ಕನ್ನಡಪ್ರಭ ವಾರ್ತೆ ಸಕಲೇಶಪುರ
ರಸ್ತೆಗಳಲ್ಲಿ ತೋಳ್ಚರಂಡಿ ನಿರ್ಮಾಣಕ್ಕೆ ಎಂಜಿನಿಯರಿಂಗ್ ಇಲಾಖೆಗಳು ಹೆಚ್ಚಿನ ಒತ್ತು ನೀಡಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ಶುಕ್ರವಾರ ಪಟ್ಟಣದ ಪ್ರವಾಸಿಮಂದಿರದಲ್ಲಿ ವಿಧಾನಸಭಾ ಕ್ಷೇತ್ರದ ಲೋಕೋಪಯೋಗಿ, ಜಿಪಂ, ಎತ್ತಿನಹೊಳೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಹೆಚ್ಚು ಮಳೆ ಬೀಳುವ ಮಲೆನಾಡಿನಲ್ಲಿ ರಸ್ತೆಗೆ ಬೀಳುವ ಮಳೆ ನೀರು ಸರಾಗವಾಗಿ ಚರಂಡಿಗೆ ಹರಿದುಹೋಗಲು ತೋಳ್ಚರಂಡಿ ನಿರ್ಮಾಣ ಅತ್ಯಗತ್ಯ. ಹೊಸ ರಸ್ತೆಗಳು ತೋಳ್ಚರಂಡಿ ಇಲ್ಲದೆ ವರ್ಷದಲ್ಲೇ ಹೊಂಡಗಳು ನಿರ್ಮಾಣವಾಗುತ್ತಿವೆ. ಆದ್ದರಿಂದ ಅನ್ಯ ಕೆಲಸಗಳನ್ನು ಬದಿಗೊತ್ತಿ ಒಳ ಚರಂಡಿ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಮಲೆನಾಡಿನಲ್ಲಿ ರಸ್ತೆಗಳ ಸಂರಕ್ಷಣೆಗಾಗಿ ಸರ್ಕಾರ ಮಳೆಗಾಲಕ್ಕೂ ಮುನ್ನ ಹಾಗೂ ಮಳೆಗಾಲದ ನಂತರ ಅನುದಾನ ನೀಡಬೇಕು ಎಂದರು.
ಮಳೆಗಾಲದಲ್ಲಿ ಕುಸಿಯಬಹುದಾದ ಭೂಪ್ರದೇಶಗಳನ್ನು ಗುರುತಿಸಿ ತಡೆಗೋಡೆ ನಿರ್ಮಿಸಲು ಡಿಪಿಆರ್ ರಚಿಸುವಂತೆ, ಅಗತ್ಯ ಸೇತುವೆಗಳ ನಿರ್ಮಾಣ ಪಟ್ಟಿ ಸಿದ್ಧಪಡಿಸಬೇಕು ಹಾಗೂ ತೀವ್ರ ದುಸ್ಥಿತಿಗೀಡಾಗಿರುವ ರಸ್ತೆಗಳ ಡಿಪಿಆರ್ ರಚಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಹಾಗೂ ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ತಡೆಗೋಡೆ ಮರುನಿರ್ಮಾಣಕ್ಕೆ ನೀಲನಕ್ಷೆ ಸಿದ್ಧಪಡಿಸಬೇಕು. ಅಲ್ಲದೆ ದುಸ್ಥಿತಿಗೀಡಾಗಿರುವ ಪಟ್ಟಣದ ಹೇಮಾವತಿ ಸೇತುವೆ ಸಂರಕ್ಷಣೆಗೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು. ಆಲೂರು ತಾಲೂಕಿನಲ್ಲಿ ೩೫ ಶಾಲೆಗಳು ದುರಸ್ತಿಗೆ ಒಳಗಾಗಿದ್ದರೆ ಸಕಲೇಶಪುರ ತಾಲೂಕಿನಲ್ಲೂ ನೂರಕ್ಕೂ ಅಧಿಕ ಶಾಲೆ, ಶೌಚಗೃಹಗಳು ದುರಸ್ಥಿಗೀಡಾಗಿವೆ. ಈ ಸಂಬಂಧ ಜಿಪಂ ಎಂಜಿನಿಯರ್ಗಳು ಸ್ಥಳಕ್ಕೆ ತೆರಳಿ ಡಿಪಿಆರ್ ಸಿದ್ಧಪಡಿಸಬೇಕು ಎಂದರು.ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪ, ಲೋಕೋಪಯೋಗಿ ಇಲಾಖೆ ಎಇಇ ರಜಾಕ್, ಎತ್ತಿನಹೊಳೆ ಇಲಾಖೆಯ ಎಇಇ ಪ್ರಮೋದ್ ಸೇರಿದಂತೆ ಆಲೂರು-ಕಟ್ಟಾಯ ಹಾಗೂ ಸಕಲೇಶಪುರ ತಾಲೂಕಿನ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.