ಕಾರ್ಯಕಾರಿಣಿ ಸದಸ್ಯರು ಎಂದರೆ ಕೇವಲ ಜವಾಬ್ದಾರಿ ಹೊಂದಿರುವ ನಾಯಕರಷ್ಟೇ ಅಲ್ಲ, ಅವರು ಸ್ವತಃ ಫೀಲ್ಡ್ಗಿಳಿದು ಕೆಲಸ ಮಾಡಬೇಕು.
ಗದಗ: ಚುನಾವಣಾ ಕಾರ್ಯತಂತ್ರ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಕೇವಲ ಬಿಎಲ್ಎಗಳ ಮೇಲೆ ನಂಬಿಕೆ ಇಟ್ಟು ಸುಮ್ಮನಿರಬಾರದು. ವಾರ್ಡ್ ಮಟ್ಟದ ಮೂಲ ಕಾರ್ಯಕರ್ತರು, ಶಕ್ತಿ ಕೇಂದ್ರದ ಪ್ರಮುಖರು ಹಾಗೂ ಕಾರ್ಯಾಕಾರಿಣಿ ಜವಾಬ್ದಾರಿಯುತ ನಾಯಕರು ನೇರವಾಗಿ ಕಣಕ್ಕಿಳಿದು ಕೆಲಸ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ವಿರೋಧ ಪಕ್ಷವಾದ ಕಾಂಗ್ರೆಸ್ನವರು ಕೇವಲ ಬಿಎಲ್ಒಗಳ ಮೇಲೆ ಅವಲಂಬಿತರಾಗದೇ, ಹೆಚ್ಚುವರಿಯಾಗಿ ಹತ್ತತ್ತು ಜನರನ್ನು ನಿಯೋಜಿಸಿ ಕೆಲಸ ಮಾಡುತ್ತಿದ್ದಾರೆ. ಆದರೆ ನಮ್ಮಲ್ಲಿ ಕೇವಲ ಸಭೆಗಳನ್ನು ಮಾಡುವುದಕ್ಕೆ ಸೀಮಿತವಾಗಬಾರದು. ಸಭೆಗೆ ಬರುವ ನಾಯಕರು ಫೀಲ್ಡ್ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಕಾರ್ಯಕಾರಿಣಿ ಸದಸ್ಯರು ಎಂದರೆ ಕೇವಲ ಜವಾಬ್ದಾರಿ ಹೊಂದಿರುವ ನಾಯಕರಷ್ಟೇ ಅಲ್ಲ, ಅವರು ಸ್ವತಃ ಫೀಲ್ಡ್ಗಿಳಿದು ಕೆಲಸ ಮಾಡಬೇಕು. ಫಾರ್ಮ್ಗಳನ್ನು ತುಂಬುವುದು, ತಂದೆ- ತಾಯಿ ಅಥವಾ ಕುಟುಂಬದ ಸದಸ್ಯರ ಹೆಸರುಗಳನ್ನು ಸೇರ್ಪಡೆ ಮಾಡುವುದು ಹಾಗೂ ತಿದ್ದುಪಡಿಗಳ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ನಮ್ಮ ಕಡೆಯ ಮತದಾರರು ಬೇರೆ ಕಡೆ ವಲಸೆ ಹೋಗಿದ್ದರೂ ಅಥವಾ ಬೆಂಗಳೂರಿನಲ್ಲೇ ಇದ್ದರೂ ಅವರ ಮತಗಳು ಪಟ್ಟಿಯಿಂದ ಕೈತಪ್ಪದಂತೆ ನೋಡಿಕೊಳ್ಳಬೇಕು ಎಂದರು.
ಮತದಾರರ ಮಾಹಿತಿ ಹಾಗೂ ದಾಖಲೆಗಳನ್ನು ಸ್ಥಳದಲ್ಲೇ ಡಿಕ್ಲೇರ್ ಮಾಡಿಸಿ, ಸ್ಕ್ಯಾನ್ ಮಾಡಿಸುವ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಕೇವಲ ಬಿಎಲ್ಎ 2ಗಳ ಮೇಲಿನ ಅವಲಂಬನೆಯನ್ನು ಬಿಟ್ಟು, ನೀವೆಲ್ಲರೂ ವಾರ್ಡ್ ಮಟ್ಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ಮಾತ್ರ ನಿರೀಕ್ಷಿತ ಯಶಸ್ಸು ಸಾಧ್ಯ ಎಂದರು.ಈ ಸಂಧರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಶಾಸಕರಾದ ಸಿ.ಸಿ. ಪಾಟೀಲ್, ಡಾ. ಚಂದ್ರು ಲಮಾಣಿ, ಮಾಜಿ ಸಚಿವರಾದ ಮುರುಗೇಶ ನಿರಾಣಿ, ವಿಧಾನಪರಿಷಥ್ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಶಾಸಕ ಕಳಕಪ್ಪ ಬಂಡಿ ಸೇರಿದಂತೆ ಪಕ್ಷದ ಪ್ರಮುಖರು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.ಮಾಧ್ಯಮದವರು ದಯವಿಟ್ಟು ಹೊರಗೆ ಇರಿ...
ಶನಿವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಕಾರಿಣಿಗೆ ಮಾಧ್ಯಮದವರು ಪಾಲ್ಗೊಳ್ಳಬೇಕು ಎಂದು ಪಕ್ಷದ ಪದಾಧಿಕಾರಿಗಳು ಕರೆ ಮಾಡಿ ಆಹ್ವಾನ ನೀಡಿದ್ದರು. ಪಕ್ಷದ ಕಾರ್ಯಕಾರಿಣಿಗೆ ಮಾಧ್ಯಮದವರಿಗೆ ಅವಕಾಶವಿರುವುದಿಲ್ಲ ಎಂದು ಮಾಧ್ಯಮ ಪ್ರತಿನಿಧಿಗಳೇ ಹೇಳಿದರೂ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಎಲ್ಲರನ್ನೂ ಸಭೆಗೆ ಕರೆದುಕೊಂಡು ಹೋಗಿ ಕೂರಿಸಿದರು. ಆದರೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಲು ಪ್ರಾರಂಭಿಸುತ್ತಿದ್ದಂತೆ, ಮಾಧ್ಯಮದವರು ಹೊರಗೆ ಇರಿ ಎಂದು ಬಿಜೆಪಿಯ ಎಲ್ಲ ಪದಾಧಿಕಾರಿಗಳ ಸಮ್ಮುಖದಲ್ಲಿಯೇ ಸಭೆಯಿಂದ ಹೊರಗೆ ಕಳಿಸಿದ್ದು ತೀವ್ರ ಮುಜುಗರ ತರುವಂತಾಯಿತು.