ಸಾರಾಂಶ
ಮಾಗಡಿ: ಪಟ್ಟಣದ ಐತಿಹಾಸಿಕ ತಿರುಮಲೆ ರಂಗನಾಥಸ್ವಾಮಿ ದೇವಾಲಯದಲ್ಲಿ ವಿಷ್ಣು ಲಕ್ಷ ದೀಪೋತ್ಸವ ಅದ್ಧೂರಿಯಾಗಿ ನೆರವೇರಿತು.
ಮಾಗಡಿ: ಪಟ್ಟಣದ ಐತಿಹಾಸಿಕ ತಿರುಮಲೆ ರಂಗನಾಥಸ್ವಾಮಿ ದೇವಾಲಯದಲ್ಲಿ ವಿಷ್ಣು ಲಕ್ಷ ದೀಪೋತ್ಸವ ಅದ್ಧೂರಿಯಾಗಿ ನೆರವೇರಿತು.
ವಿಷ್ಣು ದೀಪೋತ್ಸವದ ಅಂಗವಾಗಿ ರಂಗನಾಥ ಸ್ವಾಮಿಗೆ ವಿಶೇಷ ಅಭಿಷೇಕ, ಅರ್ಚನೆ, ಪುಷ್ಪಾಲಂಕಾರ, ತೋಮಾಲೆ ಸೇವೆ, ವಿಷ್ಣು ಪಾರಾಯಣ ಮಾಡಲಾಯಿತು. ದೇವರ ಮೂರ್ತಿಗೆ ವಜ್ರ ಖಚಿತ ಚಿನ್ನದ ಕಿರೀಟಧಾರಣೆ ಮಾಡಲಾಗಿತ್ತು. ಬೆಳಗ್ಗೆಯಿಂದಲೇ ಭಕ್ತರು ಸರದಿಯಲ್ಲಿ ರಂಗನಾಥ ಸ್ವಾಮಿಯ ದರ್ಶನ ಪಡೆದರು.ಲಕ್ಷ ದೀಪೋತ್ಸವ ಆಚರಣಾ ಸಮಿತಿಯಿಂದ ಪ್ರತಿ ವರ್ಷವೂ ವಿಷ್ಣು ಲಕ್ಷ ದೀಪೋತ್ಸವ ಅದ್ಧೂರಿಯಾಗಿ ನಡೆಯುತ್ತಿದ್ದು, ದೇವಸ್ಥಾನದಲ್ಲಿ ವಿಶೇಷ ಹೋಮ ಏರ್ಪಡಿಸಲಾಗಿತ್ತು. ಸಂಜೆ ವಿಷ್ಣು ಲಕ್ಷ ದೀಪೋತ್ಸವಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು. ದೀಪೋತ್ಸವದ ಅಂಗವಾಗಿ ದೇವಾಲಯದ ಸುತ್ತಲೂ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ರಂಗನಾಥ ಸ್ವಾಮಿ ಉತ್ಸವ ಮೂರ್ತಿಯನ್ನು ಸಂಜೆ 7 ಗಂಟೆಗೆ ದೇವಸ್ಥಾನದ ಸುತ್ತ ಮೆರವಣಿಗೆ ಮಾಡಿ, ದೇವಾಲಯದ ಮುಂಭಾಗದಲ್ಲಿರುವ ಪುಷ್ಕರಣಿಯಲ್ಲಿ ವೈಭವದ ತೆಪ್ಪೋತ್ಸವ ನೆರವೇರಿಸಲಾಯಿತು. ಶಾಸಕರ ಧರ್ಮಪತ್ನಿ ರಾಧಾ ಬಾಲಕೃಷ್ಣ ಅವರು ರಂಗನಾಥ ಸ್ವಾಮಿ ದರ್ಶನ ಪಡೆದರು. ತಹಸೀಲ್ದಾರ್ ಶರತ್ಕುಮಾರ್ ಹಾಗೂ ಗಣ್ಯರು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು. ದೇವಸ್ಥಾನ ಪ್ರಧಾನ ಅರ್ಚಕರಾದ ವೆಂಕಟೇಶ್ ಅಯ್ಯಂಗಾರ್, ಗೋವಿಂದರಾಜು, ಸತೀಶ್, ಕೃಷ್ಣ, ಶ್ರೀಶೈಲ ಭಟ್, ಪುರಸಭಾ ಸದಸ್ಯರಾದ ಪುರುಷೋತ್ತಮ್, ಶಿವಕುಮಾರ್, ರಂಗನಾಥ್, ಗುತ್ತಿಗೆದಾರ ದೇವರಾಜ್, ತಿರುಮಲೆ ಬೈರಪ್ಪ, ನರಸಿಂಹಮೂರ್ತಿ, ರವೀಶ್ ಹಾಗೂ ಭಕ್ತರು ಭಾಗವಹಿಸಿದ್ದರು.