ಸಾರಾಂಶ
ಕೊಪ್ಪಳ: ಬಗರಹುಕುಂ ಯೋಜನೆಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ನಿಯಮಾನುಸಾರ ವಿಲೇವಾರಿ ಮಾಡಿ ಮತ್ತು ಬಡವರಿಗೆ ಅನುಕೂಲ ಮಾಡಿಕೊಡುವಂತೆ ಶಾಸಕ ರಾಘವೇಂದ್ರ ಹಿಟ್ನಾಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಬಗರ ಹುಕುಂ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕೊಪ್ಪಳ ಮತಕ್ಷೇತ್ರದಲ್ಲಿ ಸಾಗುವಳಿದಾರರಿಂದ ಸ್ವೀಕೃತಗೊಂಡಿರುವ ಅರ್ಜಿಗಳನ್ನು ಮುತುವರ್ಜಿ ವಹಿಸಿ ವಿಲೇವಾರಿ ಮಾಡಬೇಕು. ಯಾವುದೇ ಕಾರಣಕ್ಕೂ ನಿಧಾನಗತಿ ಮಾಡುವುದು ಸರಿಯಲ್ಲ. ಆದರೆ, ವಿಲೇವಾರಿ ಮಾಡುವ ವೇಳೆಯಲ್ಲಿ ಅರ್ಹ ಫಲಾನುವಿಗಳನ್ನು ಗುರುತಿಸುವುದು ಬಹಳ ಮುಖ್ಯವಾಗಿದೆ. ಭೂಮಿ ಹಂಚಿಕೆ ಮಾಡುವುದು ಸಹ ಸೂಕ್ತ ಮತ್ತು ಸರ್ಕಾರದ ಆಶಯವಾಗಿದೆ. ಅದಕ್ಕೆ ಅಧಿಕಾರಿಗಳು ಒತ್ತು ನೀಡಿ, ಆದ್ಯತೆ ಮೇಲೆ ವಿಲೇವಾರಿ ಮಾಡಿ ಎಂದರು.
ಬಗರ್ ಹುಕುಂ ಯೋಜನೆ ಇರುವುದೇ ಬಡವರಿಗಾಗಿ. ಭೂ ರಹಿತ ಜನರಿಗೆ ಭೂಮಿ ಹಂಚಿಕೆ ಮಾಡಬೇಕು. ಅಧಿಕಾರಿಗಳು ಇಲಾಖೆಗೆ ಸಂಬಂಧಪಟ್ಟ ಭೂಮಿ ಗುರುತಿಸಿ, ನಂತರ ಅರ್ಜಿಗಳನ್ನು ವಿಲೇವಾರಿ ಮಾಡುವುದಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.ಅಧಿಕಾರಿಗಳು ಇಚ್ಛಾಶಕ್ತಿಯಿಂದ ಕಾರ್ಯ ನಿರ್ವಹಿಸಿದರೆ ವರ್ಷಕೊಮ್ಮೆ 500 ಫಲಾನುಭವಿಗಳಿಗೆ ಭೂಮಿ ಹಂಚಿಕೆ ಮಾಡಬಹುದು. ಆದರೆ, ಯಾಕೆ ಆಸಕ್ತಿ ತೋರಿಸುತ್ತಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದು ಬಹಳ ಮುಖ್ಯವಾಗಿರುವ ಕೆಲಸವಾಗಿರುವುದರಿಂದ ನಿಧಾನ ಮಾಡದೆ, ಭೂಮಿ ಗುರುತಿಸುವುದು ಹಾಗೂ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವುದನ್ನು ನಿರಂತರವಾಗಿ ಮಾಡುತ್ತಿರಬೇಕು. ಅರ್ಜಿ ಹಾಕಿದವರು ಕಚೇರಿಗೆ ಸುತ್ತಾಡಿ ಸುತ್ತಾಡಿ ಸುಸ್ತಾಗಿ ಹೋಗುವಂತೆ ಮಾಡುವುದು ಸರಿಯಲ್ಲ ಎಂದರು.
ಸದ್ಯ 329 ಅರ್ಜಿಗಳ ವಿಲೇವಾರಿಯಾಗಿದ್ದು, ಆ ಫಲಾಭವಿಗಳಿಗೆ ಒಂದು ತಿಂಗಳಿನಲ್ಲಿ ಭೂ ಹಂಚಿಕೆಯ ಪತ್ರ ನೀಡಬೇಕು ಎಂದು ಸೂಚನೆ ನೀಡಿದರು.ಈ ಸಭೆಯಲ್ಲಿ ಬಗರ್ ಹುಕುಂ ಸಮಿತಿ ಸದಸ್ಯರಾದ ಯಂಕಪ್ಪ ಹೊಸಳ್ಳಿ, ತಹಸೀಲ್ದಾರ್ ವಿಠ್ಠಲ್ ಚೌಗಲೇ, ಎ.ಡಿ. ಎಲ್.ಆರ್. ಬಸವರಾಜ, ತಾಪಂ ಇಓ ದುಂಡೇಶ ತುರಾದಿ, ಸರ್ವೇದಾರ್ ರಾಜೂರು, ಮಲ್ಲಿಕಾರ್ಜುನ್ ಸೇರಿದಂತೆ ಹಲವರಿದ್ದರು.