ಪಿ.ಲಂಕೇಶರ ಗುಣಮುಖ ನಾಟಕವು ಸಮಕಾಲೀನತೆಯ ವಿಷಯದ ಮೇಲೆ ಕೇಂದ್ರೀಕರಿಸಿದೆ. ಬದುಕು ಮತ್ತು ಬರಹಗಳು ಒಂದೇ ರೀತಿಯಾಗಿದ್ದಾಗ ಬರಹವು ಶ್ರೇಷ್ಠತೆಯನ್ನು ಪಡೆಯುತ್ತದೆ. ಲಂಕೇಶ್ ಅವರು ತಮ್ಮ ಗುಣಮುಖ ನಾಟಕದಲ್ಲಿ ಚಿತ್ರಿಸಿರುವ ಪಾತ್ರಗಳನ್ನು ಅವಲೋಕಿಸಿದಾಗ ಶೋಷಿತರ ಧ್ವನಿಯನ್ನು ಯಾವ ರೀತಿಯಲ್ಲಿ ಅಡಗಿಸಲಾಗಿತ್ತು ಎಂಬುದರ ಅರಿವಾಗುತ್ತದೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಉಪನ್ಯಾಸ ಮಾಲಿಕೆಯಲ್ಲಿ ಪಿ.ಲಂಕೇಶ್ ಅವರ ಗುಣಮುಖ ನಾಟಕ ಮತ್ತು ಸಮಕಾಲೀನ ಪ್ರಸ್ತುತತೆ ಕುರಿತು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ.ಮೈಸೂರು ಉಮೇಶ್ ಉಪನ್ಯಾಸ ನೀಡಿದರು.ಪಿ.ಲಂಕೇಶರ ಗುಣಮುಖ ನಾಟಕವು ಸಮಕಾಲೀನತೆಯ ವಿಷಯದ ಮೇಲೆ ಕೇಂದ್ರೀಕರಿಸಿದೆ. ಬದುಕು ಮತ್ತು ಬರಹಗಳು ಒಂದೇ ರೀತಿಯಾಗಿದ್ದಾಗ ಬರಹವು ಶ್ರೇಷ್ಠತೆಯನ್ನು ಪಡೆಯುತ್ತದೆ. ಲಂಕೇಶ್ ಅವರು ತಮ್ಮ ಗುಣಮುಖ ನಾಟಕದಲ್ಲಿ ಚಿತ್ರಿಸಿರುವ ಪಾತ್ರಗಳನ್ನು ಅವಲೋಕಿಸಿದಾಗ ಶೋಷಿತರ ಧ್ವನಿಯನ್ನು ಯಾವ ರೀತಿಯಲ್ಲಿ ಅಡಗಿಸಲಾಗಿತ್ತು ಎಂಬುದರ ಅರಿವಾಗುತ್ತದೆ ಎಂದರು.
ಸ್ವಾತಂತ್ರ್ಯದ ಮೊದಲು ಮತ್ತು ಸ್ವಾತಂತ್ರ್ಯಾ ನಂತರದ ಸ್ಥಿತ್ಯಂತರಗಳನ್ನು ಜನರ ಮುಂದಿಡುವ ಪ್ರಯತ್ನದಲ್ಲಿ ಲಂಕೇಶ್ಅವರ ಬರವಣಿಗೆಯು ಪ್ರಮುಖವಾಗಿತ್ತು ಎಂದು ಡಾ.ಉಮೇಶ್ ಅಭಿಪ್ರಾಯಪಟ್ಟರು.ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಪ್ರೊ.ಅನುರಾಧಾ ಮಾತನಾಡಿ, ಶಿಕ್ಷಣವು ಇಂದು ಬಹುಮುಖಿಯಾಗಿದೆ. ಭಾಷೆಯ ಸಮೃದ್ಧತೆಯನ್ನು ಕಾಣಬೇಕಾದರೆ ಪ್ರಸ್ತುತ ಸಾಮಾಜಿಕ ಜಾಲತಾಣಗಳ ಭಾಷೆಯಿಂದ ಆಗುವುದಿಲ್ಲ, ಮಹಾನ್ ಲೇಖಕರ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ವಿದ್ಯಾರ್ಥಿಗಳು ಇಟ್ಟುಕೊಳ್ಳಬೇಕು ಎಂದರು.
ಓದುವುದನ್ನು ಹವ್ಯಾಸವಾಗಿಟ್ಟುಕೊಂಡರೆ ಮಾತ್ರ ಜ್ಞಾನದ ವಿಕಾಸವಾಗುತ್ತದೆ. ಎಲ್ಲವೂ ಅಂಗೈಯಲ್ಲಿಯೇ ಸಿಗುತ್ತದೆ ಎಂಬುದು ತಪ್ಪು ಅಭಿಪ್ರಾಯ. ಮೊಬೈಲ್ ನಲ್ಲಿನ ಸಂದೇಶಗಳನ್ನು ಓದುವ ನಮ್ಮ ಯುವ ಪೀಳಿಗೆಗಳು ಪುಸ್ತಕಗಳನ್ನು ಓದುತ್ತಿಲ್ಲ. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕಾಲೇಜಿನ ವಿದ್ಯಾರ್ಥಿಗಳ ಬಳಿಗೆ ಬಂದು ಪುಸ್ತಕಗಳನ್ನು ಪರಿಚಯಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಕಾರ್ಯದರ್ಶಿ, ಲೇಖಕಿ ಎಚ್.ಆರ್.ಸುಜಾತಾ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮ ಸಂಘಟಕರಾದ ಡಾ.ಪ್ರತಿಮಾ ಔಪಚಾರಿಕವಾಗಿ ಪರಿಚಯಿಸಿದ್ದಲ್ಲದೆ ಕಾಲೇಜಿನಲ್ಲಿ ಕನ್ನಡ ವಿಭಾಗವು ಸದ್ದಿಲ್ಲದೆ ಮಾಡುತ್ತಿರುವ ಸಾಹಿತಿಗಳ ಪುಸ್ತಕ ಪರಿಚಯ ಕಾರ್ಯಕ್ರಮದ ವಿವರಣೆಗಳನ್ನು ಒದಗಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಸಿ.ಎಸ್. ಕೆಂಡಗಣ್ಣೇಗೌಡ, ಐಕ್ಯೂಎಸಿ ಸಂಚಾಲಕ ಮಧು.ಜಿ., ಮಂಡ್ಯದ ಚಕೋರ ಜಿಲ್ಲಾ ಸಂಯೋಜಕಿ ಕೀರ್ತಿ ಬೈಂದೂರು ಉಪಸ್ಥಿತರಿದ್ದರು.