ತಾಲೂಕಿನ ಸುರಪಗಟ್ಟಿ ಗ್ರಾಮದಲ್ಲಿ ಮಳೆರಾಯನ ಕೃಪೆಗಾಗಿ ಭೂದೇವಿ ಸೇವಾ ಸಮಿತಿ ವತಿಯಿಂದ ನಿರಂತರ ೫ ದಿನಗಳ ಕಾಲ ಗ್ರಾಮದ ಯಲ್ಲಮ್ಮ ದೇವಿಯ ಸೇವಕರಾದ ಜೋಗಮ್ಮನವರು ಹಾಗೂ ಮೈಲಾರಲಿಂಗನ ಸೇವಕರಾದ ಗೊರವಪ್ಪಜ್ಜನವರಿಂದ ಗುರ್ಜಿ ಆಡುವ ವಿಶಿಷ್ಟ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶಿಗ್ಗಾಂವಿ: ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬೆಳೆ ಹಾಳಾಗುತ್ತಿದ್ದು, ರೈತರು ಕಂಗಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಸುರಪಗಟ್ಟಿ ಗ್ರಾಮದಲ್ಲಿ ಮಳೆರಾಯನ ಕೃಪೆಗಾಗಿ ಭೂದೇವಿ ಸೇವಾ ಸಮಿತಿ ವತಿಯಿಂದ ನಿರಂತರ ೫ ದಿನಗಳ ಕಾಲ ಗ್ರಾಮದ ಯಲ್ಲಮ್ಮ ದೇವಿಯ ಸೇವಕರಾದ ಜೋಗಮ್ಮನವರು ಹಾಗೂ ಮೈಲಾರಲಿಂಗನ ಸೇವಕರಾದ ಗೊರವಪ್ಪಜ್ಜನವರಿಂದ ಗುರ್ಜಿ ಆಡುವ ವಿಶಿಷ್ಟ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನಂತರ ೫ ದಿನಗಳ ಕಾಲ ಗ್ರಾಮದ ವಿವಿಧ ದೇವರಿಗೆ ೧೦೧ ಕೊಡಗಳ ನೀರಿನ ಅಭಿಷೇಕ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಗ್ರಾಮದ ಮುಖಂಡ ವಲಮಪ್ಪ ಸೊರಟೂರ ಮಾತನಾಡಿ, ಈಗಾಗಲೇ ಮುಂಗಾರು ಪ್ರಾರಂಭವಾಗಿದೆ. ರೈತರು ಬಿತ್ತನೆ ಆರಂಭಿಸಿದ್ದಾರೆ. ವರುಣ ದೇವ ಮುನಿಸಿಕೊಂಡಿದ್ದಾನೆ. ಈಗ ಮಳೆರಾಯ ಬಾರದ ಹಿನ್ನೆಲೆಯಲ್ಲಿ ರೈತರು ಆತಂಕಕ್ಕೀಡಾಗಿದ್ದು, ದೇವರ ಮೊರೆ ಹೋಗುವ ಪರಿಸ್ಥಿತಿ ಬಂದಿದೆ ಎಂದರು.
ನಮ್ಮ ಪೂರ್ವಜರ ಕಾಲದಿಂದಲೂ ಮಳೆ ಬರದೇ ಇರುವ ಸಂದರ್ಭದಲ್ಲಿ ಗುರ್ಜಿ ಆಡುವ ಸಂಪ್ರದಾಯ ಇದೆ. ಹೀಗೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ, ಗ್ರಾಮಸ್ಥರೆಲ್ಲ ಸೇರಿ ಇಂತಹ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು.ಈ ಸಂದರ್ಭದಲ್ಲಿ ಭೂದೇವಿ ಸೇವಾ ಸಮಿತಿಯ ಅಧ್ಯಕ್ಷ ಸುಭಾಷ್ ಸಂಕರಿಗಾರ್, ಸದಸ್ಯರಾದ ಸಿದ್ದಪ್ಪ ತೀರ್ಥ, ಹನುಮಂತಪ್ಪ ಸ್ವರಟೂರ, ಮಲ್ಲಪ್ಪ ನೀಲ್ಗುಲಿ, ಕರಿಬಸಪ್ಪ ಹಿರಗಮ್ಮನವರ, ಸಿದ್ದಪ್ಪ ಚಿಕ್ಕಬೆಂಡಿಗೇರಿ, ವಿರೂಪಾಕ್ಷಪ್ಪ ತೀರ್ಥ ಸೇರಿದಂತೆ ಗ್ರಾಮದ ಮುಖಂಡರು, ಭಕ್ತರು ಉಪಸ್ಥಿತರಿದ್ದರು.