ಕನ್ನಡಪ್ರಭವಾರ್ತೆ ಸೋಮವಾರಪೇಟೆ

ನಿವೇಶನ ರಹಿತ ಬಡವರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ, ಕರ್ನಾಟಕ ಬಹುಜನ ಕಾರ್ಮಿಕ ಸಂಘಟನೆಯ ನೇತೃತ್ವದಲ್ಲಿ ಕುಂಬೂರು ಗ್ರಾಮದ ಪೈಸಾರಿ ಜಾಗದಲ್ಲಿ ವಸತಿರಹಿತ ಕಾರ್ಮಿಕರು ನಡೆಸುತ್ತಿರುವ ಅಹೋರಾತ್ರಿ ಧರಣಿ ೫ನೇ ದಿನಕ್ಕೆ ಕಾಲಿಟ್ಟಿದೆ. ಧರಣಿಯಲ್ಲಿ ವಸತಿ ರಹಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೊದಲ ದಿನ ಶನಿವಾರ ತಹಸೀಲ್ದಾರ್, ಡಿಎಫ್‌ಒ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಭೇಟಿ ನೀಡಿ ಧರಣಿ ನಿರತರನ್ನು ಚರ್ಚೆ ಮಾಡಿದರು.ಪ್ರಾರಂಭದಲ್ಲಿ ೪೦೦ ಕುಟಂಬಗಳು ಧರಣಿಯಲ್ಲಿ ಭಾಗವಹಿಸಿದ್ದು. ಮಂಗಳವಾರ ಧರಣಿನಿರತರ ಸಂಖ್ಯೆ ೬೦೦ಕ್ಕೆ ಏರಿಕೆ. ವಸತಿರಹಿತರ ಧರಣಿಗೆ ಸಂಬಂಧಿಸಿದಂತೆ ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮಳೆಯಿಂದ ರಕ್ಷಣೆ ಪಡೆಯಲು ಟಾರ್ಪಲ್ ಹೊದಿಕೆಯ ಪೆಂಡಾಲ್ ಮಾಡಿಕೊಂಡಿದ್ದಾರೆ. ವಸತಿರಹಿತರು ಮನೆಯಿಂದ ಪಡಿತರ ತಂದುಕೊಂಡು ಅಡುಗೆ ಮಾಡಿಕೊಳ್ಳುಕೊಳ್ಳುತ್ತಿದ್ದಾರೆ. ವೃದ್ದ ಮಹಿಳೆಯರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ರಾತ್ರಿ ಮಲಗಿದ್ದಾಗ ಹಾವುಗಳ ಭಯವಿದೆ. ಇನ್ನೊಂದು ಕಾಡಾನೆಗಳ ಆತಂಕವೂ ಇದೆ ಎಂದು ಧರಣಿ ನಿರತ ಗೀತಾಮಣಿ ಹೇಳಿದರು.ಕಾರ್ಮಿಕ ಸಂಘಟನೆ ಅಧ್ಯಕ್ಷ ಕೆ.ಮೊಣ್ಣಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ಸೋಮವಾರಪೇಟೆ ಹಾಗೂ ಕುಶಾಲನಗರ ತಾಲ್ಲೂಕಿನಲ್ಲಿ ೩೦ ಸಾವಿರದಷ್ಟು ವಸತಿರಹಿತರಿದ್ದಾರೆ. ಅವರಿಗೆ ಗುಡಿಸಲು ಕಟ್ಟಿಕೊಳ್ಳಲು ಕೊಡುವಷ್ಟು ಪೈಸಾರಿ ಜಾಗವಿದೆ. ಆದರೆ ಸರ್ಕಾರಕ್ಕೆ ಬಡವರಿಗೆ ನಿವೇಶನ ನೀಡುವ ಮನಸ್ಸಿಲ್ಲ. ಪೈಸಾರಿ ಜಾಗವನ್ನು ಉಳ್ಳವರು ಒತ್ತುವರಿ ಮಾಡಿಕೊಂಡಿದ್ದಾರೆ. ಈಗಲೂ ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಅಂತಹವರಿಗೆ ಹಕ್ಕುಪತ್ರಗಳನ್ನೂ ನೀಡುವ ಶಪ್ರಯತ್ನ ನಡೆದಿದೆ ಎಂದು ದೂರಿದರು. ತಾಲೂಕು ಕಾರ್ಯನಿರ್ವಹಣಾಧಿಕಾರಿಗಳ ಮಾಹಿತಿ ಪ್ರಕಾರ ೨೦೧೪ರವರೆಗೆ ೬೫೦೦ ಮಂದಿ ವಸತಿ ರಹಿತರು ಅರ್ಜಿ ಸಲ್ಲಿಸಿದ್ದಾರೆ. ಕಳೆದ ೧೨ ವರ್ಷಗಳಿಂದ ಬಡವರು, ಕಾರ್ಮಿಕರಿಂದ ಅರ್ಜಿಯನ್ನು ಪಡೆದುಕೊಳ್ಳದೆ ಅನ್ಯಾಯವೆಸಗಲಾಗಿದೆ. ತಾಲೂಕಿನಲ್ಲಿರುವ ವಸತಿರಹಿತ ಬಡವರಿಗೆ ಉಚಿತ ನಿವೇಶನ ನೀಡುವ ತನಕ ಆಹೋರಾತ್ರಿ ಧರಣಿ ನಡೆಯಲಿದೆ ಎಂದು ಹೇಳಿದರು.