ಕನ್ನಡಪ್ರಭ ವಾರ್ತೆ ಬೆಂಗಳೂರು
ನಾಲ್ಕು ಲೇಬರ್ ಕೋಡ್ ಹಿಂಪಡೆಯಬೇಕು, ನರೇಗಾ ಯೋಜನೆ ಮರುಸ್ಥಾಪಿಸಬೇಕು ಎಂಬುದು ಸೇರಿ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಮುಷ್ಕರ ನಗರದಲ್ಲಿ ಪ್ರತಿಭಟನೆಗೆ ಸೀಮಿತವಾಯಿತು. ನಗರದ ಟೌನ್ಹಾಲ್ ಎದುರು ಜೆಸಿಟಿಯು ನೇತೃತ್ವದಲ್ಲಿ ಕಾರ್ಮಿಕರು ಧರಣಿಗೆ ಮುಂದಾದಾಗ ಪೊಲೀಸರು ಪ್ರತಿಭಟನಕಾರರನ್ನು ವಶಕ್ಕೆ ಪಡೆದರು.ಐಎನ್ಟಿಯುಸಿ, ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ ಸೇರಿ ಹಲವು ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ವೈಟ್ಫೀಲ್ಡ್, ನೆಲಮಂಗಲ, ದಾಬಸ್ಪೇಟೆ, ಪೀಣ್ಯ ಸೇರಿ ಇತರೆ ಕೈಗಾರಿಕಾ ಪ್ರದೇಶಗಳಿಂದ ಕಾರ್ಮಿಕರು ಆಗಮಿಸಿದ್ದರು. ಟೌನ್ಹಾಲ್ಗೆ ಲಾರಿ ಸೇರಿ ಇತರೆ ವಾಹನಗಳಲ್ಲಿ ಆಗಮಿಸಿದ ಪ್ರತಿಭಟಕಾರರು ಧರಣಿಗೆ ಮುಂದಾದರು.
ಆದರೆ, ಟೌನ್ ಹಾಲ್ ಬಳಿ ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಪೊಲೀಸರು ಮೊದಲೇ ತಿಳಿಸಿದ್ದರು. ಹೆಚ್ಚಿನವರು ಸೇರುತ್ತಿರುವುದು ಕಂಡು ಪೊಲೀಸರು ಹೋರಾಟಗಾರರನ್ನು ವಶಕ್ಕೆ ಪಡೆಯಲು ಮುಂದಾದರು. ಈ ಹಂತದಲ್ಲಿ ತಳ್ಳಾಟ, ನೂಕಾಟ ವಾಗ್ವಾದಗಳು ನಡೆದವು. ಸುಮಾರು ಐದಾರು ಬಿಎಂಟಿಸಿ ಬಸ್ಸುಗಳಲ್ಲಿ 500ಕ್ಕೂ ಹೆಚ್ಚು ಜನರನ್ನು ಆಡುಗೋಡಿ ಸಿಎಆರ್ ಕವಾಯತು ಮೈದಾನಕ್ಕೆ ಕರೆದೊಯ್ದು ಮಧ್ಯಾಹ್ನ ಬಿಡುಗಡೆ ಮಾಡಿದರು.4 ಲೇಬರ್ ಕೋಡ್ ರದ್ದುಗೊಳಿಸಬೇಕು, ನರೇಗಾ ಯೋಜನೆಯನ್ನು ಪುನರ್ ಸ್ಥಾಪಿಸಿ, ವಿ.ಜಿ ರಾಮ್ ಜಿ ಕಾಯ್ದೆ ರದ್ದುಗೊಳಿಸಬೇಕು, ಭೂ ಸ್ವಾಧೀನ ಕಾಯ್ದೆಯನ್ನು ಹಿಂಪಡೆಯುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದಿರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಂದಿರುವ ಭೂಸುಧಾರಣಾ, ಎಪಿಎಂಸಿ, ಜಾನುವಾರು ಸಂರಕ್ಷಣಾ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು, ವಿದ್ಯುಚ್ಛಕ್ತಿ ಖಾಸಗೀಕರಣ ಮಾಡುವುದನ್ನು ನಿಲ್ಲಿಸಬೇಕು. ಬೀಜ ಮಸೂದೆ ಕಾಯ್ದೆ ಹಿಂಪಡೆಯಬೇಕು ಎಂದು ಮನವಿ ಮಾಡಿದರು. ಪ್ರಮುಖರಾದ ಜಿ.ಆರ್.ಶಿವಶಂಕರ್, ಲಕ್ಷ್ಮಿ ವೆಂಕಟೇಶ್, ಶಾಮಣ್ಣ ರೆಡ್ಡಿ, ವಿಜಯ ಭಾಸ್ಕರ್, ಅತ್ಯಾನಂದ, ಜಯಮ್ಮ ಅಮ್ಜದ್, ವರಲಕ್ಷ್ಮಿ , ಆರ್.ವಿ.ಹರೀಶ್ ನಾಗನಾಥ್, ಕೆ.ವಿ.ಭಟ್ ಸೇರಿ ಹಲವರಿದ್ದರು.
ಬಿಎಂಟಿಸಿ ಪ್ರಯಾಣಿಕರನ್ನು ಇಳಿಸಿದ ಪೊಲೀಸರು..
ಪ್ರತಿಭಟನಕಾರರನ್ನು ವಶಕ್ಕೆ ಪಡೆಯಲು ಪೊಲೀಸರ ಬಳಿ ಸಾಕಷ್ಟು ವಾಹನಗಳಿರಲಿಲ್ಲ. ಈ ವೇಳೆ ಮೆಜೆಸ್ಟಿಕ್ನಿಂದ ಗಿರಿನಗರಕ್ಕೆ ತೆರಳುತ್ತಿದ್ದ ಬಿಎಂಟಿಸಿ ಬಸ್ಸನ್ನು ಪೊಲೀಸರು ಅರ್ಧದಲ್ಲೇ ತಡೆದರು. ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ತಕ್ಷಣ ಕೆಳಗಿಳಿಯುವಂತೆ ಸೂಚಿಸಿದರು. ಇದರಿಂದ ದಿಕ್ಕೆಟ್ಟ ಪ್ರಯಾಣಿಕರು, ನಾವು ಬೇಗ ಹೋಗಬೇಕು. ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದೇವೆ, ನಮ್ಮನ್ನು ಅರ್ಧದಲ್ಲೇ ಇಳಿಸಿದರೆ ಹೇಗೆ? ಎಂದು ಪ್ರಶ್ನಿಸಿದರು. ಈ ಸಂಬಂಧ ಮಹಿಳಾ ಪ್ರಯಾಣಿಕರ ಜತೆಗೂ ವಾಗ್ವಾದ ಉಂಟಾಯಿತು.