ಹುಬ್ಬಳ್ಳಿ:
ಕೇಂದ್ರ ಸರ್ಕಾರ ಕಾರ್ಮಿಕರನ್ನು ನವ ಗುಲಾಮಗಿರಿಗೆ ತಳ್ಳುವ ಕಾರ್ಮಿಕ ಸಂಹಿತೆ ಜಾರಿ ಮಾಡುತ್ತಿದ್ದು ಇದನ್ನು ರಾಜ್ಯದಲ್ಲಿ ಜಾರಿ ಮಾಡಲು ಕಾಂಗ್ರೆಸ್ ಸರ್ಕಾರ ತುದಿಗಾಲಿನಲ್ಲಿ ನಿಂತಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ ಆರೋಪಿಸಿದರು.ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಎಐಟಿಯುಸಿ, ಸಿಐಟಿಯು ಸಂಘಟನೆಗಳು ಶುಕ್ರವಾರ ಮಹಾನಗರ ಪಾಲಿಕೆ ಉದ್ಯಾನವನದಲ್ಲಿ ಸಂಘಟಿಸಿದ್ದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜ್ಯ ಸರ್ಕಾರ ಕೆಲಸದ ಅವಧಿ ಹೆಚ್ಚಳ ಆದೇಶ, ರಾಜ್ಯದಲ್ಲಿ ಜಾರಿಯಾದ ಕೃಷಿ ಕಾಯ್ದೆಗಳನ್ನು ಅಧಿಕಾರಕ್ಕೆ ಬಂದು 3 ವರ್ಷಗಳಾದರೂ ಹಿಂಪಡೆದಿಲ್ಲ. ಕಳೆದ 9 ವರ್ಷದಿಂದ ಕನಿಷ್ಠ ವೇತನ ಪರಿಷ್ಕರಣೆ ಮಾಡದೆ ಇರುವ ಬಗ್ಗೆ ಹೋರಾಟ ನಡೆಸಿದ ಪರಿಣಾಮ ಇದೀಗ ಕನಿಷ್ಠ ವೇತನ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಅಂತಿಮ ಅಧಿಸೂಚನೆ ಹೊರಡಿಸಲು ಕಾಲಹರಣ ಮಾಡಲಾಗುತ್ತಿದೆ. ಇದರ ಕಾರ್ಮಿಕರ ಪ್ರತಿರೋಧ ಮತ್ತು ನಿರಾಕರಣೆ ಹೋರಾಟ ತೀವ್ರಗೊಳ್ಳಲಿದೆ ಎಂದರು.ಮೆರವಣಿಗೆ:
ಇದಕ್ಕೂ ಮೊದಲು ಹಳೆಹುಬ್ಬಳ್ಳಿಯ ಎ.ಜೆ. ಮುಧೋಳ ಭವನದಿಂದ ಮಹಾನಗರ ಪಾಲಿಕೆ ಉದ್ಯಾನದ ವರೆಗೆ ಕಾರ್ಮಿಕರು ಮೇ ದಿನ ಮೆರವಣಿಗೆ ನಡೆಸಿದರು. ಕಟ್ಟಡ, ಹಮಾಲಿ, ಆಟೋ, ಬಿಸಿಯೂಟ, ಗ್ರಾಮ ಪಂಚಾಯಿತಿ ಸೇರಿ ಮುಂತಾದ ಕಾರ್ಮಿಕರು ಭಾಗವಹಿಸಿದ್ದರು. ಎಐಟಿಯುಸಿ ಮುಖಂಡರಾದ ಬಶೀರ ಮುಧೋಳ, ಬಿ.ಎಸ್. ಸೊಪ್ಪಿನ, ರಮೇಶ ಭೂಸ್ಲೆ, ಬಿ.ಐ. ಈಳಿಗೇರ, ಬಿ.ಎನ್. ಪೂಜಾರಿ, ಬಾಬಾಜಾನ ಮುಧೋಳ, ಇಸೂಫ್ ಬಳ್ಳಾರಿ, ಸಿದ್ದು ತೇಜಿ, ಚಿದಾನಂದ ಸವದತ್ತಿ, ಪುಂಡಲೀಕ ಬಡಿಗೇರ, ಹನಮಂತಪ್ಪ ಪವಾಡಿ. ಪೀರಸಾಬ ನದಾಫ, ಶೈನಾಜ್ ಅಮರಗೋಳ ಸೇರಿದಂತೆ ಹಲವರಿದ್ದರು.