ಇಂದು ಕಡೇಶಿವಾಲಯದಲ್ಲಿ 17ನೇ ಮಕ್ಕಳ ಸಾಹಿತ್ಯ ಸಮ್ಮೇಳನ

| Published : Dec 06 2023, 01:15 AM IST

ಸಾರಾಂಶ

ಬಂಟ್ವಾಳ ತಾಲೂಕಿನ ಕಡೇಶಿವಾಲಯದಲ್ಲಿ ಇಂದು ೧೭ನೇ ಮಕ್ಕಳ ಸಾಹಿತ್ಯ ಸಮ್ಮೇಳನ, ಸಾನ್ವಿ ಸುವರ್ಣ ಸಮ್ಮೇಳನದ ಸರ್ವಾಧ್ಯಕ್ಷೆ

ಕನ್ನಡಪ್ರಭ ವಾರ್ತೆ ಬಂಟ್ವಾಳ

ಮಕ್ಕಳ ಕಲಾ ಲೋಕ, ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ17ನೇ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನವು ಡಿ.6ರಂದು ಕಡೇಶಿವಾಲಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ ಎಂದು ಸಮ್ಮೇಳನ ಸ್ವಾಗತ ಸಮಿತಿ ಗೌರವಾಧ್ಯಕ್ಷ ಕುರುಂಬ್ಲಾಜೆ ಕಿಟ್ಟಣ ಶೆಟ್ಟಿ ಹೇಳಿದ್ದಾರೆ.

ಬಿ,ಸಿ,.ರೋಡಿನ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಡೇಶಿವಾಲಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ಎಸ್. ರಾವ್ ಮೆರವಣಿಗೆಯನ್ನು ಉದ್ಘಾಟಿಸುವರು. ಕಡೇಶಿವಾಲಯ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಕುಮಾರಿ ಸಾನ್ವಿ ಸುವರ್ಣ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿರುತ್ತಾರೆ. ಹಿಂದಿನ ಸಮ್ಮೇಳನಾಧ್ಯಕ್ಷೆ ಓಜಾಲ ಶಾಲಾ ವಿದ್ಯಾರ್ಥಿನಿ ಕುಮಾರಿ ಶ್ರುತಿಕಾ ಬಾಕಿಮಾರು ಉದ್ಘಾಟಿಸುವರು. ಮಕ್ಕಳ ಸ್ವರಚಿತ ಕೃತಿಗಳನ್ನು ಕವಿ ವಿಶ್ವನಾಥ ಕುಲಾಲ್ ಮಿತ್ತೂರು ಬಿಡುಗಡೆಗೊಳಿಸುವರು. ಬದಿಯಡ್ಕ ಶ್ರೀ ಭಾರತಿ ವಿದ್ಯಾಪೀಠದ 10ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಆರಾಧ್ಯ ರೈ ಕೆ. ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದವರು ವಿವರಿಸಿದರು.

ಪ್ರಾಥಮಿಕದಿಂದ ಪದವಿಪೂರ್ವ ಕಾಲೇಜು ತನಕದ ಸುಮಾರಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಮ್ಮೇಳನದ ವಿವಿಧ ಚಟುವಟಿಕೆಗಳಾದ ಚಿತ್ತ ಚಿತ್ತಾರ, ಕಿರುನಾಟಕ, ಸಾಹಿತ್ಯ ಸ್ವರಚನೆ, ಮಾತುಕತೆ ಮತ್ತು ಸಾಹಿತ್ಯಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ. ಅವರೊಂದಿಗೆ ಶಿಕ್ಷಕರು ಮತ್ತು ಹೆತ್ತವರು ಭಾಗವಹಿಸಲಿದ್ದು ಒಟ್ಟು ಸಮಾರು 1500ಜನರು ಆಗಮಿಸುವ ನಿರೀಕ್ಷೆಯಿದೆ ಎಂದು ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ಹರಿಶ್ಚಂದ್ರ ಎಂ. ತಿಳಿಸಿದರು.

ಸ್ವಾಗತ ಸಮಿತಿಯಲ್ಲಿ ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ ಅಧ್ಯಕ್ಷರಾಗಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭಾಗವಸಲಿದ್ದಾರೆ. ಮಂಗಳೂರು ಎಕ್ಸ್‌ಪರ್ಟ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕಾರ್ತಿಕೇಯ ಆರ್. ಮಯ್ಯ ಸಮಾರೋಪ ಭಾಷಣ ಮಾಡವರು. ಪಾಣೆಂಗಳೂರಿನ ಶ್ರೀ ಶಾರದಾ ಪ್ರೌಢಶಾಲೆಗೆ ಬಂಟ್ವಾಳ ತಾಲೂಕು ಸಾಹಿತ್ಯ ತಾರೆ ಪ್ರಶಸ್ತಿ, ರಾಜೇಶ ವಿಟ್ಲ ಇವರಿಗೆ ತಾಲೂಕು ಮಟ್ಟದ ಬಾಲಬಂಧು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಕ್ಕಳ ಕಲಾ ಲೋಕದ ಅಧ್ಯಕ್ಷ ರಮೇಶ ಎಂ ಬಾಯಾರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಬು ಪೂಜಾರಿ ಕೆ. , ಮಕ್ಕಳ ಕಲಾ ಲೋಕದ ಉಪಾಧ್ಯಕ್ಷ ಶಿವರಾಮ ಭಟ್ ನೆಡ್ಲೆ, ಕಾರ್ಯದರ್ಶಿ ಪುಷ್ಪಾ ಎಚ್, ಸ್ವಾಗತ ಸಮಿತಿಯ ವಿದ್ಯಾಧರ ರೈ ಹಾಗೂ ಶರತ್ ಕುಮಾರ್ ಹಾಜರಿದ್ದರು.