ವಾರ್ಡ್ ನಂ. 23ರಲ್ಲಿ ಶಾಸಕ ಕೆ. ಹರೀಶ್‌ ಗೌಡ ಪಾದಯಾತ್ರೆ

| Published : Feb 18 2025, 12:35 AM IST

ಸಾರಾಂಶ

ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ, ಸ್ಥಳೀಯ ಮುಖಂಡರೊಂದಿಗೆ ಪಾದಯಾತ್ರೆ ನಡೆಸಿ ಜನರ ಸಮಸ್ಯೆ ಆಲಿಸಿದರು

ಕನ್ನಡಪ್ರಭ ವಾರ್ತೆ ಮೈಸೂರುನಗರ ಪಾಲಿಕೆಯ ವಾರ್ಡ್ ನಂ. 23ರ ಸುಬ್ಬರಾಯನಕೆರೆ ವ್ಯಾಪ್ತಿಯ ಕುರುಬಗೇರಿ, ಗೊಲ್ಲಗೇರಿ, ಅಗಸಗೇರಿ, ಮಡಿವಾಳರ ಬೀದಿ, ಎಂ.ಎನ್ ಜೋಯಿಷ್ ರಸ್ತೆ, ಸೋನಾರ್ ಬೀದಿ, ಗಾಣಿಗರ ಬೀದಿ, ಹಳೇ ಬಂಡಿಕೇರಿ, ಕ್ಷೇತ್ರಯ್ಯಾ ರಸ್ತೆ, ರಮವಿಲಾಸ ರಸ್ತೆ ಪ್ರದೇಶದಲ್ಲಿ ಶಾಸಕ ಕೆ. ಹರೀಶ್‌ ಗೌಡ ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ, ಸ್ಥಳೀಯ ಮುಖಂಡರೊಂದಿಗೆ ಪಾದಯಾತ್ರೆ ನಡೆಸಿ ಜನರ ಸಮಸ್ಯೆ ಆಲಿಸಿದರು.ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದ ಬಳಿ ಹಾದು ಹೋಗಿರುವ ರಾಜ ಕಾಲುವೆಯನ್ನು ಸ್ವಚ್ಛಗೊಳಿಸಬೇಕು ಹಾಗೂ ಹಲವೆಡೆ ಕುಡಿಯುವ ನೀರು ಸಮರ್ಪಕವಾಗಿ ದೊರೆಯದೆ ಇರುವುದರಿಂದ ನೀರು ಪೂರೈಕೆ ಸಮಯವನ್ನು ಹೆಚ್ಚಿಸುವಂತೆ ಸಾರ್ವಜನಿಕರು ಮನವಿ ಮಾಡಿದರು.ಮೊಹಲ್ಲಾದ ಒಳ ಭಾಗದ ಗಲ್ಲಿಯಂತಿರುವ ಸಣ್ಣ ರಸ್ತೆಗಳ ದುರಸ್ತಿ, ಹಲವೆಡೆ ಮೋರಿಗೆ ಸ್ಲಾಬ್ ಇಲ್ಲದೆ ಇರುವುದು, ಹಲವೆಡೆ ಒಳ ಚರಂಡಿ ಕಾಮಗಾರಿ ಬಾಕಿ ಇರುವುದು ಹಾಗೂ ವಸತಿ ಪ್ರದೇಶದಲ್ಲಿ ಕೆಲವು ಮನೆಗಳು ಪಾಳು ಬಿದ್ದು ಗಿಡ ಗಂಟೆಗಳು ಬೆಳೆದು ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದನ್ನು ಗಮನಿಸಿದ ಶಾಸಕರು ಕೂಡಲೇ ಮನೆ ಮಾಲೀಕರಿಗೆ ನೋಟಿಸ್ ನೀಡಿ ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಹಲವು ನಿವಾಸಿಗಳು ಸ್ವಂತ ಸೂರಿಗಾಗಿ ಶಾಸಕರ ಬಳಿ ಮನವಿ ಮಾಡಿದರು. ಈ ವೇಳೆ ಮಾತನಾಡಿದ ಅವರು, ಇನ್ನೊಂದು ವರ್ಷದಲ್ಲಿ ಹಾಲಿ ಅರ್ಜಿ ಸಲ್ಲಿಸಿರುವ ಆಶ್ರಯ ಆಕಾಂಕ್ಷಿಗಳಿಗೆ ಸೂರು ನೀಡಲಾಗುವುದು. ನಂತರದ ದಿನಗಳಲ್ಲಿ ಹೊಸ ಅರ್ಜಿ ಪಡೆಯುವ ಬಗ್ಗೆ ಸರ್ಕಾರದೊಡನೆ ಚರ್ಚಿಸಿ ಅನೂಕುಲ ಮಾಡಿಕೊಡುವುದಾಗಿ ಭರವಸೆ ನೀಡಿದರು.ನಂತರ ಶ್ರೀ ಮಹಾಲಕ್ಷ್ಮಿ ಕೊಲ್ಲಾಪುರದಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಜನಸಂಪರ್ಕ ಸಭೆ ನೆಡಿಸಿ ಸಾರ್ವಜನಿಕರ ಕುಂದು ಕೊರತೆ ಆಲಿಸಿ ಶೀಘ್ರ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಮುಖಂಡರಾದ ಮಹದೇವ್ ಅವರು ಮಾಡಿಸಿದ್ದ ವಿವಿಧ ಪಿಂಚಣಿಗಳ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಲಾಯಿತು.ಈ ಸಂಧರ್ಭದಲ್ಲಿ ದೇವರಾಜ ಬ್ಲಾಕ್ ಅಧ್ಯಕ್ಷ ರಮೇಶ್ ರಾಯಪ್ಪ, ವಾರ್ಡ್ ಅಧ್ಯಕ್ಷ ಆನಂದ್, ನಗರ ಪಾಲಿಕೆ ಮಾಜಿ ಸದಸ್ಯ ಡಿ. ನಾಗಭೂಷಣ್, ಮುಖಂಡರಾದ ಮಹದೇವ್, ಜ್ಞಾನೇಶ್, ಲೋಕೇಶ್ವರ, ಮಂಜಣ್ಣ, ಶ್ರೀನಿವಾಸ್, ಮಂಜುನಾಥ್, ಲೋಕೇಶ್, ಮಂಜುಳಾ, ಮಂಗಳಾ, ಶಾಂತಿ, ಲೀಲಾ, ಪವನ್, ರವಿಚಂದ್ರ, ನಾಗಣ್ಣ, ನವೀನ್, ಹೇಮಂತ್, ಚೆಲುವ, ಅಧಿಕಾರಿಗಳಾದ ಸಿಂಧು, ಪ್ರತಿಭಾ, ವೆಂಕಟೇಶ್, ಮುಸ್ತಫಾ, ಸಂದೇಶ್ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು, ಪಕ್ಷದ ಕಾರ್ಯಕರ್ತರು ಇದ್ದರು.