ದಾಬಸ್ಪೇಟೆ: ಕುಮುದ್ವತಿ ಸೇತುವೆ ತಡೆಗೋಡೆ ಕುಸಿದಿದ್ದು ವಾಹನ ಸವಾರರು ಹಾಗೂ ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ. ರಾಷ್ಟ್ರೀಯ ಹೆದ್ದಾರಿ 48ರ ಜಾಸ್ ಟೋಲ್ನಿಂದ ಹುರುಳಿ ಮಾರ್ಗವಾಗಿ ಬೈರಸಂದ್ರ ಗ್ರಾಮಕ್ಕೆ ಹೋಗುವ ಲೋಕೋಪಯೋಗಿ ರಸ್ತೆಯಲ್ಲಿ ಕುಮುದ್ವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಗಿದೆ. ಸೇತುವೆಯ ಎರಡೂ ಕಡೆಯ ತಡೆಗೋಡೆ ಕುಸಿದಿದೆ.
30 ಅಡಿ ಗುಂಡಿ: ಸೇತುವೆ ಸಮೀಪವೇ ಎತ್ತಿನಹೊಳೆ ಯೋಜನೆಗಾಗಿ 25ರಿಂದ 30 ಅಡಿ ಆಳದ ಗುಂಡಿಗಳನ್ನು ತೆಗೆದು ಕಂಬಿ ಹಾಗೂ ಅರ್ಧದಷ್ಟು ಕಾಂಕ್ರೀಟ್ ಹಾಕಿ ಬಿಡಲಾಗಿದೆ. ಸೇತುವೆಗೆ ತಡೆಗೋಡೆ ಇಲ್ಲದ ಪರಿಣಾಮ ಸ್ವಲ್ಪ ಯಾಮಾರಿದರೂ, ದೊಡ್ಡ ಅನಾಹುತವಾಗಲಿದೆ. ಭೈರಸಂದ್ರ ಗ್ರಾಮದ ರೈತರು ದನಕರು, ಕುರಿ, ಮೇಕೆಗಳನ್ನು ಮೇಯಿಸಲೆಂದು ನಿತ್ಯ ತಡೆಗೋಡೆಯಿಲ್ಲದ ಸೇತುವೆ ಮೇಲೆ ಓಡಾಡಬೇಕಿದ್ದು, ದನಕರುಗಳು ಸ್ವಲ್ಪ ಬೆದರಿದರೂ ಅಪಾಯ ತಪ್ಪಿದ್ದಲ್ಲ.ಅಪಘಾತ ವಲಯ: ಸೇತುವೆಯ ಎರಡೂ ಕಡೆ ದೊಡ್ಡ ತಿರುವು ಇರುವ ಕಾರಣ ಈ ಪ್ರದೇಶವನ್ನು ಅಪಘಾತ ವಲಯವೆಂಬ ನಾಮಫಲಕ ಅಳವಡಿಸಲಾಗಿದೆ. ಈ ರಸ್ತೆಯಲ್ಲಿ ಲಾರಿ, ಬಸ್, ಕಾರು, ಬೈಕ್ಗಳು ಹೆಚ್ಚಾಗಿ ಓಡಾಡುವುದರಿಂದ ಸೇತುವೆ ಬಳಿ ಸ್ವಲ್ಪ ಆಯಾ ತಪ್ಪಿದರೆ ಕೆಳಗೆ ಬೀಳುವರು. ತಕ್ಷಣ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಈ ಸೇತುವೆಗೆ ತಡೆಗೋಡೆ ನಿರ್ಮಾಣ ಮಾಡಬೇಕಾಗಿದೆ.
ಸೇತುವೆ ಸಾಮರ್ಥ್ಯ ಪರಿಶೀಲನೆಗೆ ಮನವಿ: ಕುಮುದ್ವತಿ ನದಿಗೆ ಅಡ್ಡಲಾಗಿ ಬಹಳಷ್ಟು ವರ್ಷಗಳ ಹಿಂದೆ ಸೇತುವೆ ನಿರ್ಮಿಸಲಾಗಿದ್ದು, ಪ್ರಸ್ತುತ ಸೇತುವೆ ತಡೆ ಗೋಡೆ ಕಂಬಿಗಳು, ಸಿಮೆಂಟ್ ಕುಸಿದಿರುವ ಪರಿಣಾಮ ಸೇತುವೆ ಮೇಲೆ ವಾಹನಗಳು ಸಂಚಾರ ಸಾಮರ್ಥ ಪರಿಶೀಲಿಸಬೇಕಿದೆ.