ಉಡುಪಿ: ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಯೋಜನೆಯ ಪ್ರಥಮ ಪಿಯುಸಿಯ ವಿದ್ಯಾರ್ಥಿ ನಿಖಿಲ್ ಎಸ್. (ಶ್ರೀಮತಿ ಕುಸುಮಾ ಮತ್ತು ದಿ. ಶಿವರಾಮ ಇವರ ಪುತ್ರ ಎಸ್.ಎಸ್.ಎಲ್.ಸಿ. ಯಲ್ಲಿ ಶೇ 97.6 ಅಂಕ) ಇವರಿಗೆ ಕುಂದಾಪುರ ತಾಲೂಕಿನ ಜಪ್ತಿಯಲ್ಲಿ ಪಾಂಡೇಶ್ವರ ಮಂಜುನಾಥ ಹೊಳ್ಳ ಅವರ ಸ್ಮರಣಾರ್ಥ ಅವರ ಪುತ್ರಿಯರ ಪ್ರಾಯೋಜಕತ್ವದಲ್ಲಿ, 7 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆ ‘ಮಂಜುನಾಥ ನಿಲಯ’ ವನ್ನು ಸರಸ್ವತಿ ಹೊಳ್ಳರು ಶನಿವಾರ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ದಾನಿಗಳಲ್ಲೊಬ್ಬರಾದ ಡಾ. ಗೀತಾ ಸಾಮಕ್ ನಮ್ಮ ತಂದೆಯವರೇ ನಮಗೆ ಸ್ಫೂರ್ತಿ. ದೃಷ್ಟಿ ತೊಂದರೆ ನಡುವೆಯೂ ಅವರು ಕೃಷಿಯಲ್ಲಿ ಆ ಕಾಲಕ್ಕೆ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಮಾದರಿ ಕೃಷಿಕರಾಗಿದ್ದರು. ಹತ್ತಕ್ಕೂ ಮಿಕ್ಕಿ ಮನೆಗಳನ್ನು ನಿರ್ಮಿಸಿ ಕೊಟ್ಟು ಬಡವರಿಗೆ ಆಸರೆಯಾಗಿದ್ದರು. ನಾವು ಐವರು ಹೆಣ್ಣುಮಕ್ಕಳು ಶಿಕ್ಷಣ ಪಡೆದು ಉದ್ಯೋಗಸ್ಥರಾಗುವಲ್ಲಿ ಅಮ್ಮನ ಕಾಳಜಿಯು ಅಷ್ಟೇ ಮುಖ್ಯವಾಗಿತ್ತು. ಇಂದು ಅಮ್ಮನ ಕೈಯಿಂದಲೇ ಈ ಮನೆಯನ್ನು ಉದ್ಘಾಟಿಸುವ ಅವಕಾಶ ಪುತ್ರಿಯರಾದ ನಮಗೆ ಧನ್ಯತೆ ತಂದಿದೆ ಎಂದರು.ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿವಮೊಗ್ಗದ ಮಾಜಿ ರೋಟರಿ ಗವರ್ನರ್ ಡಾ.ಪಿ.ನಾರಾಯಣ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ಆಗಮಿಸಿದ್ದರು.ಹೊಳ್ಳರ ಕುಟುಂಬಕ್ಕೆ ಕಲಾರಂಗದ ಕೆಲಸವನ್ನು ಪರಿಚಯಿಸಿದ ಪಿ. ವಾಸುದೇವ ಕಾರಂತರು, ಉಷಾ ಎನ್. ಹೆಬ್ಬಾರ್, ಡಾ. ಗಣೇಶ್ ಮಧ್ಯಸ್ಥ, ಕಿಶೋರ್ ಶೆಟ್ಟಿ ವೇದಿಕೆಯಲ್ಲಿದ್ದರು. ಸಂಧ್ಯಾ ಶರ್ಮಾ, ರೇಖಾ ಮಕ್ಕಿತ್ತಾಯ, ಡಾ.ತಾರಾ ಕಾರಂತ್, ಡಾ. ಎಸ್.ಜಿ.ಸಾಮಕ್, ನಾಗರಾಜ ಹೆಬ್ಬಾರ್, ಅರವಿಂದ ಶರ್ಮಾ, ಡಾ.ಕೃಷ್ಣಮೂರ್ತಿ ಮಕ್ಕಿತ್ತಾಯ, ಡಾ. ಕೃಷ್ಣ ಕಿರಣ್ ಕಾರಂತ್, ಯಶೋದಾ ಹೊಳ್ಳ ಹಾಗೂ ಸರಸ್ವತಿ ಹೊಳ್ಳರ ಮೊಮ್ಮಕ್ಕಳು ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.