ಸಾರಾಂಶ
ಕೃಷಿಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಪುಟ್ಟಮಾದು ವಿರುದ್ಧ ಏಕವಚನದಿಂದ ನಿಂದಿಸಿರುವ ಜಿಪಂ ಸಿಇಒ ಕೆ.ಆರ್.ನಂದಿನಿ ಅವರನ್ನು ವರ್ಗಾಯಿಸುವಂತೆ ಒತ್ತಾಯಿಸಿ ಕೃಷಿ ಕೂಲಿಕಾರರ ಸಂಘದ ತಾಲೂಕು ಸಮಿತಿ ಕಾರ್ಯಕರ್ತರಿಂದ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ.
ಕನ್ನಡಪ್ರಭ ವಾರ್ತೆ ಮದ್ದೂರು
ಕೃಷಿಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಪುಟ್ಟಮಾದು ವಿರುದ್ಧ ಏಕವಚನದಿಂದ ನಿಂದಿಸಿರುವ ಜಿಪಂ ಸಿಇಒ ಕೆ.ಆರ್.ನಂದಿನಿ ಅವರನ್ನು ವರ್ಗಾಯಿಸುವಂತೆ ಒತ್ತಾಯಿಸಿ ಕೃಷಿ ಕೂಲಿಕಾರರ ಸಂಘದ ತಾಲೂಕು ಸಮಿತಿ ಕಾರ್ಯಕರ್ತರು ಮಂಗಳವಾರ ಪಟ್ಟಣದ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ತಾಲೂಕು ಸಮಿತಿ ಅಧ್ಯಕ್ಷೆ ಅನಿತಾ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಮಹಿಳೆಯರು ಸೇರಿದ ನೂರಾರು ಕಾರ್ಯಕರ್ತರು ನಂತರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು. ಜಿಪಂ ಸಿಇಒ ನಂದಿನಿ ವಿರುದ್ಧ ಘೋಷಣೆ ಕೂಗಿದರು.
ಉದ್ಯೋಗ ಖಾತ್ರಿ ಕೆಲಸ, ಕೂಲಿ ಬಾಕಿ, ಬಡವರಿಗೆ ನಿವೇಶನ ಹಂಚಿಕೆ, ಸರ್ಕಾರಿ ಭೂಮಿಯಲ್ಲಿ ವಾಸ ಮಾಡುತ್ತಿರುವವರಿಗೆ ಹಕ್ಕು ಪತ್ರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದ ವೇಳೆ ಪುಟ್ಟಮಾದು ವಿರುದ್ಧ ಅವಹೇಳನಕಾರಿಯಾಗಿ ನಿಂದಿಸಿದ್ದಲ್ಲದೆ ಅಧಿಕಾರ ದುರುಪಯೋಗ ಪಡಿಸಿಕೊಂಡು ಅವರ ವಿರುದ್ಧ ಕೆಳಹಂತದ ಅಧಿಕಾರಿಗಳನ್ನು ಪ್ರತಿಭಟನೆಗೆ ಇಳಿಸಿರುವುದನ್ನು ಖಂಡಿಸಿದರು.ನಂತರ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ವರ್ಗಾವಣೆ ಮಾಡಲುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಮಿತಿ ಜಿಲ್ಲಾ ಸಹ ಕಾರ್ಯದರ್ಶಿ ಟಿ.ಎಚ್.ಆನಂದ್, ತಾಲೂಕು ಕಾರ್ಯದರ್ಶಿ ಅರುಣ್ ಕುಮಾರ್, ಶೋಭಾ, ಈರೇಗೌಡ, ದೇವರಾಜು, ಗೋಪಾಲಸ್ವಾಮಿ, ಪುಟ್ಟತಾಯಮ್ಮ, ಗೀತಾ,ರೂಪ, ಯಶೋಧ, ಚಂದ್ರಕಲಾ, ದಿವ್ಯ, ಪ್ರೇಮ ಮತ್ತಿತರರು ಭಾಗವಹಿಸಿದ್ದರು.