ಕನ್ನಡಪ್ರಭ ವಾರ್ತೆ ವಿಜಯಪುರ

ಆರೋಗ್ಯಧಾಮ ಹಾರ್ಟ್ ಅಂಡ್ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಯಶಸ್ವಿ ಲೀಡ್‌ಲೆಸ್ ಪೇಸ್‌ ಮೇಕ‌ರ್‌ ಅಳವಡಿಕೆ ಮಾಡಲಾಗಿದ್ದು, ವಿಜಯಪುರ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸಲಾಗಿದೆ ಎಂದು ಆರೋಗ್ಯಧಾಮ ಅಸ್ಪತ್ರೆ ಹೃದಯ ತಜ್ಞ ಡಾ.ಶಂಕರಗೌಡ ಪಾಟೀಲ ಹೇಳಿದರು.

ನಗರದ ಆರೋಗ್ಯಧಾಮ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೃದಯದ ತೀವ್ರ ಸಮಸ್ಯೆಯಿಂದ ಬಳಲುತ್ತಿದ್ದ 70 ವರ್ಷದ ಮಹಿಳಾ ರೋಗಿಯೊಬ್ಬರಿಗೆ ಜಿಲ್ಲೆಯಲ್ಲಿ ಮೊದಲ ಬಾರಿಗೆ ಯಾವುದೇ ವೈರ್‌ ಇಲ್ಲದ ಲೀಡ್‌ಲೆಸ್ ಪೇಸ್‌ ಮೇಕರ್‌ ಚಿಕಿತ್ಸೆಯನ್ನು ಯಶಸ್ವಿಯಾಗಿ ಅಳವಡಿಸುವ ಮೂಲಕ ಆರೋಗ್ಯಧಾಮದ ತಜ್ಞ ವೈದ್ಯರ ತಂಡ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಬೆಂಗಳೂರು, ಹೈದರಾಬಾದ್ ಅಥವಾ ಮುಂಬೈನಂತಹ ಮೆಟ್ರೋ ನಗರಗಳಿಗೆ ಹೋಗಬೇಕಾಗಿದ್ದ ಅನಿವಾರ್ಯತೆ ತಪ್ಪಿಸಿ, ಈಗ ವಿಜಯಪುರದಲ್ಲೇ ಈ ಸೌಲಭ್ಯ ಲಭ್ಯವಾಗುವಂತೆ ಮಾಡಲಾಗಿದೆ ಎಂದರು.ಹೃದಯದ ಬಡಿತ ತೀರಾ ಕಡಿಮೆಯಾದಾಗ (ಬ್ರಾಡಿಕಾರ್ಡಿಯಾ) ಹೃದಯದ ಬಡಿತ ನಿಯಂತ್ರಣಕ್ಕೆ ತರಲು ಪೇಸ್‌ಮೇಕರ್‌ ಸಾಧನ ಅಳವಡಿಸಲಾಗುತ್ತದೆ. ಇದು ಕೇವಲ ಒಂದು ಸಣ್ಣ ವಿಟಮಿನ್ ಮಾತ್ರೆ ಗಾತ್ರದಲ್ಲಿ ಇರುತ್ತದೆ. ಇದರಲ್ಲಿ ಯಾವುದೇ ವೈರ್‌ ಇರುವುದಿಲ್ಲ. ಇದನ್ನು ತೊಡೆಯ ನರಗಳ ಮೂಲಕ ನೇರವಾಗಿ ಹೃದಯದ ಒಳಗೆ ಅಳವಡಿಸಲಾಗುತ್ತದೆ. ಹೊರಗಿನಿಂದ ಯಾವುದೇ ಶಸ್ತ್ರಚಿಕಿತ್ಸೆಯ ಗಾಯದ ಗುರುತುಗಳು ಕಾಣಿಸುವುದಿಲ್ಲ. ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ವೈರ್‌ ಮುಕ್ತವಾಗಿ ಹಾಗೂ ಇನ್ಫೆಕ್ಷನ್ ಭೀತಿ ಇಲ್ಲದೆ ಮತ್ತು ಚರ್ಮದ ಮೇಲೆ ಗಾಯ ಇಲ್ಲದಂತೆ ಚಿಕಿತ್ಸೆ ಕೊಡುವ ವಿಧಾನವಾಗಿದೆ ಎಂದು ಹೇಳಿದರು.

ಅತ್ಯಾಧುನಿಕ ಸೌಲಭ್ಯಗಳು:

ಆರೋಗ್ಯಧಾಮ ಆಸ್ಪತ್ರೆಯಲ್ಲಿ ಇದೀಗ ಬೈಪಾಸ್ ಸರ್ಜರಿ, ವಾಲ್ವ್ ಆಪರೇಷನ್, ಅತೀ ವೇಗದ ಹೃದಯ ಬಡಿತಕ್ಕೆ ಲೇಸರ್ ಚಿಕಿತ್ಸೆ, ಚಿಕ್ಕಮಕ್ಕಳ ಹೃದಯರಂಧ್ರ ಚಿಕಿತ್ಸೆ ಹಾಗೂ ಹೈಪರಟ್ರೋಫಿಕ್ ಅಬ್ಸಟ್ರೆಕ್ಟಿವ್ ಕಾರ್ಡಿಯೋ ಮಯೋಪತಿ ರೋಗಕ್ಕೆ ಐಸಿಡಿ ಚಿಕಿತ್ಸೆಯನ್ನು ಉತ್ತರ ಕರ್ನಾಟಕದಲ್ಲೇ ಮೊದಬಾರಿಗೆ ಆರಂಭಿಸಲಾಗಿದೆ ಎಂದರು.


ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆ ವೈದ್ಯರುಗಳಾದ ಡಾ.ಅಭಿಜಿತ ಕುಲಕರ್ಣಿ, ಡಾ.ಮಡಿವಾಳಸ್ವಾಮಿ ಢವಳಗಿಮಠ, ಡಾ.ಗೌತಮ ವಗ್ಗರ, ಆಡಳಿತಾಧಿಕಾರಿ ಸಿದ್ದಲಿಂಗ ಬರಶೆಟ್ಟಿ ಹಾಗೂ ಸಿಬ್ಬಂದಿ ಇದ್ದರು.