ಸಾರಾಂಶ
ಸಂತ್ರಸ್ತರ ಮೊಗದಲ್ಲಿ ಆಶಾಕಿರಣ । ಕರ್ನಾಟಕ ಸರ್ಕಾರದ ಪರವಾಗಿ ವಿಶೇಷ ವಕೀಲರಾಗಿ ದೇವದತ್ತ ಕಾಮತ್ ವಾದ ಮಂಡನೆ
ಗೋಪಾಲ ಯಡಗೆರೆಕನ್ನಡಪ್ರಭ ವಾರ್ತೆ ಶಿವಮೊಗ್ಗ
ಹಲವು ದಶಕಗಳ ಕಾಲದ ಮಲೆನಾಡಿನ ಜ್ವಲಂತ ಸಮಸ್ಯೆಗಳಲ್ಲಿ ಪ್ರಮುಖವಾದ ಶರಾವತಿ ಸಂತ್ರಸ್ತರಿಗೆ ಭೂ ಹಕ್ಕು ನೀಡುವ ವಿಚಾರ ಇದೀಗ ಸುಪ್ರೀಂ ಕೋರ್ಟ್ ನಲ್ಲಿ ಅಧಿಕೃತವಾಗಿ ವಿಚಾರಣೆಗೆ ಬಂದಿದ್ದು, ಈ ಮೂಲಕ ಈ ಸಂತ್ರಸ್ತರಲ್ಲಿ ಆಶಾಕಿರಣವೊಂದು ಮೂಡುವ ಸಾಧ್ಯತೆ ಕಾಣಿಸಿದೆ.ಸುಪ್ರೀಂಕೋರ್ಟ್ನಲ್ಲಿ ಮಂಗಳವಾರ ಭೂಮಿ ಹಕ್ಕು ನೀಡುವ ಸಂಬಂಧ ಮೊದಲ ವಿಚಾರಣೆ ನಡೆಯಿತು. ಕರ್ನಾಟಕ ಸರ್ಕಾರದ ಪರವಾಗಿ ವಿಶೇಷ ವಕೀಲರಾಗಿ ದೇವದತ್ತ ಕಾಮತ್ ಅವರು ಸರ್ಕಾರಿ ವಕೀಲರ ಜೊತೆ ಸೇರಿಕೊಂಡು ವಾದ ಮಂಡಿಸಿದರು. ಈ ಮೂಲಕ ಶರಾವತಿ ಸಂತ್ರಸ್ತರ ಪರವಾಗಿ ಕಾನೂನು ಹೋರಾಟ ಸುಪ್ರೀಂ ಕೋರ್ಟ್ನಲ್ಲಿ ಆರಂಭವಾದಂತಾಗಿದೆ.
ಶರಾವತಿ ಸಂತ್ರಸ್ತರಿಗೆ ಭೂಮಿ ನೀಡುವ ಸಂಬಂಧ ರಾಜ್ಯ ಸರ್ಕಾರ ಡಿ ನೋಟಿಫೈ ಮಾಡಿತ್ತು. ಆದರೆ ಡಿನೋಟಿಫೈ ಮಾಡುವ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿಶೇಷ ಅನುಮತಿ ಕೋರಿರಲಿಲ್ಲ ಎಂಬ ಕಾರಣ ಮುಂದಿಟ್ಟುಕೊಂಡು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರದ ಡಿನೋಟಿಫೈ ಆದೇಶ ರದ್ದುಗೊಳಿಸಿತ್ತು. ಇದರಿಂದ ಸಂತ್ರಸ್ತರು ತೀವ್ರ ನಿರಾಶೆಗೆ ಒಳಗಾಗಿದ್ದರು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಮತ್ತು ಸಂತ್ರಸ್ತರ ಪರವಾಗಿ ಹೋರಾಟ ನಡೆಸುತ್ತಿದ್ದ ಸಂಘಟನೆಗಳು ಸೇರಿಕೊಂಡು ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ಪುನಃ ಸುಪ್ರಿಂಕೋರ್ಟ್ ಗೆ ಮನವಿ ಸಲ್ಲಿಸಿದ್ದಲ್ಲದೆ, ಸಮಸ್ಯೆಯ ಗಂಭೀರತೆಯನ್ನು ಮನವರಿಕೆ ಮಾಡಿಕೊಟ್ಟಿದ್ದವು. ಹೀಗಾಗಿ ಸುಪ್ರೀಂಕೋರ್ಟ್ ಈ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿತ್ತು. ಇದರ ಮೊದಲ ವಿಚಾರಣೆ ಡಿ.3 ರಂದು ಮಂಗಳವಾರ ಆರಂಭವಾಯಿತು.*ಹೋರಾಟದ ಹಾದಿ:
ಸಂತ್ರಸ್ತರ ಸಮಸ್ಯೆ 1959 ರ ಕಾಲಘಟ್ಟದಲ್ಲಿಯೇ ಆರಂಭಗೊಂಡಿದ್ದರೂ ಆಗಿನ ಸರ್ಕಾರ ತಕ್ಷಣ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕ್ರಮಕ್ಕೆ ಮುಂದಾಗದ ಕಾರಣ ಸಮಸ್ಯೆ ನನೆಗುದಿಗೆ ಬಿದ್ದಿತ್ತು. ಸಮಸ್ಯೆ ಗಂಭೀರ ಸ್ವರೂಪಕ್ಕೆ ಹೋಗುತ್ತಿದೆ ಎನ್ನುವ ಹೊತ್ತಿಗೆ ಎಂದರೆ 1980 ಅರಣ್ಯ ಸಂರಕ್ಷಣಾ ಕಾಯಿದೆ ಜಾರಿಗೆ ಬಂದಿತ್ತು. ಈ ಕಾಯ್ದೆ ಜಾರಿಯ ಬಳಿಕ ರಾಜ್ಯ ಸರ್ಕಾರಕ್ಕೆ ಯಾವುದೇ ಅರಣ್ಯ ಭೂಮಿಯನ್ನು ಕೇಂದ್ರ ಸರ್ಕಾರದ ವಿಶೇಷ ಅನುಮೋದನೆ ಪಡೆಯುವುದು ಅನಿವಾರ್ಯವಾಗಿತ್ತು.*ಬಗೆಹರಿಸುವಲ್ಲಿನ ನಿರ್ಲಕ್ಷ್ಯ:
1984ರಲ್ಲಿ ತಿದ್ದುಪಡಿಯಾದ ಭೂಸ್ವಾಧೀನ ಕಾಯ್ದೆಯಲ್ಲಿ ಶರಾವತಿ, ಚಕ್ರಾ ಸಾವೆಹಕ್ಲು ಪ್ರಕರಣಗಳ ಸೇರಿದಂತೆ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸುವ ಯಾವುದೇ ಪ್ರಸ್ತಾವನೆ ಇಲ್ಲವಾಗಿರುವುದು ಈ ಸಮಸ್ಯೆ ಕುರಿತು ಆಡಳಿತ ವ್ಯವಸ್ಥೆ ಹೊಂದಿದ ನಿರ್ಲಕ್ಷ್ಯ ಮನೋಭಾವನೆಯನ್ನು ಅನಾವರಣಗೊಳಿಸಿದೆ. 1980ರ ಅರಣ್ಯ ಸಂರಕ್ಷಣಾ ಕಾಯ್ದೆಯಲ್ಲಿ 1978ರ ಪೂರ್ವದ ಸಾಗುವಳಿ ಪ್ರದೇಶಗಳಿಗೆಲ್ಲಾ ಕೇಂದ್ರ ಕಾಯ್ದೆಯಲ್ಲಿ ವಿನಾಯಿತಿ ನೀಡಲಾಗಿದ್ದರೂ 1991 ರವರೆಗೂ ಯಾರಿಗೂ ಹಕ್ಕು ನೀಡದೇ ನಂತರ ಏಕಪಕ್ಷೀಯವಾಗಿ ಅರಣ್ಯ ಇಲಾಖೆಯು ಮಾರ್ಗಸೂಚಿ ಹೊರಡಿಸಿ, ಯಾರಿಗೂ ಹಕ್ಕುಗಳು ದೊರಕದಂತೆ ಮಾಡಲಾಗಿರುವುದನ್ನು ಹೋರಾಟಗಾರರು ತಮ್ಮ ಹೋರಾಟದಲ್ಲಿ ಹಲವಾರು ಬಾರಿ ಹೇಳಿದ್ದಾರೆ.*ಸುಪ್ರೀಂಕೋರ್ಟ್ ಸಲ್ಲಿಸಿದ ಅಫಿಡವಿಟ್ ನಲ್ಲೆ ದೋಷ:
2012ರಲ್ಲಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ಗೆ ಪರಿಸರವಾದಿಗಳ ಪ್ರಕರಣವೊಂದರಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಎಲ್ಲ ಅರಣ್ಯ ಒತ್ತುವರಿಗಳನ್ನು ಕಾಲಮಿತಿಯಲ್ಲಿ ತೆರವುಗೊಳಿಸುವುದಾಗಿ ಒಪ್ಪಿಕೊಂಡಿದೆ. ಅದೇ ಪ್ರಕರಣದಲ್ಲಿ ಅರಣ್ಯ ಇಲಾಖೆಯು ಸಲ್ಲಿಸಿದ್ದ ಅಂಕಿ ಅಂಶಗಳಲ್ಲಿ ಅಧಿಸೂಚಿತ ಅರಣ್ಯ ಮಾತ್ರವಲ್ಲದೇ 4(1) ಅಧಿಸೂಚಿತ, ಸೆಟ್ಲೆಮೆಂಟ್ ಬಾಕಿ ಇರುವ ಮತ್ತು ಸೂಚಿತ ಆರಣ್ಯ ವಿಸ್ತೀರ್ಣಗಳನ್ನು ಅಫಿಡವಿಟ್ ನಲ್ಲಿ ಸೇರಿಸಿಕೊಂಡಿರುವ ಕಾರಣ ಶಿವಮೊಗ್ಗ ಜಿಲ್ಲೆಯಲ್ಲಿ ಸಾವಿರಾರು ಕುಟುಂಬಗಳಿಗೆ ಇದೀಗ ತೆರವುಗೊಳಿಸಲು ನೋಟಿಸ್ ನೀಡಲಾಗುತ್ತಿರುವುದನ್ನು ಉಲ್ಲೇಖಿಸಬಹುದಾಗಿದೆ.ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಈ ಸಂಬಂಧ ವಿಶೇಷ ಪ್ರಯತ್ನ ನಡೆಸಿದ್ದು ಗಮನಿಸಬಹುದಾಗಿದೆ. ಸಿಸಿಎಫ್ ಹನುಮಂತಪ್ಪ ಅವರು ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ವೀಡಿಯೋ ಕಾನ್ಫ್ರೆನ್ಸ್ ಮೂಲಕ ದೇವದತ್ತ ಕಾಮತ್ ಅವರಿಗೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ಅಂಗಳದಲ್ಲಿ ಭವಿಷ್ಯ:
ಇದೀಗ ಸುಪ್ರಿಂಕೋರ್ಟ್ನಲ್ಲಿ ವಿಚಾರಣೆ ಆರಂಭಗೊಂಡಿರುವುದರಿಂದ ಕೇಂದ್ರ ಸರ್ಕಾರ ಕೋರ್ಟ್ಗೆ ತನ್ನ ಸ್ಪಷ್ಟ ಅಭಿಪ್ರಾಯವನ್ನು ಲಿಖಿತವಾಗಿ ಸಲ್ಲಿಸಬೇಕಾಗುತ್ತದೆ. ಹೀಗಾಗಿ ಸಮಸ್ಯೆ ಪರಿಹಾರದ ಚೆಂಡು ಕೇಂದ್ರ ಸರ್ಕಾರದ ಅಂಗಳಕ್ಕೆ ಹೋದಂತಾಗಿದೆ. ಶಿವಮೊಗ್ಗ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿನ 31 ಪ್ರದೇಶಗಳಲ್ಲಿ ಶರಾವತಿ ಯೋಜನೆಯ ಸಂತ್ರಸ್ತರು ನೆಲೆ ಕಂಡುಕೊಂಡಿದ್ದಾರೆ. ಆಗ ಸಂತ್ರಸ್ತರಿಗೆ ಭೂಮಿ ತೋರಿಸಿ ಅಲ್ಲಿ ಬಿಟ್ಟು ಹೋಗಿದ್ದ ಆಗಿನ ಸರ್ಕಾರ ಬಳಿಕ ಭೂಮಿಯ ಹಕ್ಕು ನೀಡಿರಲಿಲ್ಲ. ಇದರಿಂದ ರೈತರು ಹಲವು ದಶಕಗಳ ಬಳಿಕವೂ ಸರ್ಕಾರದಿಂದ ಯಾವುದೇ ಸೌಲಭ್ಯ ಪಡೆಯದಂತಾಗಿತ್ತು. ಮಾತ್ರವಲ್ಲದೆ, ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಯ ಬಳಿಕ ಅಲ್ಲಿಂದ ಎತ್ತಂಗಡಿಯ ಭೀತಿ ಕೂಡ ಎದುರಿಸುತ್ತಿದ್ದರು. ಕಳೆದ ಐದಾರು ದಶಕಗಳಿಂದ ಹಲವು ರೀತಿಯ ಹೋರಾಟ ಆರಂಭಿಸಿದ್ದ ಸಂತ್ರಸ್ತರು ನ್ಯಾಯ ಪಡೆಯುವ ಪ್ರಯತ್ನ ನಡೆಸಿದ್ದರೂ ಇದು ಸಾಧ್ಯವಾಗಿರಲಿಲ್ಲ. ಆದರೆ ಈಗ ಸುಪ್ರೀಂ ಕೋರ್ಟ್ ಪ್ರಕರಣವನ್ನು ವಿಚಾರಣೆಗೆ ಅನುಮೋದಿಸಿರುವುದರಿಂದ ಏನಾದರೊಂದು ಪರಿಹಾರ ಸಿಗುವ ಸಾಧ್ಯತೆ ದಟ್ಟವಾಗಿದೆ.