ಶಿಗ್ಗಾಂವಿ: ಕೆರೆ ಅಭಿವೃದ್ಧಿ ಮಾಡುವುದರಿಂದ ರೈತರಿಗೆ ಅನುಕೂಲವಾಗುತ್ತದೆ. ರೈತರಿಗೆ ಒಳ್ಳೆಯದಾದರೆ ಸೃಷ್ಟಿಗೆ ಒಳ್ಳೆಯದಾಗುತ್ತದೆ. ಅದರಿಂದ ಸಮಾಜಕ್ಕೆ, ದೇಶಕ್ಕೆ, ಮನುಕುಲಕ್ಕೆ ಒಳ್ಳೆಯದಾಗುತ್ತದೆ. ದೊಡ್ಡ ಪರೋಪಕಾರಿ ಆಗುವ ವಿಧಾನದಲ್ಲಿ ನಾವೂ ಕಾರಣೀಕರ್ತರಾಗುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದರು.

ಶಿಗ್ಗಾಂವಿ ತಾಲೂಕಿನ ತಡಸ ಗ್ರಾಮದಲ್ಲಿ ಭಾರತ ಸೇವಾ ಸಂಸ್ಥೆ ಏರ್ಪಡಿಸಿದ ಕಂಚಗಾರಗಟ್ಟಿ ಕೆರೆ ಹೂಳೆತ್ತುವ ಕಾಮಗಾರಿಯ ಪ್ರಾರಂಭೋತ್ಸವ ನೆರವೇರಿಸಿ ಮಾತನಾಡಿದರು.

ಕೆರೆ ಹೂಳು ತೆಗೆಯುವುದು ಪವಿತ್ರ ಕೆಲಸ, ಬಿಜೆಪಿ ಸರ್ಕಾರ ಇದ್ದಾಗ ನಮ್ಮ ನಾಯಕರಾಗಿರುವ ಯಡಿಯೂರಪ್ಪ ಅವರು ಎಲ್ಲ ಶಾಸಕರಿಗೂ ತಮ್ಮ ಕ್ಷೇತ್ರದಲ್ಲಿ ಐದು ಕೆರೆಗಳನ್ನು ಸ್ವಂತ ಖರ್ಚಿನಲ್ಲಿ ಹೂಳು ತೆಗೆಸಬೇಕು ಅಂತ ಹೇಳಿದರು. ನಾವು ಜನರ ಒತ್ತಾಸೆಯಿಂದ ಐದು ಕೆರೆ ಬದಲು ಐವತ್ತು ಕೆರೆ ಹೂಳು ತೆಗೆಸಿದೆವು. ಅದರಲ್ಲಿ ಬಹಳ ಜನರು ಸಹಾಯ ಮಾಡಿದರು. ಶ್ರೀಕಾಂತ ದುಂಡಿಗೌಡರು ತಮ್ಮ ಭಾರತ ಸೇವಾ ಸಂಸ್ಥೆ ವತಿಯಿಂದ ಹೂಳು ತೆಗೆಸಿದರು.

ಕೆರೆ ಅಭಿವೃದ್ಧಿ ಮಾಡುವುದು ರೈತರಿಗೆ ಅನುಕೂಲವಾಗುತ್ತದೆ. ರೈತರಿಗೆ ಒಳ್ಳೆಯದಾದರೆ ಸೃಷ್ಟಿಗೆ ಒಳ್ಳೆಯದಾಗುತ್ತದೆ. ಅದರಿಂದ ಸಮಾಜಕ್ಕೆ ದೇಶಕ್ಕೆ ಒಳ್ಳೆಯದಾಗುತ್ತದೆ. ಅದರಿಂದ ಇಡೀ ಮನುಕುಲಕ್ಕೆ ಒಳ್ಳೆಯದಾಗುತ್ತದೆ. ದೊಡ್ಡ ಪರೋಪಕಾರಿ ಆಗುವ ವಿಧಾನದಲ್ಲಿ ನಾವೂ ಕಾರಣೀಕರ್ತರಾಗಬೇಕು, ಇದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.

ವರದಾ ನದಿಯಿಂದ ತಡಸ್ ಕೆರೆಗೆ ನೀರು ತುಂಬಿಸುವ ಕೆಲಸವನ್ನು ಮಾಡಿದ್ದೇವೆ. ಸವಣೂರಿನಲ್ಲಿ ಹಿರೇಬೆಂಡಿಗೆರಿವರೆಗೆ ಮಾಡಿದ್ದೇವೆ. ಇದರಿಂದ ನಮಗೆ ಇನ್ನಷ್ಟು ಒಳ್ಳೆಯ ಕೆಲಸ ಮಾಡುವ ಪೇರಣೆ ಆಗಿದೆ. ಹೂಳು ತೆಗೆಯುವುದರಿಂದ ಇನ್ನಷ್ಟು ನೀರು ಹಿಡಿದಿಡಲು ಅನುಕೂಲವಾಗುತ್ತದೆ. ಶಿಗ್ಗಾಂವಿ ಸವಣೂರಿನಲ್ಲಿ ೫೦೦ ಕ್ಕೂ ಹೆಚ್ಚು ಕೆರೆಗಳಿವೆ. ೧೮೦ ಎಕರೆ ವಿಸ್ತಾರದ ಮೋತಿ ತಲಾಬ್ ತುಂಬಿಸುವಂತೆ ಜನರ ಬಹಳ ಬೇಡಿಕೆಯಾಗಿತ್ತು. ಆ ಕೆಲಸ ಮಾಡಿರುವ ಸಂತೃಪ್ತಿ ಇದೆ. ಹುನಗುಂದ ಕೆರೆ ಪೂರ್ತಿ ಮಾಡಿದೆವು. ಸ್ವಂತ ಖರ್ಚಿನಲ್ಲಿ ರಸ್ತೆ ಮಾಡಿ ಕೆರೆ ಅಭಿವೃದ್ಧಿ ಮಾಡಿದ್ದೇವೆ. ಬೆಳಗಲಿ, ಗಂಜಿಗಟ್ಟಿ, ದುಂಡಸಿ, ಹೊಸೂರು, ಯತ್ನಳ್ಳಿ ಕರೆ ಹೂಳೆತ್ತುವ ಕೆಲಸ ಮಾಡಿದ್ದೇವೆ. ಒಳ್ಳೆಯ ಕೆಲಸಕ್ಕೆ ಎಲ್ಲರೂ ಸಹಕಾರ ನೀಡಿ, ಈ ಕೆಲಸ ಇತರರಿಗೆ ಪ್ರೇರಣೆಯಾಗಲಿ, ಇದರಿಂದ ನಮ್ಮ ತಾಲೂಕು ಅಭಿವೃದ್ಧಿಯಾಗಲು ಅನುಕೂಲವಾಗುತ್ತದೆ. ಒಳ್ಳೆಯ ಕೆಲಸದಿಂದ ತಾಲೂಕು ಉಳಿಯುತ್ತದೆ. ಜನರು ಸಂತೋಷವಾಗಿರಬೇಕೆಂದರೆ ಶಾಶ್ವತ ಕೆಲಸ ಮಾಡಬೇಕು. ಶ್ರೀಕಾಂತ ಅವರು ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಅನ್ನುವಂತೆ ತಮ್ಮ ದುಡಿಮೆಯ ಸ್ವಲ್ಪ ಭಾಗವನ್ನು ಶಿಗ್ಗಾಂವಿ ತಾಲೂಕಿನ ಜನರ ಸೇವೆಗೆ ಇಟ್ಟಿದ್ದಾರೆ. ಒಳ್ಳೆಯ ಕೆಲಸ ಮಾಡುವ ಸಮೂಹ ನಮ್ಮ ತಾಲೂಕಿನಲ್ಲಿ ಬಂದು ಇತರ ತಾಲೂಕುಗಳಿಗೆ ಮಾದರಿಯಾಗಲಿ. ನನ್ನ ಬೇರೆ ಕೆಲಸ ಇದ್ದರೂ ನಾನು ಇಂತಹ ಕೆಲಸಕ್ಕೆ ಯಾವಾಗಲೂ ಬರುತ್ತೇನೆ. ಈ ಕೆಲಸಕ್ಕೆ ಗಂಜಿಗಟ್ಟಿ ಪರಮಪೂಜ್ಞರ ಆಶೀರ್ವಾದ ಇರಲಿ ಎಂದು ಹೇಳಿದರು.


ಅನಿರುದ್ದ ವಿಷ್ಣುವರ್ಧನ್ , ಶಿವಾನಂದ ಮ್ಯಾಗೇರಿ ಸೇರಿದಂತೆ ಹಲವರು ಮಾತನಾಡಿದರು.

ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಪ್ರಾಸ್ತಾವಿವಾಗಿ ಮಾತನಾಡಿ, ಬಸವರಾಜ ಬೊಮ್ಮಾಯಿಯವರು ಕೆರೆಗೆ ನೀರು ಹರಿಸುವ ಹೂಳು ತೆಗೆಯುವ ಕೆಲಸವನ್ನು ಮಾಡಿದ್ದು, ಇದರಿಂದ ಇಲ್ಲಿಯ ರೈತರ ಸಹಕಾರಿಯಾಗಲಿದೆ ಎಂದರು. ಈ ಸಂದರ್ಭದಲ್ಲಿ ಗಂಜಿಗಟ್ಟಿಯ ಚರಮೂರ್ತೇಶ್ವರ ಮಠದ ಡಾ, ವೈಜಿನಾಥ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಶಿಗ್ಗಾಂವಿ ಬಿಜೆಪಿ ಮಂಡಳದ ಅಧ್ಯಕ್ಷರಾದ ವಿಶ್ವನಾಥ ಹರವಿ, ಮುಖಂಡರಾದ ಮಹೇಂದ್ರ ಸಿಂಘಿ, ಜಯದೇವ ಅಗಡಿ, ಪ್ರಕಾಶ ದಾಸನೂರ, ಬಿ.ಟಿ. ಇನಾಮತಿ, ಬಿ. ಶ್ರೀನಿವಾಸ , ಅರುಣ ಹುಡೇದಗೌಡ್ರ, ಕೃಷ್ಣಾ ಛವಡಾಳ, ಶೇಖಣ್ಣಾ ನಂಜಪ್ಪನವರ, ಸಿ.ಎಂ.ಸಿರಗುಪ್ಪಿ, ಶಿವಾನಂದ ಮ್ಯಾಗೇರಿ, ಪಿ.ಎಫ್. ಪಾಟೀಲ, ತಿಪ್ಪಣ್ಣ ಸಾತಣ್ಣವರ, ಅರ್ಜುನ ಹಂಚಿನಮನಿ, ವರುಣಗೌಡ ಪಾಟೀಲ್, ಗಿರೀಶ ಹಿರೇಮಠ, ಶಿವಾನಂದ ಸೊಬರದ ಉಪಸ್ಥಿತರಿದ್ದರು.ಡಾ, ಜಕ್ಕನಗೌಡ್ರ ಸ್ವಾಗತಿಸಿದರು. ನವೀನ ಸಾಸನೂರ ನಿರೂಪಿಸಿದರು.