ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಜೀವನದಲ್ಲಿ ಯಶಸ್ಸು ಸಾಧಿಸಲು ಹಲವಾರು ವಿಫಲತೆಗಳನ್ನು ಎದುರಿಸಬೇಕಾಗುತ್ತದೆ. ಕಷ್ಟಕರ ಸಮಯಕ್ಕೆ ಸರಿಯಾದ ಯೋಜನೆಯನ್ನು ವಿದ್ಯಾರ್ಥಿಗಳು ಮಾಡಿಕೊಂಡರೆ ಯಶಸ್ಸು ದೂರವಿಲ್ಲ. ಮನುಷ್ಯ ಜೀವನದಲ್ಲಿ ಆಲಸ್ಯವನ್ನು ತೆಗೆದು ಹಾಕಿದರೆ ಸಾಧನೆಗೆ ದಾರಿಯಾಗುತ್ತದೆ ಎಂದು ಮಲೇಶಿಯಾದ ಯುನಿವರ್ಸಿಟಿ ಆಫ್ ಸೈನ್ಸ್ ಡಾ.ಕೂಯಾಂಗ್ ಹೇಳಿದರು.ನಗರದ ಸಿಕ್ಯಾಬ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಎರಡು ದಿನಗಳ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಜೀವನದಲ್ಲಿ ಏರುಪೇರುಗಳು ಸಹಜವಾದ್ದರಿಂದ ಒತ್ತಡ ಕಡಿಮೆ ಮಾಡಿಕೊಂಡು, ತಪ್ಪುಗಳನ್ನು ಜೀವನದ ಪಾಠಗಳಾಗಿ ಪರಿವರ್ತಿಸಿಕೊಂಡಾಗ ಮಾತ್ರ ಭವಿಷ್ಯ ಪ್ರಕಾಶಮಾನವಾಗುತ್ತದೆ ಎಂದರು.
ಯಶವಂತ ಮಾತನಾಡಿ, ನವೀನ ಆವಿಷ್ಕಾರ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದೆ. ಎಲೆಕ್ಟ್ರಾನಿಕ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗಗಳ ಕ್ರಿಯಾತ್ಮಕ ತಂಡವನ್ನು ಸ್ಥಾಪಿಸಲಾಗಿದೆ. ತಂತ್ರಜ್ಞಾನವನ್ನು ಬಳಸಿ ಡ್ರೋನ್ ನಿರ್ವಹಣೆಯನ್ನು ಮತ್ತಷ್ಟು ನಿಖರಗೊಳಿಸುವುದು ಇದರ ಉದ್ದೇಶ. ಸ್ಟಾರ್ಟ್ಅಪ್ಗಳೊಂದಿಗೆ ಸಹಭಾಗಿತ್ವದಲ್ಲಿ ನಡೆಯುವ ಸಾಧ್ಯತೆ ಹೆಚ್ಚು. ಇದು ಉದ್ಯಮಶೀಲತೆ, ಹೊಸ ತಂತ್ರಜ್ಞಾನ ಮತ್ತು ಯುವಕರಿಗೆ ಉದ್ಯೋಗಾವಕಾಶಗಳನ್ನು ನೀಡುವ ದಾರಿಯನ್ನು ತೆರೆಯಲಿವೆ ಎಂದು ಹೇಳಿದರು.ಡಾ.ಶೋಭಾ ಮಾತನಾಡಿ, ಭಾರತದಲ್ಲಿ 1950ರಲ್ಲಿ ಆಹಾರವನ್ನು 50 ಮಿಲಿಯನ್ ಟನ್ ಬೆಳೆಯಲಾಗುತ್ತಿತ್ತು. ಈಗ 350 ಮಿಲಿಯನ್ ಟನ್ ನಷ್ಟು ಆಹಾರ ಬೆಳೆಯಲಾಗುತ್ತಿದೆ. ಈಗ ಹೈಬ್ರಿಡ್ ತಳಿಗಳನ್ನು ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಮನುಷ್ಯ ಕುಲಕ್ಕೆ ತೊಂದರೆಯಾಗುತ್ತದೆ. ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೃಷಿಯನ್ನು ಮಾಡಬೇಕು ಮತ್ತು ಕಾಲಕಾಲಕ್ಕೆ ಬೆಳಗಳಿಗೆ ಮಣ್ಣು ಪರೀಕ್ಷೆ ನೀರು ಔಷಧೋಪಚಾರ ಮಾಡಬೇಕು ಹಾಗೂ ಡ್ರೋನ್ ಬಳಸಿ ಬೆಳೆಗಳಿಗೆ ಔಷದ ಸಿಂಪಡಣೆ ಮಾಡಬೇಕು ಎಂದರು.
ಡಾ.ಸುಜಾ ಪುಣೇಕರ ಮಾತನಾಡಿ, ಎಲ್ಲಾ ದೇಶಗಳಂತೆ ಭಾರತವು ಈಗ ತಂತ್ರಜ್ಞಾನದಲ್ಲಿ ಮುಂದುವರೆದಿದೆ ಎಂದರು.ಸಂಸ್ಥೆಯ ನಿರ್ದೇಶಕ ಸಲಾವುದ್ದೀನ್ ಪುಣೇಕರ, ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಅಬ್ಬಾಸ್ಅಲಿ, ಡಾ.ಪ್ರಶಾಂತ ಮೇತ್ರಿ, ಡಾ.ಅಬ್ಬಾಸ್ಅಲಿ ದುಂಡಸಿ, ಡಾ.ಅಸ್ಲಂ ಕರ್ಜಗಿ, ಡಾ.ರವಿ ಹೊಸಮನಿ, ಪ್ರೊ.ಸಚಿನ ಪಾಂಡೆ, ಡಾ.ಮಹಮ್ಮದ್ ಚೌಧರಿ, ಪ್ರೊ.ಶಿವರಾಮ, ಪ್ರೊ.ಸಾದಿಕ ಮುಜಾವರ, ವಸಿಂ ನಿಡಗುಂದಿ, ಬೇನಜೀರ್ ಮುಂತೆಸಿರ್, ಪ್ರೊ.ಎಂ.ಆರ್.ಚಿಕ್ಕೊಂಡ ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.