ನೀರಿನ ಅಭಾವ, ಆಸ್ಪತ್ರೆಗಳಲ್ಲೂ ಪರದಾಟ; ಸಭೆ ನಡೆಸಿ ಜಲಮಂಡಳಿಯಿಂದ ಮಿತ ಬಳಕೆಯ ಪಾಠ

| Published : Mar 12 2024, 02:02 AM IST

ನೀರಿನ ಅಭಾವ, ಆಸ್ಪತ್ರೆಗಳಲ್ಲೂ ಪರದಾಟ; ಸಭೆ ನಡೆಸಿ ಜಲಮಂಡಳಿಯಿಂದ ಮಿತ ಬಳಕೆಯ ಪಾಠ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಕೆಲವು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನೀರಿನ ಅಭಾವ ಎದುರಾಗಿರುವ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ನಗರದ ಎಲ್ಲಾ ಆಸ್ಪತ್ರೆಗಳು ನೀರು ಉಳಿಸುವ ಮತ್ತು ಮಿತವಾಗಿ ಬಳಸುವ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿವೆ.

ಮಂಜುನಾಥ ನಾಗಲೀಕರ್‌

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಕೆಲವು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನೀರಿನ ಅಭಾವ ಎದುರಾಗಿರುವ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ನಗರದ ಎಲ್ಲಾ ಆಸ್ಪತ್ರೆಗಳು ನೀರು ಉಳಿಸುವ ಮತ್ತು ಮಿತವಾಗಿ ಬಳಸುವ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿವೆ.

ಮುಂದಿನ ದಿನಗಳಲ್ಲಿ ನೀರಿನ ಅಭಾವದಿಂದ ಎದುರಾಗಬಹುದಾದ ಸಂಭವನೀಯ ಸಮಸ್ಯೆಗಳ ಕುರಿತು ಎಚ್ಚೆತ್ತುಕೊಂಡಿರುವ ಜಲಮಂಡಳಿ ಅಧಿಕಾರಿಗಳು, ಆಸ್ಪತ್ರೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನೀರಿನ ಬಳಕೆ, ಬೇಡಿಕೆ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಮತ್ತು ಕೊರತೆಯಾಗುವ ಸಾಧ್ಯತೆ ಇದ್ದು, ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆಯೂ ಸೂಚಿಸಿದ್ದಾರೆ.

ಆಸ್ಪತ್ರೆಗಳಲ್ಲಿನ ಪೈಪ್‌ಲೈನ್‌ಗಳಲ್ಲಿ ಮತ್ತು ನಲ್ಲಿಗಳಲ್ಲಿ ಸೋರಿಕೆ ತಡೆಯುವುದು ಮತ್ತು ಟ್ಯಾಂಕರ್ ರಿಪೇರಿ ಮುಂತಾದ ಕೆಲಸಗಳನ್ನು ಎಲ್ಲಾ ಆಸ್ಪತ್ರೆಗಳಲ್ಲಿ ಶರವೇಗದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೊಸದಾಗಿ 2 ಬೋರ್‌ವೆಲ್ ಕೊರೆಸಲು ಯೋಜಿಸಲಾಗಿದ್ದು, ಸಂಭವನೀಯ ಸಮಸ್ಯೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಖಾಸಗಿ ಆಸ್ಪತ್ರೆಗಳು ಕೂಡ ನೀರಿನ ಅಭಾವ ಎದುರಿಸುತ್ತಿವೆ. ಹೀಗಾಗಿ, ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ, ರೋಗಿಗಳು, ರೋಗಿಗಳ ಕಡೆಯವರಿಗೆ ನೀರಿನ ಮಿತ ಬಳಕೆ ಕುರಿತು ಸೂಚನೆ ನೀಡಲಾಗುತ್ತಿದೆ. ವಾಟ್ಸ್‌ಆ್ಯಪ್ ಮೂಲಕ ಹಾಗೂ ನೇರವಾಗಿಯೂ ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

ನೀರಿನ ಸಮಸ್ಯೆ:

ಇಂದಿರಾನಗರದ ಇಎಸ್‌ಐ ಆಸ್ಪತ್ರೆಯಲ್ಲಿ ನೀರಿನ ಅಭಾವವಾಗಿದೆ. ಕೊಳವೆ ಬಾವಿಯಲ್ಲಿ ಅಂತರ್ಜಲ ಕುಸಿದಿದೆ. ಜಲಮಂಡಳಿಯಿಂದ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಟ್ಯಾಂಕರ್‌ ನೀರು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಆದರೂ, ನಿರ್ವಹಣೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಈಗಲೇ ಹೇಳಲಾಗದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.ರೋಗಿಗಳನ್ನು ದಾಖಲಿಸಿಕೊಳ್ಳುತ್ತಿಲ್ಲ!

ನಗರದ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ನೀರು ಹೆಚ್ಚು ಬಳಕೆಯಾಗುವ ಚಿಕಿತ್ಸೆಗಳಿಗೆ ಸಂಬಂಧಿಸಿದ ರೋಗಿಗಳನ್ನು ದಾಖಲಿಸಿಕೊಳ್ಳುವುದನ್ನು ಸ್ಥಗಿತಗೊಳಿಸಲಾಗಿದೆ.

ಬೋರ್‌ವೆಲ್ ರಿಪೇರಿ ಮಾಡಿಸಿದ್ದರೂ, ನಮ್ಮಲ್ಲಿ ಶೇಕಡ 50ರಷ್ಟು ನೀರಿನ ಕೊರತೆ ಇದೆ. ಹೀಗಾಗಿ, ಸ್ನಾನ ಮಾಡಿಸಲು ಅಗತ್ಯವಿರುವ ಚಿಕಿತ್ಸೆಯ ರೋಗಿಗಳನ್ನು ತೆಗೆದುಕೊಳ್ಳುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಈ ಮೊದಲು ವಾರ್ಡ್‌ಗಳಲ್ಲಿ 24 ತಾಸು ಬಿಸಿ ನೀರು ಸರಬರಾಜು ಆಗುತ್ತಿತ್ತು. ಅದನ್ನು ಕಡಿತಗೊಳಿಸಲಾಗಿದೆ. ಹೆಚ್ಚು ನೀರು ಬೇಕಾಗುವ ಚಿಕಿತ್ಸೆಗಳನ್ನು ನಿಲ್ಲಿಸಲಾಗಿದೆ ಎಂದು ನಗರದ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಮುಖ್ಯಸ್ಥೆ ಡಾ। ಸುರೇಖಾ ತಿಳಿಸಿದರು.

ಬೋರ್‌ವೆಲ್‌ ನೀರು ಸಮರ್ಪಕವಾಗಿ ಲಭ್ಯವಿದೆ. ಆದರೂ, ಮುಂಜಾಗೃತಾ ಕ್ರಮಗಳನ್ನು ಅನುಸರಿಸುತ್ತಿದ್ದೇವೆ ಎಂದು ಕೆ.ಸಿ.ಜನರಲ್ ಆಸ್ಪತ್ರೆಯ ಮುಖ್ಯಸ್ಥೆ ಡಾ। ಇಂದಿರಾ ಕಬಾಡೆ ತಿಳಿಸಿದರು.

ನಗರದ ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ಆಸ್ಪತ್ರೆಯಲ್ಲಿ ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲದಿದ್ದರೂ, ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆಸ್ಪತ್ರೆ, ಶೌಚಗೃಹಗಳಲ್ಲಿ ಸ್ವಚ್ಛತೆ ಹಾಗೂ ಗಾರ್ಡನಿಂಗ್‌ಗೆ ಶುದ್ಧೀಕರಣ ಘಟಕದ ನೀರನ್ನು ಬಳಕೆ ಮಾಡಲಾಗುತ್ತಿದೆ. ನೀರು ಸೋರಿಕೆ ಪರಿಶೀಲನೆ ನಡೆಸಿ ಪ್ರತ್ಯೇಕವಾಗಿ ಪ್ಲಂಬರ್‌ ಒಬ್ಬರನ್ನು ನಿಯೋಜಿಸಲಾಗಿದೆ ಎಂದು ಬೌರಿಂಗ್ ಆಸ್ಪತ್ರೆ ಅಧಿಕಾರಿಗಳು ಹೇಳಿದ್ದಾರೆ.ಅಭಾವ ಎದುರಿಸಲು ವಿಕ್ಟೋರಿಯಾ ಸಜ್ಜು:

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲದಿದ್ದರೂ ಮುಂಜಾಗೃತ ಕ್ರಮವಾಗಿ ಎರಡು ಹೊಸ ಬೋರ್‌ವೆಲ್‌ಗಳನ್ನು ಕೊರೆಸಲು ತೀರ್ಮಾನಿಸಲಾಗಿದೆ ಎಂದು ವೈದ್ಯಕೀಯ ಅಧೀಕ್ಷಕ ಡಾ. ದೀಪಕ್ ಹೇಳಿದರು.

ಕಳೆದ ವಾರ ಜಲಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆಸ್ಪತ್ರೆಯಲ್ಲಿ ಬಳಕೆ ಆಗುತ್ತಿರುವ ನೀರಿನ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. ಆಸ್ಪತ್ರೆಯ ಶೌಚಗೃಹಗಳಲ್ಲಿ ಮತ್ತು ಗಾರ್ಡನಿಂಗ್‌ಗೆ ಮರುಬಳಕೆಯ ನೀರು ಬಳಸಲು ತೀರ್ಮಾನಿಸಲಾಗಿದೆ. ರೋಗಿಗಳು, ವೈದ್ಯಕೀಯ ಸಿಬ್ಬಂದಿ, ಹಾಸ್ಟೇಲ್ ವಿಭಾಗಗಳಲ್ಲಿ ನೀರಿನ ಮಿತ ಬಳಕೆ ಮತ್ತು ಉಳಿತಾಯಕ್ಕೆ ಸೂಚಿಸಲಾಗಿದೆ ಎಂದು ಹೇಳಿದರು.