ಹಾವೇರಿ: ಈ ಕಾರ್ಯಾಗಾರ ನಿಮ್ಮ ವೃತ್ತಿ ಜೀವನಕ್ಕೆ ತುಂಬಾ ಅನುಕೂಲವಾಗಲಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿರಾದಾರ ದೇವಿಂದ್ರಪ್ಪಾ ಎನ್. ಅವರು ಹೇಳಿದರು.
ನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಬಾಲ ರಕ್ಷಾಭಾರತ ಎನ್.ಜಿ.ಒ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮಕ್ಕಳ ಯೋಜನೆಗಳು ಹಾಗೂ ಮಕ್ಕಳ ಕಾಯ್ದೆ ಮತ್ತು ಹಕ್ಕುಗಳು, ಪೋಕ್ಸೋ ಕಾಯ್ದೆ, ಮಾನವ ಕಳ್ಳ ಸಾಗಾಣೆ ಕುರಿತು ಹಾಗೂ ನ್ಯಾಯ ಕೀ ಜಾಗೃತಿ, ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ, ಬಾಲ್ಯವಿವಾಹ ನಿಷೇಧ, ವರದಕ್ಷಿಣೆ ನಿಷೇಧ ಕಾಯ್ದೆ, ಮಾದಕ ವಸ್ತುಗಳ ಅಕ್ರಮ ಸಾಗಾಣಿಕೆ, ಕಾಯಂ ಜನತಾ ನ್ಯಾಯಾಲಯ ಕುರಿತು ಆಯೋಜಿಸಲಾದ ಒಂದು ದಿನದ ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ತಾವು ತಿಳಿದುಕೊಂಡ ಕಾನೂನು ಮಾಹಿತಿಯನ್ನು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಿಳಿಸುವುದರಿಂದ ಎಲ್ಲರೂ ಕಾನೂನು ಸಾಕ್ಷರತೆ ಹೊಂದುತ್ತಾರೆ. ಇದರಿಂದ ನ್ಯಾಯಾಲಯದಲ್ಲಿ ದಾಖಲಾಗುವ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತವೆ. ನಿಮ್ಮ ಸಂಬಂಧಿಕರ ಪ್ರಕರಣಗಳೇನಾದರೂ ಇದ್ದಲ್ಲಿ ರಾಜೀ ಸಂಧಾನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಹಾಯಕ ಕಾನೂನು ನೆರವು ಅಭಿರಕ್ಷಣಾ ವಕೀಲರಾದ ಎನ್.ಎನ್. ಡಿಳ್ಳೆಪ್ಪನವರ ಪೋಕ್ಸೋ, ಮಕ್ಕಳ ಹಕ್ಕುಗಳ ಕಾಯ್ದೆ, ಮಾನವ ಕಳ್ಳ ಸಾಗಾಣಿಕೆ, ನ್ಯಾಯ ಕೀ ಜಾಗೃತಿ ಕುರಿತು, ವಿ.ಎಸ್.ರೇವದಿಹಾಳ ಬಾಲ್ಯ ವಿವಾಹ ನಿಷೇಧ, ವರದಕ್ಷಿಣೆ ನಿಷೇಧ ಕಾಯ್ದೆ, ಮಾದಕ ವಸ್ತುಗಳ ನಿಷೇಧ ಮತ್ತು ಅಕ್ರಮ ಸಾಗಾಣಿಕೆ ಹಾಗೂ ಸುರಕ್ಷತೆ, ಪರಿಸರ ಜಾಗೃತಿ ಕುರಿತು, ಬಾಲ ರಕ್ಷಾ ಭಾರತ ಎನ್.ಜಿ.ಒ ಸಹಾಯಕ ಪ್ರಬಂಧಕರಾದ ಎನ್.ಎಂ.ದೇವಿಂದ್ರಪ್ಪ ಅವರು ಮಕ್ಕಳ ಯೋಜನೆಗಳ ಕುರಿತು, ಪೊಲೀಸ್ ಇಲಾಖೆಯ ಮಲ್ಲಪ್ಪ ಜಾಲಗಾರ ಅವರು ಮಕ್ಕಳ ಕಾಯ್ದೆ ಹಾಗೂ ಮಕ್ಕಳ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು.ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಶೈಲಜಾ ಎಚ್.ವಿ., ಕಾರ್ಯಕ್ರಮ ವಿಭಾಗದ ಮುಖ್ಯಸ್ಥ ಚಂದ್ರಶೇಖರ ಎನ್.ಎಂ. ಉಪ ಪೊಲೀಸ್ ಅಧೀಕ್ಷಕ ಗಿರಿಮಲ್ಲ ತಳಕಟ್ಟಿ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಚ್.ಸಿ. ಸಿದ್ದನಗೌಡ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ರೇವತಿ ಹೊಸಮಠ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಯಶ್ರೀ ಪಾಟೀಲ, ಸಹಾಯಕ ಪ್ರಬಂಧಕ ದಿನಕರ್ ಇತರರು ಉಪಸ್ಥಿತರಿದ್ದರು.