ಗಂಗಾವತಿ: ನಗರದ ಎಚ್.ಆರ್. ಸರೋಜಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜು, ಗಂಗಾವತಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಗಂಗಾವತಿ ಸಂಯುಕ್ತಾಶ್ರಯದಲ್ಲಿ ಮಾದಕ ವ್ಯಸನ ಹಾಗೂ ಪೋಕ್ಸೋ ಕಾಯ್ದೆ ಕುರಿತು ಕಾನೂನು ಅರಿವು- ನೆರವು ಕಾರ್ಯಕ್ರಮ ಜರುಗಿತು.

1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ರೋಶನಿ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿನಿಯರು ತಮ್ಮ ಹಕ್ಕುಗಳ ಜತೆಗೆ ಕರ್ತವ್ಯ ಅರಿತು ಸೈಬರ್ ಸುರಕ್ಷತೆ, ಮಹಿಳಾ ರಕ್ಷಣೆ, ಬಾಲ್ಯ ವಿವಾಹ ನಿಷೇಧ, ಪೋಸ್ಕೋ,ಶಿಕ್ಷಣದ ಹಕ್ಕು ಇತರೆ ಪ್ರಮುಖ ಕಾನೂನು ಕುರಿತು ಕನಿಷ್ಠ ಮಾಹಿತಿ ತಿಳಿದುಕೊಂಡಿರಬೇಕು ಹಾಗೆಯೇ ಕಾನೂನಿನ ಅರಿವು ಪ್ರತಿಯೊಬ್ಬರ ಹಕ್ಕು ಕಾನೂನಿನ ಪಾಲನೆ ಪ್ರತಿಯೊಬ್ಬರ ಕರ್ತವ್ಯ ಆಗಿರಬೇಕೆಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ.ರವಿ.ಎನ್.ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ಸಮಾಜದಲ್ಲಿ ಶಿಕ್ಷಣದ ಜತೆಗೆ ಕಾನೂನಿನ ಮೂಲಭೂತ ಅರಿವು ಹೊಂದಿರುವುದು ಅತ್ಯಂತ ಅಗತ್ಯವಾಗಿದೆ. ಅರಿವು ಆತ್ಮವಿಶ್ವಾಸ ಬೆಳೆಸುತ್ತದೆ. ಆತ್ಮ ವಿಶ್ವಾಸವೇ ಉತ್ತಮ ಭವಿಷ್ಯ ರೂಪಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಪವಿತ್ರ ಮುದಗಲ್ ವಕೀಲರು ಮಾತನಾಡಿ, ಮಕ್ಕಳನ್ನು ಲೈಂಗಿಕ ದೌರ್ಜನ್ಯ,ಕಿರುಕುಳ ಮತ್ತು ಶೋಷಣೆಯಿಂದ ರಕ್ಷಿಸಲು ಭಾರತ ಸರ್ಕಾರ 2012ರಲ್ಲಿ ಈ ವಿಶೇಷ ಕಾಯ್ದೆ ಜಾರಿಗೆ ತಂದಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿಯೊಬ್ಬರೂ ಈ ಕಾಯ್ದೆಯ ಪ್ರಕಾರ ಮಕ್ಕಳು ಎಂದು ಪರಿಗಣಿಸಲ್ಪಡುತ್ತಾರೆ. ಪೋಕ್ಸೋ ಕಾಯ್ದೆ ಕೇವಲ ಒಂದು ಕಾನೂನು ಅಲ್ಲ, ಅದು ನಿಮ್ಮ ಸುರಕ್ಷತೆ, ಗೌರವ ಮತ್ತು ಭವಿಷ್ಯ ಕಾಪಾಡುವ ರಕ್ಷಣಾ ಕವಚವಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಕೀಲ ಎಚ್.ಎಂ.ಮಂಜುನಾಥ್ ಮಾತನಾಡಿ, ಕಾನೂನಿನ ಅರಿವು ಹೊಂದಿ, ಜಾಗೃತರಾಗಿರಿ, ನಿಮ್ಮ ಹಕ್ಕು ತಿಳಿದುಕೊಳ್ಳಿ ಹಾಗೂ ಇತರರಿಗೂ ಅರಿವು ಮೂಡಿಸಿ. ಸುರಕ್ಷಿತ ಸಮಾಜ ನಿರ್ಮಾಣದಲ್ಲಿ ಪ್ರತಿಯೊಬ್ಬರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ಸಂಸ್ಥೆ ಉಪಾಧ್ಯಕ್ಷ ಕೆ.ಚನ್ನಬಸಯ್ಯಸ್ವಾಮಿ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಶರಣಬಸಪ್ಪ ನಾಯಕ್, ಪ್ರಕಾಶ್ ಎಂ. ಕುಸುಬಿ, ವಕೀಲ ಉಮಾ, ಕಾಲೇಜಿನ ಉಪನ್ಯಾಸಕ ಕೆ.ಎಚ್. ಕೊಳ್ಳನವರ, ಹನಮಂತ ವಡ್ಡರ, ಭೀಮೇಶ್, ಸುವರ್ಣಲತಾ, ಬಸವರಾಜ ಉಪಸ್ಥಿತರಿದ್ದರು.