ಸಾರಾಂಶ
ಯಲ್ಲಾಪುರ: ಅರಣ್ಯವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ನ. ೭ರಂದು ಹಮ್ಮಿಕೊಂಡಿರುವ ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ತಾಲೂಕಿನಿಂದ ಸಾವಿರಾರು ಸಂಖ್ಯೆಯಲ್ಲಿ ಅರಣ್ಯವಾಸಿಗಳು ಭಾಗವಹಿಸಲಿದ್ದಾರೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.ಅ. ೧೫ರಂದು ಪಟ್ಟಣದ ವೆಂಕಟರಮಣ ದೇವಸ್ಥಾನದಲ್ಲಿ ಜರುಗಿದ ತಾಲೂಕು ಅರಣ್ಯವಾಸಿಗಳ ಸಭೆಯಲ್ಲಿ ಈ ನಿರ್ಣಯವನ್ನು ತಿಳಿಸಿದರು.ಜ್ವಲಂತ ಅರಣ್ಯವಾಸಿಗಳ ಸಮಸ್ಯೆ ಬಗೆಹರಿಸಲು ನಿರಂತರವಾದ ೩೩ ವರ್ಷ ಹೋರಾಟ ನಡೆದರೂ ಕಾನೂನಾತ್ಮಕ ಪರಿಹಾರ ದೊರಕದಿರುವುದು ವಿಷಾದಕರ ಎಂದ ಅವರು, ಸಂಘಟಿತ ಮತ್ತು ಕಾನೂನಾತ್ಮಕ ಹೋರಾಟದಿಂದ ಮಾತ್ರ ಭೂಮಿ ಹಕ್ಕು ದೊರೆಯಲು ಸಾಧ್ಯ ಎಂದರು.ತಾಲೂಕು ಅರಣ್ಯ ಭೂಮಿ ಹೋರಾಟಗಾರರ ಅಧ್ಯಕ್ಷ ಭೀಮಶಿ ವಾಲ್ಮೀಕಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಚಾಲಕ ಅಣ್ಣಪ್ಪ ನಾಯ್ಕ ಕಣ್ಣೀಗೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಂತ ಗೌಡ ಮಲವಳ್ಳಿ, ದಿವಾಕರ ಮರಾಠಿ ಆನಗೋಡ, ರಾಘವೇಂದ್ರ ಕುಣಬಿ ಮಾವಿನಮನೆ, ಗೋಪಾಲಕೃಷ್ಣ ಹೆಗಡೆ, ಶೇಖರ ನಾಯ್ಕ ಹಿತ್ಲಳ್ಳಿ, ಭಾಸ್ಕರ ಗೌಡ, ಮೊರ್ ಅಹಮ್ಮದ್, ಸುಬ್ರಾಯ ಹೆಗಡೆ ಮಲಗೋಡ ಮುಂತಾದವರು ಮಾತನಾಡಿದರು. ಆನಂದ ರಾಮ ಸಿದ್ದಿ, ಸೀತಾರಾಮ ನಾಯ್ಕ ಕುಂದರಗಿ, ರಾಮ ಗಾವಡೆ, ಅಶೋಕ ಕಾಮ್ಲೆ, ಥಾಮಸ್ ಜೋಸೇಫ್, ಶ್ರೀಕಾಂತ ಭಟ್ಟ, ಶಿವಾಜಿ ಕಾಮ್ಲೆ, ಲೋರೇನ್ ಸಿದ್ದಿ ಮತ್ತಿತರರು ಉಪಸ್ಥಿತರಿದ್ದರು.ನಾಳೆಯಿಂದ ಕರ್ನಾಟಕ ಸಂಭ್ರಮ 50ರ ಜ್ಯೋತಿ ರಥಯಾತ್ರೆ
ಕಾರವಾರ: ಕರ್ನಾಟಕ ರಾಜ್ಯ ಎಂದು ನಾಮಕರಣವಾಗಿ ನ. 2023ಕ್ಕೆ 50 ವರ್ಷ ಪೂರ್ಣಗೊಂಡಿರುವ ಹಿನ್ನೆಲೆ ಕರ್ನಾಟಕ ಸಂಭ್ರಮ 50ರ ಜ್ಯೋತಿ ರಥಯಾತ್ರೆಯು ರಾಜ್ಯಾದ್ಯಂತ 2023ರ ನ. 2ರಿಂದ 2024ರ ಅ. 29ರ ವರೆಗೆ ಸಂಚರಿಸುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಅ. 19ರಿಂದ ಅ. 29ರ ವರೆಗೆ ಸಂಚರಿಸಲಿದೆ.ಅ.19ರಂದು ರಥವು ಭಟ್ಕಳಕ್ಕೆ ಆಗಮಿಸಲಿದ್ದು, ಅ. 20ರ ವರೆಗೆ ಭಟ್ಕಳ ತಾಲೂಕಿನಲ್ಲಿ ರಥ ಸಂಚರಿಸಲಿದೆ. ಅ. 21ರಂದು ಬೆಳಗ್ಗೆ 9 ಗಂಟೆಗೆ ಹೊನ್ನಾವರ ತಾಲೂಕಿಗೆ ಆಗಮಿಸಿ, ತಾಲೂಕಿನಲ್ಲಿ ಸಂಚರಿಸಲಿದೆ. ಅ. 22ರಂದು ಬೆಳಗ್ಗೆ 9 ಗಂಟೆಗೆ ಕಾರವಾರ ತಾಲೂಕಿಗೆ ಆಗಮಿಸಿ, ತಾಲೂಕಿನಲ್ಲಿ ಸಂಚಾರ ನಡೆಸಲಿದೆ. ಅ. 23ರಂದು ಬೆಳಗ್ಗೆ 9 ಗಂಟೆಗೆ ಯಲ್ಲಾಪುರ, ಅ. 24ರಂದು ಬೆಳಗ್ಗೆ 9 ಗಂಟೆಗೆ ಜೋಯಿಡಾ, ಅ. 25ರಂದು ಬೆಳಗ್ಗೆ 9 ಗಂಟೆಗೆ ದಾಂಡೇಲಿ, ಅ. 26ರಂದು ಬೆಳಗ್ಗೆ 9 ಗಂಟೆಗೆ ಹಳಿಯಾಳ, ಅ. 27ರಂದು ಬೆಳಗ್ಗೆ 9 ಗಂಟೆಗೆ ಮುಂಡಗೋಡ, ಅ. 28ರಂದು ಶಿರಸಿ, ಅ. 29ರಂದು ರಂದು ಸಿದ್ದಾಪುರ ತಾಲೂಕಿನಲ್ಲಿ ಸಂಚರಿಸಲಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.