ದೈಹಿಕ, ಮಾನಸಿಕ ಆರೋಗ್ಯಕ್ಕೆ ಕುಣಿತದ ಭಜನೆ ಪೂರಕ: ರಂಗನಾಥ ಭಟ್

| Published : Jul 30 2024, 12:37 AM IST / Updated: Jul 30 2024, 12:38 AM IST

ದೈಹಿಕ, ಮಾನಸಿಕ ಆರೋಗ್ಯಕ್ಕೆ ಕುಣಿತದ ಭಜನೆ ಪೂರಕ: ರಂಗನಾಥ ಭಟ್
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ವತಿಯಿಂದ ಹಿರಿಯಡ್ಕದ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಉಚಿತ ಕುಣಿತದ ಭಜನಾ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಯಿತು. ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ರಂಗನಾಥ ಭಟ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಭಕ್ತಿ ಮಾರ್ಗದ ಜೊತೆಗೆ ದೈಹಿಕ ಮಾನಸಿಕ ಅರೋಗ್ಯಕ್ಕೂ ಪೂರಕವಾಗಿರುವ ಕುಣಿತದ ಭಜನಾ ಅಭ್ಯಾಸ ಅತ್ಯಂತ ಅರ್ಥಪೂರ್ಣ ಎಂದು ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ರಂಗನಾಥ ಭಟ್ ಹೇಳಿದರು.ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ವತಿಯಿಂದ ಹಿರಿಯಡ್ಕದ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಜು.28ರಿಂದ ಆ.25ರ ವರೆಗೆ ಪ್ರತೀ ಭಾನುವಾರ ಆಯೋಜಿಸಲಾಗುವ ‘ಉಚಿತ ಕುಣಿತದ ಭಜನಾ ತರಬೇತಿ ಶಿಬಿರ’ ಉದ್ಘಾಟಿಸಿ ಶುಭ ಹಾರೈಸಿದರು.ಭಜನಾ ಪರಿಷತ್ತಿನ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು ಮಾತನಾಡಿ, ಹಿರಿಯಡ್ಕದಲ್ಲಿ ಪ್ರಥಮ ಬಾರಿಗೆ 300ಕ್ಕೂ ಹೆಚ್ಚು ಭಜನಾಸಕ್ತರನ್ನು ಒಗ್ಗೂಡಿಸಿ ಮಾದರಿಯಾಗಿ ಕುಣಿತದ ಭಾಜನಾ ತರಬೇತಿಯನ್ನು ಹಮ್ಮಿಕೊಂಡಿರುವ ಉಡುಪಿ ತಾಲೂಕು ಭಜನಾ ಪರಿಷತ್ತಿನ ಸತ್ಕಾರ್ಯ ಪ್ರಶಂಸನೀಯ ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ನ ಉಡುಪಿ ತಾಲೂಕು ಯೋಜನಾಧಿಕಾರಿ ರಾಮ ಎಂ., ಶ್ರೀ ವೀರಭದ್ರ ದೇವಸ್ಥಾನದ ಕರ ಸೇವಕರ ಪ್ರಮುಖ ಶ್ರೀನಿವಾಸ ರಾವ್ ಹಿರಿಯಡ್ಕ, ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ರಾಘವೇಂದ್ರ ಮುದ್ರಾಡಿ, ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸತ್ಯಾನಂದ ನಾಯಕ್ ಆತ್ರಾಡಿ, ತಾಲೂಕು ಭಜನಾ ಪರಿಷತ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಕೋಶಾಧಿಕಾರಿ ಪೂರ್ಣಿಮಾ ಪೆರ್ಡೂರು, ನಿಕಟಪೂರ್ವ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಪೇತ್ರಿ, ತರಬೇತಿ ಕಾರ್ಯಾಗಾರದ ಗೌರವ ಸಲಹೆಗಾರ ನಟರಾಜ್ ಹೆಗ್ಡೆ ಹಿರಿಯಡ್ಕ ಮುಂತಾದವರು ಉಪಸ್ಥಿತರಿದ್ದರು.