ಸಾರಾಂಶ
ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧಿಯಾ, ಕರ್ನಾಟಕ ಘಟಕವು ಹಲವು ವರ್ಷಗಳಿಂದ ಮಾಡುತ್ತಿರುವ ನಿಸ್ವಾರ್ಥ ಸೇವೆಗೆ ಅಗತ್ಯ ಬೆಂಬಲ ಹಾಗೂ ಮೆಚ್ಚುಗೆ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಮೂಡುಬಿದಿರೆ: ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ರಾಷ್ಟ್ರೀಯ ಪ್ರಧಾನ ಕಚೇರಿಯ ಅಧಿಕಾರಿಗಳ ನಿಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧಿಯಾ, ಕರ್ನಾಟಕ ಘಟಕವು ಹಲವು ವರ್ಷಗಳಿಂದ ಮಾಡುತ್ತಿರುವ ನಿಸ್ವಾರ್ಥ ಸೇವೆಗೆ ಅಗತ್ಯ ಬೆಂಬಲ ಹಾಗೂ ಮೆಚ್ಚುಗೆ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಮೂಡುಬಿದಿರೆಯ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಕನ್ನಡಭವನದಲ್ಲಿ ಭಾನುವಾರ, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ರಾಷ್ಟ್ರೀಯ ಪ್ರಧಾನ ಕಚೇರಿ, ಕರ್ನಾಟಕ ರಾಜ್ಯ ಘಟಕ, ದಕ್ಷಿಣ ಕನ್ನಡ ಘಟಕ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ನಡೆದ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ರಾಷ್ಟ್ರಮಟ್ಟದ ‘ಮೆಸೆಂಜರ್ ಆಫ್ ಪೀಸ್ ಸ್ಟಾರ್ ಅವಾರ್ಡ್ ೨೦೨೩’ ಹಾಗೂ ರಾಷ್ಟ್ರಪತಿ ಪುರಸ್ಕಾರ -೨೦೧೬ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಮೂಡುಬಿದಿರೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಕಾರದಲ್ಲಿ ನಡೆದ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ೯೦ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿ, ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾದ ಸನ್ನಿವೇಶವನ್ನು ನೆನಪಿಸಿಕೊಂಡರು. ಕೋವಿಡ್-೧೯ ಸಮಯದಲ್ಲಿ ಕರ್ನಾಟಕ ಘಟಕವು ಒಂದು ಕೋಟಿ ಮಾಸ್ಕ್ಗಳನ್ನು ವಿತರಿಸಿತ್ತು. ಡಾ.ಎಂ. ಮೋಹನ್ ಆಳ್ವರ ಮುಂದಾಳತ್ವದಲ್ಲಿ ಮೂಡುಬಿದಿರೆ ಹಾಗೂ ಗುರುಪುರದಂತಹ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಸುಸಜ್ಜಿತ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಭವನ ಮೂಡಿಬಂದಿದೆ. ಇಂತಹ ಅತ್ಯಮೂಲ್ಯ ಕೊಡುಗೆಗಳಿದ್ದರೂ, ರಾಷ್ಟ್ರೀಯ ಕಚೇರಿಯಿಂದ ಯಾವುದೇ ಪ್ರಶಂಸೆ ದೊರಕುತ್ತಿಲ್ಲ ಎಂದು ಬೇಸರಿಸಿದರು.ಅಂತಾರಾಷ್ಟ್ರೀಯ ಆಯುಕ್ತ (ಸ್ಕೌಟ್ಸ್) ಮಧುಸೂಧನ ಅವಲ ಮಾತನಾಡಿ, ಸ್ಕೌಟ್ ಹಾಗೂ ಗೈಡ್ ನಾಯಕನಾದವನು ಯಾವುದನ್ನಾದರೂ ಸಾಧಿಸಬಹುದು.ಅನುಭವವೇ ನಮ್ಮ ಶಿಕ್ಷಕ. ಸ್ಕೌಟ್ಸ್ ಹಾಗೂ ಗೈಡ್ಸ್ ವಿನಮ್ರತೆ, ಪ್ರಾಮಾಣಿಕತೆ, ನಿಷ್ಠೆ ಮತ್ತು ವಿಶ್ವಾಸಾರ್ಹತೆಯ ಗುಣಗಳಿಂದ ವಿಶಿಷ್ಟತೆ ಪಡೆಯಲು ಸಾಧ್ಯ ಎಂದರು.ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನವದೆಹಲಿಯ ಮಾಜಿ ನಿರ್ದೇಶಕ ಕೃಷ್ಣಸ್ವಾಮಿ ಮಾತನಾಡಿ, ನಮ್ಮ ಅಗತ್ಯ ೨೦೦ ಗ್ರಾಂ ಅಟ್ಟಾ(ಆಹಾರ) ಇದ್ದರೂ ನಾವು ಅರಮನೆ ಕಟ್ಟುವ ಹುಮ್ಮಸ್ಸಿನಲ್ಲಿ ತೊಡಗಿದ್ದೇವೆ. ಇದರಿಂದ ಪ್ರಯೋಜನವಿಲ್ಲ. ಶಾಂತಿ ಸಂಪತ್ತಿನಿಂದಲ್ಲ, ಮೌಲ್ಯ ಹಾಗೂ ಸೇವೆಯಿಂದ ನಿರ್ಮಾಣವಾಗುತ್ತದೆ ಎಂದರು.
ಪ್ರಶಸ್ತಿ ಪ್ರದಾನ:ದೇಶದಾದ್ಯಂತ ರಾಷ್ಟ್ರಪತಿ ಪ್ರಶಸ್ತಿಗೆ(೨೦೧೬) ಆಯ್ಕೆಯಾದ ೪೮ ಜನರಲ್ಲಿ ೩೦ ಮಂದಿ ಹಾಗೂ ಮೆಸೆಂಜರ್ ಆಫ್ ಪೀಸ್ ಸ್ಟಾರ್ ಪ್ರಶಸ್ತಿಗೆ (೨೦೨೩) ಆಯ್ಕೆಯಾದ ೪೮ ಜನರಲ್ಲಿ ೨೧ ಜನರು ಈ ಸಮಾರಂಭದಲ್ಲಿ ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಪ್ರಭಾಕರ ಭಟ್, ಅನಲೆಂದ್ರ ಶರ್ಮಾ, ಶ್ರೀನಿವಾಸ್ ಕಿಣಿ, ಪ್ರಥಿಮ್ ಕುಮಾರ್, ವಿಮಲಾ ರಂಗಯ್ಯ, ಫೆಲ್ಸಿ ಫರ್ನಾಂಡಿಸ್, ಮೋಹಿನಿ ರಾಮಚಂದ್ರನ್, ಸುಫಲಾ, ಭರತ್ರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ರೋವರ್ ಲೀಡರ್ ಅಭಿನೇಷ್ ಕುಮಾರ್ ನಿರೂಪಿಸಿದರು.;Resize=(128,128))
;Resize=(128,128))