ಸಾರಾಂಶ
ಕನಕಗಿರಿ: ಮುಜರಾಯಿ ಇಲಾಖೆಗೆ ಒಳಪಡುವ ಇಲ್ಲಿನ ಕನಕಾಚಲ ಲಕ್ಷ್ಮೀ ನರಸಿಂಹಸ್ವಾಮಿ ದೇವರಿಗೆ ವೈಕುಂಠ ಏಕಾದಶಿ ಅಂಗವಾಗಿ ಲಕ್ಷ ತುಳಸಿ ಅರ್ಚನೆ ಕಾರ್ಯಕ್ರಮ ಶನಿವಾರ ನೆರವೇರಿತು.೨೦ ಮಂದಿಯ ಭಕ್ತವೃಂದವು ಒಂದು ಸುತ್ತಿಗೆ ಮಂತ್ರ ಪಠಿಸುತ್ತಾ ೨೦ ಸಾವಿರ ತುಳಸಿ ದಳ ಸ್ವಾಮಿಗೆ ಅರ್ಪಣೆಯಾಯಿತು. ಹೀಗೆ ಐದು ಸುತ್ತುಗಳಲ್ಲಿ ೧ಲಕ್ಷ ತುಳಸಿ ದಳ ಸ್ವಾಮಿಗೆ ಅರ್ಚನೆ ಮಾಡಲಾಯಿತು.ಕಾರ್ಯಕ್ರಮವು ಬೆಳಿಗ್ಗೆ ೭ರಿಂದ ಮಧ್ಯಾಹ್ನ ೨ಗಂಟೆಯವರೆಗೆ ನಡೆಯಿತು. ತುಳಸಿ ಅರ್ಚನೆ ಬಳಿಕ ಶ್ರೀ ಕನಕಾಚಲ ಭಜನಾ ಸಂಘದವರಿಂದ ಭಜನೆಯೊಂದಿಗೆ ಪಲ್ಲಕ್ಕಿ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.ಸುಮಂಗಲೆಯರು ಹಾಗೂ ನೂರಾರು ಭಕ್ತರು ತುಳಸಿದಳ ಸಂಗ್ರಹಿಸಿ ಅರ್ಚನೆ ನೀಡಿ ಭಕ್ತಿ ಮೆರೆದರು.ಲಕ್ಷ ತುಳಸಿ ಅರ್ಚನೆ ಕಾರ್ಯಕ್ರಮಕ್ಕೆ ಬೆಂಗಳೂರು, ತುಮಕೂರು, ಮೈಸೂರು, ಕೊಪ್ಪಳ, ವೆಂಕಟಗಿರಿ ಸೇರಿದಂತೆ ಕನಕಗಿರಿ ತಾಲೂಕಿನ ವಿವಿಧ ಗ್ರಾಮಗಳಿಂದ ತುಳಸಿದಳವನ್ನು ದೇವಸ್ಥಾನಕ್ಕೆ ತರಲಾಗಿತ್ತು. ಒಂದೂವರೆ ಕ್ವಿಂಟಲ್ ತುಳಸಿಯನ್ನು ಸ್ವಾಮಿಗೆ ಅರ್ಪಿಸಲಾಯಿತು.ಲಕ್ಷ ತುಳಸಿ ಅರ್ಚನೆ ಹಿನ್ನೆಲೆಯಲ್ಲಿ ಶ್ರೀ ಕನಕಾಚಲಪತಿ ದೇವಸ್ಥಾನಕ್ಕೆ ಸಾವಿರಾರು ಜನ ಆಗಮಿಸಿ ದರ್ಶನ ಪಡೆದು, ಪುನೀತರಾದರು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.ದೇವಸ್ಥಾನ ಸಮಿತಿ ಅಧ್ಯಕ್ಷ ನಾಗರಾಜ ತೆಗ್ಗಿಹಾಳ, ಸದಸ್ಯರಾದ ನಾಗಪ್ಪ ಕೊರೆಡ್ಡಿ, ವೀರೇಶ ಕಡಿ, ಕೀರ್ತಿ ಸೋನಿ, ಸಿಂಗ್ರಚಾರ್, ವೆಂಕಟೇಶ ಸೌದ್ರಿ, ಪ್ರಮುಖರಾದ ಸುದರ್ಶನರೆಡ್ಡಿ, ಕನಕರೆಡ್ಡಿ, ಗುಂಡಪ್ಪ ಚಿತ್ರಗಾರ, ಸುರೇಶರೆಡ್ಡಿ ಮಹಲಿನಮನಿ, ಅಯ್ಯನಗೌಡ ಅಳ್ಳಳ್ಳಿ, ಅರ್ಚಕ ದೇಶಿಕಾಚಾರ್ಯ ಸೇರಿದಂತೆ ದೇವಸ್ಥಾನ ಸಿಬ್ಬಂದಿ ಇದ್ದರು.