಕಾರಣ ಮಾಡಿದ್ದಾರೆ ಅಲ್ಲದೇ ನೆರವಾದವರನ್ನು ಮರೆತ ಕಾರಣ ಕಳೆದ ಚುನಾವಣೆಯಲ್ಲಿ ಅತ್ಯಂತ ಹೀನಾಯವಾಗಿ ಪರಾಜಯಗೊಂಡಿದ್ದಾರೆ ಎಂದ ಅವರು, ಹಿಟ್ಲರ್ ಅಧಿಕಾರ ತಾಲೂಕಿನಲ್ಲಿ ನಡೆಯುವುದಿಲ್ಲ. ಅದನ್ನೇ ಮುಂದುವರೆಸಿದರೆ ರಾಜಕೀಯ ಭವಿಷ್ಯ ಇನ್ನಷ್ಟು ಶೂನ್ಯವಾಗುವ ಮೊದಲು ತಮ್ಮ ದಾರಿ ತಾವು ನೋಡಿಕೊಳ್ಳುವುದು ಉತ್ತಮ ಎಂದು ಎಚ್ಚರಿಸಿದರು.

ಸಂಸದ ಬಿ.ವೈ. ರಾಘವೇಂದ್ರ ತಾಲೂಕಿನ ಅಭಿವೃದ್ಧಿಗಾಗಿ ನೂರಾರು ಕೋಟಿ ರುಗಳನ್ನು ಬಿಡುಗಡೆ ಮಾಡಿದ್ದಾರೆ. ಇದರಿಂದ ಸಮುದಾಯ ಭವನ ನಿರ್ಮಾಣವಾಗಿವೆ. ಏತ ನೀರಾವರಿಯಿಂದ ರೈತ ಸಮೂಹಕ್ಕೆ ನೆರವಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಶ್ರೇಷ್ಠರು ಎನ್ನುವ ಕುಮಾರ ಬಂಗಾರಪ್ಪ, ಅವರ ಹುಟ್ಟುಹಬ್ಬದ ನೆನಪಿಗಾಗಿ ಯಾವ ಜನೋಪಯೋಗಿ ಕಾರ್ಯಕ್ರಮ ಮಾಡಿದ್ದಾರೆ ಎನ್ನುವುದನ್ನು ತಿಳಿಸಲಿ ಎಂದ ಅವರು, ಕಳೆದ ಮೂರು ವರ್ಷಗಳಿಂದ ತಾಲೂಕಿಗೆ ಅಪರೂಪದ ಅತಿಥಿಯಾಗಿ ಬರುವ ಅವರು ಯಾವ ಬಿಜೆಪಿ ಕಾರ್ಯಕರ್ತರನ್ನೂ ಭೇಟಿಯಾಗಿ ಸಭೆ ನಡೆಸಿಲ್ಲ. ಕಳೆದ ೧೦ ವರ್ಷಗಳಲ್ಲಿ ಬಣ ರಾಜಕಾರಣಕ್ಕಿಳಿದು ಸಂಘಟನೆಗೆ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸೊರಬ ಬಿಜೆಪಿ ಮಂಡಲ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ ಮಾತನಾಡಿ, ತಾಲೂಕಿನಲ್ಲಿ ಪಕ್ಷ ನಾಲ್ಕು ಭಾಗವಾಗುತ್ತೆ. ಇದಕ್ಕೆ ಕಾರಣ ಬಿ.ಎಸ್. ಯಡಿಯೂರಪ್ಪ ಅವರ ಮಕ್ಕಳು ಎಂದು ಕುಮಾರ ಬಂಗಾರಪ್ಪ ಹೇಳಿರುವುದು ಖಂಡನೀಯ. ಪಕ್ಷದಲ್ಲಿ ಯಾವುದೇ ಬಣವಿಲ್ಲ. ಬಣ ರಾಜಕಾರಣವನ್ನು ಅವರೇ ಸೃಷ್ಠಿಸಿಕೊಂಡಿದ್ದಾರೆ. ಪಕ್ಷದ ಬಗ್ಗೆ ಮತ್ತು ರಾಜ್ಯಾಧ್ಯಕ್ಷರು, ಹಿರಿಯ ಮುಖಂಡರ ಬಗ್ಗೆ ಸಲ್ಲದ ಹೇಳಿಕೆ ನೀಡುತ್ತಿರುವ ಅವರನ್ನು ಕೂಡಲೇ ಪಕ್ಷದಿಂದ ಉಚ್ಛಾಟನೆಗೊಳಿಸಿ ಎಂದು ತಾಲೂಕಿನ ಕಾರ್ಯಕರ್ತರು ಪತ್ರದ ಮೂಲಕ ದೂರು ಸಲ್ಲಿಸಿದ್ದಾರೆ. ಆದರೆ ತಾವು ಜಿಲ್ಲೆ ಮತ್ತು ರಾಜ್ಯ ಮುಖಂಡರಿಗೆ ರವಾನಿಸಿಲ್ಲ. ಈಗಲೇ ಎಚ್ಚೆತ್ತುಕೊಂಡು ತೆರೆದ ಬಾಗಿಲಿನಿಂದ ಹೆಜ್ಜೆ ಹೊರಹಾಕುವುದೇ ಒಳಿತು ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ದಿಶಾ ಸಮಿತಿ ಸದಸ್ಯ ದೇವೇಂದ್ರಪ್ಪ ಚನ್ನಾಪುರ, ಒಬಿಸಿ ಮೋರ್ಚಾ ತಾಲೂಕು ಅಧ್ಯಕ್ಷ ಬುಳ್ಳಿ ವಿನಾಯಕ, ಮುಖಂಡರಾದ ಹರೀಶ್, ಮಾರುತಿ, ಸುರೇಶ್, ವಿನಯ್ ಶೆರ್ವಿ ಮೊದಲಾದವರು ಹಾಜರಿದ್ದರು.