ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಜನತಾ ಶಿಕ್ಷಣ ಟ್ರಸ್ಟ್‌ನಿಂದ ನಿತ್ಯಸಚಿವ ಕೆ.ವಿ.ಶಂಕರಗೌಡರ ೧೧೧ನೇ ಜನ್ಮದಿನೋತ್ಸವದ ಅಂಗವಾಗಿ ೨೦೨೬ನೇ ಸಾಲಿನ ರಾಜ್ಯಮಟ್ಟದ ರಂಗಭೂಮಿ ಮತ್ತು ಸಮಾಜ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜು.೧೫ರ ಬುಧವಾರ ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ನಿರ್ದೇಶಕ ಡಾ.ರಾಮಲಿಂಗಯ್ಯ ತಿಳಿಸಿದರು.

ಅಂದು ಬೆಳಿಗ್ಗೆ ೧೧ ಗಂಟೆಗೆ ಪಿ.ಇ.ಎಸ್.ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿರುವ ‘ನಿತ್ಯಸಚಿವ ಕೆ.ವಿ.ಶಂಕರಗೌಡ ತರಬೇತಿ ಮತ್ತು ಉದ್ಯೋಗ ಕೇಂದ್ರ ಸಭಾಂಗಣ’ದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪ್ರಶಸ್ತಿ ಪ್ರದಾನ ಮತ್ತು ಉದ್ಘಾಟನೆ:

ಪಾಂಡವಪುರ ಹರಳಹಳ್ಳಿಯ ಪ್ರಸಿದ್ಧ ‘ಪುಸ್ತಕದ ಮನೆ’ ಖ್ಯಾತಿಯ ಪದ್ಮಶ್ರೀ ಪುರಸ್ಕೃತ ಎಂ.ಅಂಕೇಗೌಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಟ್ರಸ್ಟ್‌ನ ಕಾರ್ಯದರ್ಶಿ ಎಸ್.ಎಲ್. ಶಿವಪ್ರಸಾದ್ ಹಾಗೂ ಖಜಾಂಚಿ ಚಂದ್ರಕಲಾ ಶಿವಾನಂದ್ ಭಾಗವಹಿಸುವರು ಎಂದರು.


ಪ್ರಶಸ್ತಿ ಪುರಸ್ಕೃತರು:

ಈ ವರ್ಷದ ರಾಜ್ಯ ಮಟ್ಟದ ಪ್ರಶಸ್ತಿಗಳಿಗೆ ಇಬ್ಬರು ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ರಾಜ್ಯಮಟ್ಟದ ರಂಗಭೂಮಿ ಪ್ರಶಸ್ತಿಗೆ ಪ್ರಖ್ಯಾತ ವೈದ್ಯರು ಹಾಗೂ ರಂಗಭೂಮಿ ನಟರಾದ ಮದ್ದೂರು ತಾಲೂಕು ಕೆಸ್ತೂರು ಮಾತಾ ಕ್ಲಿನಿಕ್‌ನ ಡಾ.ಎ.ವಿ.ಉಮೇಶ್ ಹಾಗೂ ರಾಜ್ಯ ಮಟ್ಟದ ಸಮಾಜ ಸೇವಾ ಪ್ರಶಸ್ತಿಗೆ ಶ್ರೀರಂಗಪಟ್ಟಣದ ಪ್ರಖ್ಯಾತ ವೈದ್ಯರು ಮತ್ತು ಚಿಂತಕರಾದ ಡಾ. ಬಿ.ಸುಜಯ್‌ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ೨೫೦೦೦ ರೂ. ನಗದು, ಪ್ರಶಸ್ತಿ ಫಲಕದೊಂದಿಗೆ ಪ್ರದಾನ ಮಾಡಲಾಗುವುದು ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ಎಂ.ಬಿ.ಶ್ರೀಧರ್ ಹಾಜರಿದ್ದರು.ನಾಳೆ ನಿತ್ಯಸಚಿವ ಕೆವಿಎಸ್ ಜನ್ಮೋತ್ಸವ, ಶಂಕರ ನಮನ

ಮಂಡ್ಯ: ನಿತ್ಯ ಸಚಿವ ಕೆ.ವಿ.ಶಂಕರಗೌಡರ ಜನ್ಮೋತ್ಸವದ ಅಂಗವಾಗಿ ಕರ್ನಾಟಕ ಸಂಘದಿಂದ ನಗರದ ಕೆ.ವಿ.ಎಸ್ ಶತಮಾನೋತ್ಸವ ಭವನದಲ್ಲಿ ಜುಲೈ 15 ರಂದು ಸಂಜೆ 5 ಗಂಟೆಗೆ ಶಂಕರ ನಮನ ರಂಗಗೀತೆ, ಭಾವಗೀತೆ, ಜನಪದ ಗೀತೆ ಹಾಗೂ ತತ್ವಪದಗಳ ಗಾಯನ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಕೊಮ್ಮೇರಹಳ್ಳಿ ವಿಶ್ವಮಾನವ ಕ್ಷೇತ್ರದ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸುವರು. ಅತಿಥಿಗಳಾಗಿ ಮಹಿಳಾ ಉದ್ಯಮಿ ಡಾ.ರಚನಾ ರಮೇಶ್ , ಉಪನ್ಯಾಸಕಿ ಡಾ.ಎಂ.ಎಸ್.ಅನಿತಾ ಕೆ.ವಿ.ಶಂಕರಗೌಡ ನುಡಿನಮನ ಸಲ್ಲಿಸುವರು. ಬಿ.ಟಿ.ಪುಟ್ಟರಾಜು, ಗಂಗಾಧರ್ ಗೆಜ್ಜಲಗೆರೆ ರಂಗಗೀತೆಯನ್ನು, ಜನಪದ ಗೀತೆಗಳನ್ನು ಹುರುಗಲವಾಡಿ ರಾಮಯ್ಯ ಮತ್ತು ಮಂಜುಳಾ ಆಲದಹಳ್ಳಿ, ತತ್ವಪದಗಳನ್ನು ಸಿದ್ದಮ್ಮ ಮತ್ತು ತಂಡ ಚಂದಗಾಲು ಹಾಡುವರು.ಜುಲೈ 17 ರಂದು 3ನೇ ವರ್ಷದ ಹ.ಕ.ರಾಜೇಗೌಡ ಪ್ರಶಸ್ತಿ ಪ್ರದಾನ ಸಮಾರಂಭಮಂಡ್ಯ: ಕರ್ನಾಟಕ ಸಂಘದ ವತಿಯಿಂದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಜುಲೈ 17ರಂದು ಸಂಜೆ 5.30ಕ್ಕೆ 3ನೇ ವರ್ಷದ ಹ.ಕ.ರಾಜೇಗೌಡ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಡಾ.ಎಂ.ವಿ.ಸ್ರೀನಿವಾಸ್ ಅವರಿಗೆ ಬೆಂಗಳೂರು ಐಸಿಎಚ್ ಆರ್ ಪ್ರಾದೇಶಿಕ ನಿರ್ದೇಶಕ ಡಾ.ಎಸ್.ಕೆ.ಅರುಣಿ ಹ.ಕ.ರಾಜೇಗೌಡ ಪ್ರಶಸ್ತಿ ಪ್ರದಾನ ಮಾಡುವರು. ಅತಿಥಿಗಳಾಗಿ ಮೈಸೂರು ವಿಶ್ರಾಂತ ಕುಲಪತಿ ಡಾ.ಪದ್ಮಾಶೇಖರ್ ಭಾಗವಹಿಸುವರು.