ರೋಟರಿ ಉ.ಕ. ಬ್ಲಡ್ ಬ್ಯಾಂಕ್‌ನಲ್ಲಿ ರೋಟರಿ ಕ್ಲಬ್‌ನ ೪೯ನೇ ಸಂಸ್ಥಾಪನಾ ದಿನ ಸಮಾರಂಭ

ಕನ್ನಡಪ್ರಭ ವಾರ್ತೆ ಕುಮಟಾ

ಕುಮಟಾ ರೋಟರಿ ಕ್ಲಬ್ ಕಾರ್ಯವೈಖರಿ ಅನುಸರಣೀಯವಾಗಿದೆ. ಅಪಾರ ಅನುಭವಿ ಹಿರಿಯ ಸದಸ್ಯರ ಬಳಗವನ್ನು ಹೊಂದಿರುವ ಕುಮಟಾ ರೋಟರಿಯು ಮುಂದಿನ ವರ್ಷ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಅತ್ಯಂತ ಸಂತಸದ ಸಂಗತಿ ಎಂದು ರೋಟರಿ ಉಪಪ್ರಾಂತಪಾಲ ಮಹೇಶ ಕಲ್ಯಾಣಪುರ ಹೇಳಿದರು.

ಪಟ್ಟಣದ ಬಗ್ಗೋಣ ರಸ್ತೆಯಲ್ಲಿರುವ ರೋಟರಿ ಉ.ಕ. ಬ್ಲಡ್ ಬ್ಯಾಂಕ್‌ನಲ್ಲಿ ರೋಟರಿ ಕ್ಲಬ್‌ನ ೪೯ನೇ ಸಂಸ್ಥಾಪನಾ ದಿನ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಿಲ್ಲಾ ಆರ್‌ಐಡಿ ಕಾರ್ಯದರ್ಶಿ ಡಾ. ಸಂಜು ನಾಯಕ ಮಾತನಾಡಿ, ಕುಮಟಾ ರೋಟರಿಗೆ ರೋಟರಿಯ ಜಿಲ್ಲಾಹಂತಕ್ಕೆ ಹೆಚ್ಚಿನ ಪ್ರಾತಿನಿಧ್ಯ ದೊರೆಯುವ ಅವಕಾಶಗಳಿವೆ. ಹೀಗಾಗಿ ಭವಿಷ್ಯದಲ್ಲಿ ರೋಟರಿ ಜಿಲ್ಲಾ ಪ್ರಾಂತಪಾಲರ ಸ್ಥಾನಕ್ಕೆ ಅರ್ಹ ನಾಯಕತ್ವ ಹೊರಹೊಮ್ಮಲು ಸದಸ್ಯರು ಪ್ರಬಲ ಆಕಾಂಕ್ಷೆಯೊಂದಿಗೆ ದೃಢ ಸಂಕಲ್ಪಿತರಾಗಬೇಕು ಎಂದರು.


ನಿಕಟಪೂರ್ವ ಅಧ್ಯಕ್ಷ ಅತುಲ ಕಾಮತ ಅವರನ್ನು ಸನ್ಮಾನಿಸಲಾಯಿತು. ಡಾ. ಶ್ರೀದೇವಿ ಭಟ್ ಪ್ರಾರ್ಥನೆ ಪ್ರಸ್ತುತಪಡಿಸಿದರು. ರೋಟರಿ ಅಧ್ಯಕ್ಷ ಕಿರಣ ನಾಯಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಕಟಪೂರ್ವ ಕಾರ್ಯದರ್ಶಿ ವಿನಾಯಕ ಹೆಗಡೆ ರೋಟರಿ ಕ್ಲಬ್ ಬೆಳೆದು ಬಂದ ಬಗೆಯನ್ನು ವಿವರಿಸಿದರು. ರೋಟರಿ ಸರ್ವೀಸ್ ಸೊಸೈಟಿಯ ಅಧ್ಯಕ್ಷ ವಸಂತ ರಾವ್ ನಾದಶ್ರೀ ಕಲಾಕೇಂದ್ರದ ಪ್ರಗತಿ ಹಾಗೂ ಪ್ರಸ್ತುತ ಬೆಳವಣಿಗೆಗಳನ್ನು ವಿವರಿಸಿದರು. ಖಜಾಂಚಿ ಗುರುಪ್ರಸಾದ ಕಾಮತ ಗಣ್ಯರನ್ನು ಪರಿಚಯಿಸಿದರು. ಕಾರ್ಯದರ್ಶಿ ನಿಖಿಲ್ ಕ್ಷೇತ್ರಪಾಲ ವಂದಿಸಿದರು. ಜಯವಿಠ್ಠಲ ಕುಬಾಲ ಹಾಗೂ ಡಾ. ಶ್ರೀದೇವಿ ಭಟ್ ಕಾರ್ಯಕ್ರಮ ನಿರೂಪಿಸಿದರು. ಗಣೇಶ ನಾಯ್ಕ ಮಿರ್ಜಾನ ಇದ್ದರು.